ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ
Team Udayavani, Oct 1, 2022, 7:14 PM IST
ತೀರ್ಥಹಳ್ಳಿ: ವಿದೇಶದಿಂದ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕವಾಗಿದ್ದು ಈ ಕೂಡಲೇ ಅಡಕೆ ಆಮದನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಸದಸ್ಯರೂ ಆಗಿರುವ ಕಾಂಗ್ರೆಸ್ ಮುಖಂಡ ಕಡ್ತೂರು ದಿನೇಶ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಕೆ ಕೊಯ್ಲು ಆರಂಭವಾಗುತ್ತಿರುವ ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರ 17 ಸಾವಿರ ಟನ್ ಹಸಿ ಅಡಕೆಯನ್ನು ಭೂತಾನ್ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಕ್ರಮ ರೈತ ವಿರೋಧಿ ಯಾಗಿದ್ದು ಖಂಡನೀಯವಾಗಿದೆ.
ಸರ್ಕಾರದ ಈ ಕ್ರಮದಿಂದ ಅಡಕೆ ಬೆಳೆಗಾರ ಸಮುದಾಯವೇ ದಿಗ್ಬ್ರಮೆಗೊಳ್ಳುವಂತಾಗಿದೆ.
ಕ್ಯಾಮ್ಕೊ ಮ್ಯಾಮ್ಕೋಸ್ ಸೇರಿದಂತೆ ಎಲ್ಲಾ ಅಡಕೆ ಬೆಳೆಗೆ ಸಂಬಂಧಿಸಿದ ಸಂಘಟನೆಗಳ ಮುಖ್ಯಸ್ಥರು ರಾಜಕೀಯವನ್ನು ತೊರೆದು ರೈತರ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಾರುಕಟ್ಟೆಯಲ್ಲಿ ಒಂದೇ ದಿನ ಅಡಕೆ ಧಾರಣೆ 10 ಸಾವಿರ ರೂ ಕಡಿಮೆಯಾಗಿದೆ. ಇಂತಹ ಸಂಕಷ್ಟದ ಸಂಧರ್ಭದಲ್ಲಿ ಸ್ವತಃ ಅಡಕೆ ಬೆಳೆಗಾರರೇ ಆಗಿರುವ ರಾಜ್ಯ ಅಡಕೆ ಪ್ರಕೋಷ್ಠದ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದೂ ಹೇಳಿರುವುದು ಆಶ್ಚರ್ಯದ ಸಂಗತಿಯಾಗಿದೆ. ಆತಂಕದ ಈ ಸಂದರ್ಭದಲ್ಲಿ ಅಡಕೆ ಬೆಳೆಗಾರರು ಸಂಘಟಿತರಾಗಿ ಕೇಂದ್ರ ಸರ್ಕಾರದ ಈ ನಿಲುವನ್ನು ವಿರೋಧಿಸಬೇಕಿದೆ ಎಂದೂ ಹೇಳಿದರು.
ಪ್ರಸ್ಥುತ ಅಗತ್ಯಕ್ಕಿಂತ ಹೆಚ್ಚು ಅಡಕೆ ದೇಶದಲ್ಲೇ ಬೆಳೆಯ ಈ ಕಾಲಘಟ್ಟದಲ್ಲಿ ಅಡಕೆಯನ್ನು ಆಮದು ಮಾಡಿಕೊಳ್ಳುವ ಸರ್ಕಾರದ ನಿರ್ಧಾರ ಖಂಡನೀಯವಾಗಿದೆ. ಇದರಿಂದ ಕಳ್ಳ ಮಾರ್ಗದಲ್ಲಿ ಅಡಕೆ ಬರುವುದಕ್ಕೂ ಮುಕ್ತ ಅವಕಾಶ ದೊರೆಯುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅಡಕೆ ಬೆಳೆಯುವ ಪ್ರದೇಶದಿಂದ ಆಯ್ಕೆಯಾಗಿರುವ ಏಳೆಂಟು ಮಂದಿ ಸಂಸದರಿದ್ದಾರೆ. ಇವರೆಲ್ಲರೂ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಪ್ರಶ್ನಿಸಬೇಕು ಎಂದು ಒತ್ತಾಯಿಸಿದರು. ರೈತರು ಎಲೆ ಚುಕ್ಕಿ ರೋಗದ ಬಗ್ಗೆ ನಿರ್ಲಕ್ಷ ಮಾಡದೇ ಕೂಡಲೇ ಔಷಧವನ್ನು ಸಿಂಪಡಿಸಬೇಕು. ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರದಿಂದ ಪಡೆಯುವ ಸಲುವಾಗಿ ಕ್ರಮಬದ್ದವಾಗಿ ಬಿಲ್ಗಳನ್ನು ಇಟ್ಟುಕೊಳ್ಳುವಂತೆಯೂ ತಿಳಿಸಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯ ಫಲವಾಗಿ ಜನತೆಯ ಒಲವು ಕಾಂಗ್ರೆಸ್ ಕಡೆಗೆ ವಾಲುತ್ತಿದೆ. ಮಹತ್ವದ ಈ ಸಂದರ್ಭದಲ್ಲಿ ಪಕ್ಷದ ನಿಷ್ಠಾವಂತ ಮತ್ತು ಹಿಂದುಳಿದ ವರ್ಗದ ನಾಯಕರಾದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಉನ್ನತ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿವಾಗಿದ್ದು ಪಕ್ಷಕ್ಕೆ ಬಲ ಬಂದಂತಾಗಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಹಾರೇಗೋಳಿಗೆ ಪದ್ಮನಾಭ್ ಸೇರಿದಂತೆ ಅನೇಕರು ಇದ್ದರು.