ಜನಪ್ರತಿನಿಧಿಗಳಿಂದ ಭೂಮಿಹುಣ್ಣಿಮೆ
Team Udayavani, Nov 1, 2020, 8:26 PM IST
ಸಾಗರ: ವಿವಿಧ ಜನಪ್ರತಿನಿ ಧಿಗಳು ಶನಿವಾರ ರೈತ ಜೀವನವನ್ನು ನೆನಪಿಸಿಕೊಂಡು ಸಂಭ್ರಮದಿಂದ ತಮ್ಮ ಗ್ರಾಮಗಳಲ್ಲಿ ಭೂಮಿ ಹುಣ್ಣಿಮೆಯ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಎಂಎಸ್ಐಎಲ್ ಅಧ್ಯಕ್ಷ, ಸಾಗರ ಶಾಸಕಎಚ್. ಹಾಲಪ್ಪ ಹರತಾಳು ತಮ್ಮ ಕುಟುಂಬದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮ ಮೂಲಗ್ರಾಮವಾದ ಹರತಾಳು ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದರು.
ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಅವರು ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಅಡ್ಡೇರಿ-ಚಿಕ್ಕಬಿಲಗುಂಜಿ ಗ್ರಾಮದ ತಮ್ಮ ತೋಟದಲ್ಲಿ ಭೂಮಿಗೆ ಪೂಜೆ ಸಲ್ಲಿಸಿದರು. ಹಾಲಪ್ಪ, ಕಣ್ಣೂರು ತಮ್ಮ ಮನೆಯವರೊಂದಿಗೆ ಕುಳಿತು ತೋಟದಲ್ಲಿಯೇ ಊಟ ಮಾಡಿದರು. ಅಪ್ಪಯ್ಯ ಪೂಜೆ ಮಾಡಿ ಭೂಮಿಗೆ ತಲೆ ಬಾಗುವಾಗ ನೆಲವನ್ನೇ ನಂಬಿ ನರನಾಡಿಗಳನ್ನು ಸವೆಸಿ ಬೆವರ ಭಾಷ್ಯ ಬರೆದ ಜೀವದ ಎದೆಯ ಮಾತು ಸುತ್ತಲೂ ಪ್ರತಿಧ್ವನಿಸಿದಂತಾಯಿತು. ಅವ್ವನಿಗೆ ವಯಸ್ಸು ಆದಂತೆ ಹಬ್ಬಕ್ಕೂ ವಯಸ್ಸು ಆದಂತೆ ಅನ್ನಿಸುತ್ತದೆ. ಅಮ್ಮನ ಸಿಹಿ ಮತ್ತು ಸಪ್ಪೆ ಕಡಬು ಇನ್ನಿತರ ಅಡುಗೆ ತೋಟದಲ್ಲಿ ಉಣ್ಣುವುದರಿಂದಲೇ ಹೆಚ್ಚು ರುಚಿ ಎನ್ನಿಸುತ್ತದೆ ಎಂದು ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
ಜಮೀನಿನಲ್ಲಿ ಪೂಜೆ ಮಾಡಿದ ಶಾಸಕ ಹಾಲಪ್ಪ :
ರಿಪ್ಪನ್ಪೇಟೆ: ಭೂಮಿ ಹುಣ್ಣಿಮೆ ಅಂಗವಾಗಿ ಶಾಸಕ ಹರತಾಳು ಹಾಲಪ್ಪ ಹರತಾಳಿನಲ್ಲಿನ ತಮ್ಮ ಜಮೀನಿನಲ್ಲಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಫಸಲು ಬರಲೆಂದು ಪ್ರಾರ್ಥಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹಾಲಪ್ಪ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ರೈತ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನು ಮಲೆನಾಡಿನ ವ್ಯಾಪ್ತಿಯಲ್ಲಿ ಅಕಾಲಿಕಮಳೆಯಿಂದಾಗಿ ಇಳುವರಿ ಕುಂಠಿತಗೊಳ್ಳುವ ಅತಂಕ ಮನೆ ಮಾಡಿದೆ. ಇದರೊಂದಿಗೆ ಹಬ್ಬ- ಹರಿದಿನಗಳು ಸಾಲುಸಾಲಾಗಿ ಬರುತ್ತಿದ್ದು ಗಗನಕ್ಕೇರಿರುವ ತರಕಾರಿ, ದಿನಸಿ ಧಾನ್ಯಗಳ ಖರೀದಿ ಸಹ ಕಷ್ಟಕರವಾಗಿದೆ. ರೈತ ನಾಗರಿಕರು ಸಂಕಷ್ಟ ಪರಿಸ್ಥಿಯಲ್ಲಿ ಸಿಲುಕಿಕೊಂಡಿದ್ದು ವಿಷಾದನೀಯ ಎಂದರು.
