ಸಂಚಾರ ದಟ್ಟಣೆ ನಿಯಂತ್ರಣಕ್ಕೆ “ಬೊಲಾರ್ಡ್’ ವ್ಯವಸ್ಥೆ
Team Udayavani, Aug 21, 2017, 10:11 AM IST
ಶಿವಮೊಗ್ಗ: ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಅಳವಡಿಸುವ “ಬೊಲಾರ್ಡ್’ ವ್ಯವಸ್ಥೆ ಇದೇ ಮೊದಲ ಬಾರಿಗೆ ಮಲೆನಾಡು ನಗರಿ ಶಿವಮೊಗ್ಗಕ್ಕೆ ಬಂದಿದೆ.
ಮುಂದುವರಿದ ದೇಶ ಮತ್ತು ದೇಶದ ಮೆಟ್ರೋ ಸಿಟಿಗಳಲ್ಲಿ ಮಾತ್ರ ಕಾಣುವ ಈ ಬೊಲಾರ್ಡ್ ವ್ಯವಸ್ಥೆ ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಅಳವಡಿಸಲಾಗುತ್ತಿದ್ದು, ನಗರದ ವಾಣಿಜ್ಯ ವ್ಯವಹಾರಗಳ ಹೃದಯ ಭಾಗ ಎನಿಸಿರುವ ಗಾಂಧಿ ಬಜಾರ್ನಲ್ಲಿ “ಬೊಲಾರ್ಡ್’ ಬಳಕೆಗೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಆ. 21ರಂದು ಇದರ ಉದ್ಘಾಟನೆ ನೆರವೇರಲಿದೆ. ಈ ಬೊಲಾರ್ಡ್ ವ್ಯವಸ್ಥೆ ಅಳವಡಿಸಿದರೆ ದ್ವಿಚಕ್ರ ವಾಹನದ ಹೊರತಾಗಿ ಬೇರಾವುದೇ ವಾಹನ ಸಂಚಾರ ಆ ಸ್ಥಳದಲ್ಲಿ ಸಾಧ್ಯವಿಲ್ಲ. ಪದೇಪದೆ ಸರಿಸಬೇಕಾದ ಬ್ಯಾರಿಕೇಡ್ನ ಬದಲಿಗೆ ಶಾಶ್ವತವಾಗಿ
ರಸ್ತೆಯಲ್ಲಿ ಅಳವಡಿಸುವ ವ್ಯವಸ್ಥೆಯೇ ಈ ಬೊಲಾರ್ಡ್. ನೆಲದೊಳಗೆ ಅಳವಡಿಸುವ ಬೊಲಾರ್ಡ್ ಕಂಬಗಳನ್ನು ಬೇಕೆನಿಸಿದಾಗ ಮೇಲಕ್ಕೆತ್ತಿ ಬೀಗ ಹಾಕಿದರೆ ಬ್ಯಾರಿಕೇಡ್ ರೀತಿಯಲ್ಲಿ ಕೆಲಸ ಮಾಡುತ್ತದೆ.
ಇಲ್ಲಿನ ಗಾಂಧಿ ಬಜಾರ್ ಪ್ರವೇಶದಲ್ಲೇ 3 ಸೆಟ್ ಬೊಲಾರ್ಡ್ ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯ ವಿಶೇಷ ಆಸಕ್ತಿಯಿಂದ ಇದು ಅಸ್ತಿತ್ವಕ್ಕೆ ಬಂದಿದೆ. ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆ ಸೇರಿ ಯಾವುದೇ ವಿಶೇಷ ಹಾಗೂ ಸಾಮಾನ್ಯ ಸಂದರ್ಭದಲ್ಲಿ ಬೊಲಾರ್ಡ್ ಬಳಸಲು ನಿರ್ಧರಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಗಾಂಧಿ ಬಜಾರ್ ರಸ್ತೆಯ ಅಭಿವೃದ್ಧಿ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಇದರಿಂದ ಸಹಾಯವಾಗಲಿದೆ. ಬೊಲಾರ್ಡ್ ಅಳವಡಿಕೆಯಿಂದ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜನೆ ತಪ್ಪಲಿದೆ.
