ಮೇಯರ್ ಗಾದಿಗೆ ಮೀಸಲು ಗ್ರಹಣ!
ಎರಡು ತಿಂಗಳಾದರೂ ಮೀಸಲಾತಿ ಘೋಷಣೆ ಆಗಿಲ್ಲ
Team Udayavani, May 18, 2022, 2:40 PM IST
ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಅವಧಿ ಮುಗಿದು ಎರಡು ತಿಂಗಳಾದರೂ ಮೀಸಲಾತಿ ಘೋಷಣೆ ಆಗಿಲ್ಲ. ಒಬಿಸಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನಿಂದ ಹಾಲಿ ಮೇಯರ್, ಉಪಮೇಯರ್ಗೆ ಬೋನಸ್ ಅಧಿಕಾರ ಸಿಕ್ಕಿದ್ದು, ಹೊಸ ಆಕಾಂಕ್ಷಿಗಳಲ್ಲಿ ಮಾತ್ರ ನಿರಾಸೆ ಮೂಡಿಸಿದೆ.
ವರ್ಷಕ್ಕೊಮ್ಮೆ ಮಹಾನಗರ ಪಾಲಿಕೆಗಳಿಗೆ ಮೇಯರ್, ಉಪಮೇಯರ್ ಮೀಸಲಾತಿ ಘೋಷಣೆ ಮಾಡಲಾಗುತ್ತದೆ. ಮೀಸಲಾತಿ ಆಧಾರದ ಮೇಲೆ ಹೊಸಬರು ಬಹುಮತ ಪಡೆದು ಆಯ್ಕೆಯಾಗುತ್ತಾರೆ. ಆದರೆ ಜಿಪಂ, ತಾಪಂ ಚುನಾವಣೆಗಳಿಗೆ ಎದುರಾದ ವಿಘ್ನವೇ ಈಗ ಮಹಾನಗರ ಪಾಲಿಕೆಗೂ ಎದುರಾಗಿದೆ. ಮೇಯರ್, ಉಪಮೇಯರ್ ಅವಧಿ ಒಂದು ವರ್ಷದಾಗಿದ್ದು ಮಾ.10ಕ್ಕೆ ಮುಕ್ತಾಯವಾಗಬೇಕಿತ್ತು. ಹೊಸ ಮೀಸಲಾತಿ ಕೂಡ ನಿಗದಿಯಾಗಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳನ್ನು ಸಾಮಾನ್ಯ ಮೀಸಲಿಗೆ ಒಳಪಡಿಸಬೇಕು ಎಂದಿರುವುದರಿಂದ ಮೀಸಲು ನಿಗದಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳ ಅವಧಿ ಮಾ.10ಕ್ಕೆ ಅಂತ್ಯಗೊಂಡು ಹೊಸ ಮೀಸಲು ಪ್ರಕಟವಾಗಬೇಕಿತ್ತು. ಸುಪ್ರೀಂ ಕೋರ್ಟ್ ಮಾನದಂಡದ ಅನ್ವಯ ಹೊಸ ಮೀಸಲು ನೀತಿ ನಿರ್ಧಾರಕ್ಕೆ ಸರ್ಕಾರ ಆಯೋಗ ರಚಿಸಬೇಕು. ಆಯೋಗದ ವರದಿ ಅನುಸಾರ ಮೀಸಲು ಪ್ರಕಟಿಸಬೇಕು. ಈ ಎಲ್ಲ ಪ್ರಕ್ರಿಯೆ ಮುಗಿಯುವುದು ಇನ್ನೂ ಮೂರ್ನಾಲ್ಕು ತಿಂಗಳು ಹಿಡಿಯಬಹುದು ಎನ್ನಲಾಗುತ್ತಿದೆ.
ಮಾ.10ಕ್ಕೆ ಅಧಿಕಾರಾವಧಿ ಮುಕ್ತಾಯಗೊಂಡು ಇಷ್ಟೊತ್ತಿಗಾಗಲೇ ಹೊಸ ಮೇಯರ್, ಉಪಮೇಯರ್ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ ಮೀಸಲಾತಿ ಸಮಸ್ಯೆ ಕಾರಣ ಈಗ ಹಾಲಿ ಇರುವವರೇ ಮುಂದುವರೆದಿದ್ದಾರೆ. ಇನ್ನೂ ಮೂರ್ನಾಲ್ಕು ತಿಂಗಳು ಇವರೇ ಮುಂದುವರೆಯುವ ಎಲ್ಲ ಸಾಧ್ಯತೆ ಇದೆ. ಈಗಾಗಲೇ ಒಂದು ತಿಂಗಳ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ. ಅವಧಿ ಮುಗಿಯಲಿದೆ ಇನ್ಯಾಕೆ ಎಂದು ಯಾವುದೇ ಸಾಮಾನ್ಯ ಸಭೆ, ಪರಿಷತ್ ಸಭೆಗಳನ್ನು ಕರೆದಿರಲಿಲ್ಲ. ಆದರೆ ನಗರಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿರುವುದರಿಂದ ಎಲ್ಲ ಪಾಲಿಕೆಗಳಲ್ಲೂ ಈಗಿರುವ ಮೇಯರ್ಗಳೇ ಮೇ ತಿಂಗಳಲ್ಲಿ ಸಭೆ ನಡೆಸಿದ್ದಾರೆ. ಒಂದು ವರ್ಷ ಅವಧಿಗೆ ಅಧಿಕಾರ ಪಡೆದವರು ಈಗ ಒಂದೂವರೆ ವರ್ಷ ಅಧಿಕಾರ ಸಿಕ್ಕ ಖುಷಿಯಲ್ಲಿದ್ದಾರೆ.
ತಲಾ ನಾಲ್ವರಿಗೆ ಮಾತ್ರ ಅಧಿಕಾರ
ಮೇಯರ್ ಅವಧಿ ಮುಗಿಯುವ ಮೊದಲೇ ತಮಗೆ ಬೇಕಾದ ಮೀಸಲು ಪಡೆಯಲು ಬೆಂಗಳೂರು ಭೇಟಿ ಶುರುವಾಗಿತ್ತು. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರುವಂತಹ ಜನಪ್ರತಿನಿಧಿಗಳ ಮೂಲಕ ಆಕಾಂಕ್ಷಿಗಳು ಎಡತಾಕುತ್ತಿದ್ದರು. ಸರದಿ ಪ್ರಕಾರ ಈ ಬಾರಿ ತಮ್ಮ ಪರ ಮೀಸಲು ಬರಬಹುದೆಂಬ ಲೆಕ್ಕಾಚಾರದಲ್ಲಿದ್ದ ಸದಸ್ಯರು ನಿರಾಶರಾಗಿದ್ದಾರೆ. ಮತ್ತೂಂದು ಕಡೆ ಒಂದು ವರ್ಷದ ಮೇಯರ್-ಉಪಮೇಯರ್ ಸ್ಥಾನಗಳಿಗೆ ಐದು ವರ್ಷದ ಅವಧಿಯಲ್ಲಿ ತಲಾ ಐವರಿಗೆ ಅವಕಾಶ ಸಿಗಬೇಕು. ಅದರೆ, ಪ್ರತಿ ಬಾರಿ ತಡವಾಗಿ ಪ್ರಕಟವಾಗುವ ಮೀಸಲು ಮತ್ತು ಈ ಬಾರಿ ಒಬಿಸಿ ಮೀಸಲು ಗೊಂದಲದಿಂದಾಗಿ ತಲಾ ನಾಲ್ವರಿಗೆ ಸೀಮಿತವಾಗಲಿದೆ. ಐದು ವರ್ಷದ ಅಧಿಕಾರ 2023ನೇ ಸೆಪ್ಟೆಂಬರ್ಗೆ ಅಂತ್ಯವಾಗಲಿದ್ದು ಒಂದೂವರೆ ವರ್ಷ ಮಾತ್ರ ಉಳಿದುಕೊಂಡಿದೆ.
58 ಸ್ಥಳೀಯ ಸಂಸ್ಥೆಗಳ ಅಧಿಕಾರಕ್ಕೂ ಗ್ರಹಣ
ಸುಪ್ರೀಂ ಕೋರ್ಟ್ ಆದೇಶ ಜಿಪಂ, ತಾಪಂ ಚುನಾವಣೆಗಳಿಗಷ್ಟೇ ಅಲ್ಲದೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಿಗೂ ಗ್ರಹಣ ಹಿಡಿಸಿದೆ. 5 ನಗರಸಭೆ, 19 ಪುರಸಭೆ, 34 ಪಪಂಗಳಿಗೆ 2021, ಡಿ.27ರಂದು ನಡೆದ ಚುನಾವಣೆಯಲ್ಲಿ ಹೊಸ ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲು ಪ್ರಕಟವಾಗದಿರುವುದರಿಂದ ಆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದರೂ ಅಧಿಕಾರಿಗಳ ಆಡಳಿತ ಮುಂದುವರಿದಿದೆ.
ಒಬಿಸಿ ಮೀಸಲಾತಿ ಗೊಂದಲ ಇದ್ದು ಆಯೋಗ ರಚನೆ ಮಾಡಿ ಅದರ ಮೂಲಕ ಹೊಸ ಮೀಸಲಾತಿ ಘೋಷಣೆಗೆ ತೀರ್ಮಾನ ಮಾಡಲಾಗಿದೆ. ಈಗಿರುವ ಪರಿಸ್ಥಿತಿ ನೋಡಿದರೆ ಇನ್ನು ಮೂರ್ನಾಲ್ಕು ತಿಂಗಳು ಮೀಸಲಾತಿ ಘೋಷಣೆಯಾಗುವುದು ಅನುಮಾನ. ಸರ್ಕಾರದ ಸೂಚನೆಯಂತೆ ಅಲ್ಲಿವರೆಗೂ ಕೆಲಸ ಮಾಡಿಕೊಂಡು ಹೋಗಲಾಗುವುದು. –ಸುನೀತಾ ಅಣ್ಣಪ್ಪ, ಮೇಯರ್, ಶಿವಮೊಗ್ಗ ಮಹಾನಗರ ಪಾಲಿಕೆ
–ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