ತಾಪಂ ಸದಸ್ಯೆ ಸರಸ್ವತಿ ಗಣಪತಿ, ಹರತಾಳು ರಾಮಚಂದ್ರ, ಗಣಪತಿ, ಕೀರ್ತಿಗೌಡ ಕುಕ್ಕಳಲೆ, ಕೆ.ಬಿ. ಹೂವಪ್ಪ, ಆರ್.ಟಿ. ಗೋಪಾಲ, ಎನ್. ಸತೀಶ್, ಎ.ಟಿ.ನಾಗರತ್ನ, ತೀರ್ಥೇಶ್, ಸುಂದರೇಶ್, ನಿರೂಪ ರಿಪ್ಪನ್ ಪೇಟೆ, ಮುರುಳಿ, ಶಿವಪ್ಪ ಅವಡೆ, ರಮೇಶ್ ಚಿಬ್ಬಳ್ಳಿ, ಲೋಕೇಶ್ ತಮ್ಮಡಿಕೊಪ್ಪ ಇನ್ನಿತರರು ಇದ್ದರು.
ವಿವಿಧೆಡೆ ಭೂಮಿ ಹುಣ್ಣಿಮೆ ಸಂಭ್ರಮ :
ಸಾಗರ: ವರದಪುರದ ಶ್ರೀಧರಾಶ್ರಮ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶನಿವಾರ ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ರೈತ ವರ್ಗ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಭೂಮಿ ಹುಣ್ಣಿಮೆ ಆಚರಣೆ ಸಂಭ್ರಮದಿಂದ ನಡೆಯಿತು. ಕೃಷಿಕರು ಅಡಕೆ ತೋಟದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು
ಅಡಕೆ ಕೊನೆಗಳನ್ನು ಹೊಂದಿದ ಮರವನ್ನು ಅಲಂಕರಿಸಿ ಪೂಜೆ ಸಲ್ಲಿಸಿದರೆ ತೆನೆ ಹೊತ್ತ ಭತ್ತದ ಗದ್ದೆಗಳ ಬದುವಿನಲ್ಲಿ ರೈತರು ಬಾಳೆ ಗಿಡಗಳನ್ನು ನೆಟ್ಟು ಭೂ ಪೂಜೆ ಸಲ್ಲಿಸಿದರು. ಈ ಭಾಗದ ಈಡಿಗ ಜನಾಂಗದವರು ಭೂಮಣ್ಣಿ ಬುಟ್ಟಿ ಸಿದ್ಧಪಡಿಸಿಅದರಲ್ಲಿ ಭೂಮಿಗೆ ಸಲ್ಲುವ ಕಡುಬು, ವಿವಿಧ ಎಲೆಗಳ ಪಲ್ಯಗಳನ್ನು ತಯಾರಿಸಿ ಪೂಜಾ ಸ್ಥಳಕ್ಕೆ ಹೊತ್ತೂಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದೊಂದು ದಿನ ತೋಟದಲ್ಲಿಯೇ ಊಟ ಮಾಡುವುದು ಪರಂಪರೆ. ಏಳು ತೋಟಗಳಲ್ಲಿ ಊಟ ಮಾಡಬೇಕು ಎಂಬ ನಿಯಮವನ್ನು ಹಿಂದೆ ತೋಟದಿಂದ ತೋಟಕ್ಕೆ ತೆರಳಿ ಆಚರಿಸಲಾಗುತ್ತಿತ್ತಾದರೂ ಈಗೀಗ ಅದು ಮಾಯವಾಗುತ್ತಿದೆ. ಭೂಮಿ ಹುಣ್ಣಿಮೆಯಂದು ಭೂಮಿಗೆ ವಿವಿಧ ಭಕ್ಷ್ಯ ಭೋಜನವನ್ನು ಒಳಗೊಂಡ ಚರಗ ಚೆಲ್ಲುವುದು, ಭೂಮಿತಾಯಿಯ ಬಯಕೆಯನ್ನು ತೀರಿಸುವ 9 ವಿಧದ ಆಹಾರವನ್ನು ನೈವೇದ್ಯವಾಗಿ ಇರಿಸಲಾಗುತ್ತದೆ. ನೈವೇದ್ಯಕ್ಕೆ ಇರಿಸಿದನ್ನು ಭೂಮಿಯಲ್ಲಿ ಬಲೀಂದ್ರನಿಗೆ ಬಚ್ಚಿಟ್ಟು ಬಲಿಪಾಡ್ಯಮಿ ದಿನ ಅದನ್ನು ಭೂಮಿಗೆ ಬೀರಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಕೃಷಿಕರ ಮನೆ ಮಕ್ಕಳು ಉದ್ಯೋಗ ನಿಮಿತ್ತ ನಗರ ಸೇರಿದ್ದರಿಂದ ಭೂಮಿ ಹುಣ್ಣಿಮೆಯ ಉತ್ಸಾಹ ಕುಂದಿತ್ತು. ಈ ಬಾರಿ ಹಲವರು ಕೋವಿಡ್ ಕಾರಣದಿಂದ ಹಳ್ಳಿಯ ತಮ್ಮ ಮನೆಯಲ್ಲಿಯೇ ಉದ್ಯೋಗದ ಕೆಲಸ ಮಾಡುತ್ತಿರುವರಾಗಿದ್ದು, ರಜೆಯ ದಿನವಾದ ಶನಿವಾರವೇ ಹಬ್ಬ ಬಂದಿದ್ದರಿಂದ ಅವರೆಲ್ಲ ಪಾಲ್ಗೊಂಡು ಹಬ್ಬಕ್ಕೆ ಮೆರುಗು ನೀಡಿದರು ಎಂದು ಕೆಲವು ಹಿರಿಯ ಕೃಷಿಕರು ಸಂತಸಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್