ಏನಿದು ಬೊಲಾರ್ಡ್?: ಬೊಲಾರ್ಡ್ ಎಂಬುದು ವಾಹನ ಸಂಚಾರ ನಿಯಂತ್ರಣಕ್ಕೆ ಬಳಸುವ ಸಾಧನವಾಗಿದ್ದು, ವಿಶೇಷವಾದ ಕಬ್ಬಿಣ ಅಥವಾ ಉಕ್ಕಿನಿಂದ ತಯಾರಿಸಲಾಗಿರುತ್ತದೆ. ಪ್ರಸ್ತುತ ಮುಂದುವರಿದ ದೇಶ ಹಾಗೂ ಭಾರತದ ಮೆಟ್ರೋ ನಗರಗಳಲ್ಲಿ ಇದನ್ನು ಬಳಸಲಾಗುತ್ತಿದ್ದು ಉತ್ತಮ ಫಲಿತಾಂಶ ಲಭಿಸಿದೆ. ನಾಲ್ಕರಿಂದ ಐದು ಅಡಿ ಉದ್ದ ಹಾಗೂ ದಪ್ಪವಾದ ಕಬ್ಬಿಣದ ಪಟ್ಟಿಯ (ಬೊಲಾರ್ಡ್) ಸೆಟ್ನ್ನು ರಸ್ತೆಯಲ್ಲಿ ಶಾಶ್ವತವಾಗಿ
ಹುಗಿಯಲಾಗುತ್ತದೆ. ಅಗತ್ಯಕ್ಕನುಗುಣವಾಗಿ ಬೊಲಾರ್ಡ್ನ್ನು ಮೇಲೆತ್ತಿ ಅದಕ್ಕೆ ಬೀಗ ಹಾಕಿದರೆ ಮುಗಿಯಿತು. ಪದೇಪದೆ ಕಬ್ಬಿಣದ ಬ್ಯಾರಿಕೇಡ್ ಇಡುವುದು ತಪ್ಪುತ್ತದೆ. ಪ್ರಸ್ತುತ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಅಳವಡಿಸಲಾಗಿರುವ ಬೊಲಾರ್ಡ್ ನೆಲಮಟ್ಟದಿಂದ 3 ಅಡಿ ಎತ್ತರದಲ್ಲಿದ್ದು ಪ್ರತಿ ಎರಡು ಕಂಬದ ನಡುವಿನ ಅಂತರ 3.75 ಅಡಿ ಇದೆ. ಇದರಿಂದಾಗಿ ದ್ವಿಚಕ್ರ ಹೊರತುಪಡಿಸಿ ಆಟೋ ಸೇರಿ ಯಾವುದೇ ವಾಹನ ಗಾಂಧಿ ಬಜಾರ್ನ ಮುಖ್ಯ ರಸ್ತೆಯಿಂದ ಪ್ರವೇಶಿಸುವುದು ಸಾಧ್ಯವಾಗದು. ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಬೊಲಾರ್ಡ್ಗೆ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗಿದೆ.
ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಶಿವಮೊಗ್ಗದ ಉದ್ಯಮಿ ವೆಂಕಟೇಶ್ ಮತ್ತು ತಂಡದವರು ಇದನ್ನು ಸಿದ್ಧಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೊಲಾರ್ಡ್ನ ಬೆಲೆ ಸುಮಾರು 1 ಲಕ್ಷ ರೂ. ತನಕ ಇದೆ. ಆದರೆ ಶಿವಮೊಗ್ಗದ ಉದ್ಯಮಿ ಮೇಕ್ ಇನ್ ಇಂಡಿಯಾ ಯೋಜನೆಯಡಿ
23 ಸಾವಿರ ರೂ.ಗೆ ಉತ್ತಮ ಗುಣಮಟ್ಟದ ಬೊಲಾರ್ಡ್ ತಯಾರಿಸಿಕೊಟ್ಟಿದ್ದಾರೆ.
ಗೋಪಾಲ್ ಯಡಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