ಮಾಡಬಾರದ ಕೆಲಸ ಮಾಡಿ ಕಾಂಗ್ರೆಸ್ ನವರಿಗೆ ಅಭ್ಯಾಸ: ಸಚಿವ ಕೆ.ಎಸ್. ಈಶ್ವರಪ್ಪ
Team Udayavani, Mar 21, 2021, 2:16 PM IST
ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಸಾಕಷ್ಟು ಅನೇಕರನ್ನು ಬಂಧಿಸಿದ್ದಾರೆ. ಇನ್ನು ಯಾರ್ಯಾರು ಇದರ ಹಿಂದೆ ಇದ್ದಾರೆ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ. ಸಿಬಿಐ ತನಿಖೆಗೆ ನನ್ನ ಬೆಂಬಲವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಂಗ್ರೆಸ್ ನವರಿಗೆ ಹೇಳೋದಿಕ್ಕೆ, ಕೇಳೋದಿಕ್ಕೆ ವಿಚಾರಗಳೇ ಇಲ್ಲ. ಮಾಡಬಾರದ ಕೆಲಸ ಮಾಡಿ ಅವರಿಗೆ ಅಭ್ಯಾಸ. ಅದನ್ನೆ ಈಗಲೂ ಮುಂದುವರಿಸಿದ್ದಾರೆ. ಯಾವುದೋ ಒಂದು ಘಟನೆ ಇಟ್ಟುಕೊಂಡು ಸರ್ಕಾರವೇ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ.ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ಸ್ಫೋಟವೂ ನಡೆದಿಲ್ಲವಾ? ಈ ಹಿಂದೆ ಯಾವ ಅತ್ಯಾಚಾರಗಳೂ ನಡೆದೇ ಇಲ್ಲವಾ? ಈ ಹಿಂದೆ ಮರಳು ಲೂಟಿ ಆಗಿಯೇ ಇಲ್ಲವಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ? ಕುಮಾರಸ್ವಾಮಿ ಪ್ರಶ್ನೆ
ಸಿಬಿಐ ತನಿಖೆ ನಡೆಸಲಿ ನನ್ನದೇನು ಅಭ್ಯಂತರವಿಲ್ಲ. ನಾವು ಈ ವಿಚಾರದಲ್ಲಿ ಬಿಗಿ ಮಾಡಿದಕ್ಕೆ, ಇಂದು ಅಕ್ರಮ ಗಣಿಗಾರಿಕೆ ನಿಂತಿದೆ. ನಾವು ಬಿಗಿ ಮಾಡಿದ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಜೆಲ್ಲಿ ಸಿಗುತ್ತಿಲ್ಲ. ಮರಳು ಸಿಗುತ್ತಿಲ್ಲ. ಅಭಿವೃದ್ಧಿ ಕೆಲಸಗಳು ನಿಂತು ಹೋಗಿರುವುದನ್ನು ಗಮನಿಸಬೇಕಿದೆ. ಸ್ಫೋಟದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲೇ ಬೇಕು ಎಂದರು.