ಸಾಮೂಹಿಕ ವಿವಾಹದಿಂದ ಸಮಾನತೆ
ಆರ್.ಕೆ. ಬಸಣ್ಣ ಕುಟುಂಬದಿಂದ ಸಾಮೂಹಿಕ ವಿವಾಹ
Team Udayavani, Apr 11, 2019, 4:53 PM IST
ಸಿರವಾರ: ಸರಳ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ತಪ್ಪಿಸುವ ಜತೆಗೆ ಸಮಾಜದಲ್ಲಿ ಸಮಾನತೆ ಸಾರಬಹುದು ಎಂದು ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ
ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆರ್.ಕೆ.ಕಮಲಮ್ಮ ಮತ್ತು ಆರ್. ಕೆ.ಬಸಣ್ಣ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ 4ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೂತನ ದಂಪತಿಗಳು
ಅನ್ಯೋನ್ಯತೆಯಿಂದ ಜೀವಿಸಬೇಕು. ಹೆಣ್ಣು ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಬೆಳಕಾಗಬೇಕು. ಎಂತಹದೇ ಸಮಸ್ಯೆಗಳು ಬಂದಾಗ ದಂಪತಿ ಮುಕ್ತವಾಗಿ ಚರ್ಚಿಸಿ ಜೀವನ ನಡೆಸಬೇಕು. ಗುರು-ಹಿರಿಯರನ್ನು
ಗೌರವಿಸಬೇಕು ಎಂದು ಹಿತನುಡಿ ಹೇಳಿದರು.
ಸರಳ ವಿವಾಹವಾಗಲು ಬಯಸುವ ವಧು-ವರರ ಕುಟುಂಬಗಳ ಮನವೊಲಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಇಂತಹ ವಿವಾಹ ಕಾರ್ಯಕ್ರಮ
ಹಮ್ಮಿಕೊಳ್ಳುವುದು ಸಮಾಜಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಿರುವ ಆರ್.ಕೆ. ಕುಟುಂಬದ ಕಾರ್ಯ
ಮೆಚ್ಚುವಂತದ್ದು ಎಂದರು.
ಸಾಮೂಹಿಕ ವಿವಾಹದಲ್ಲಿ 17 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಿಲೋಗಲ್ ಡಾ| ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಕಿಲ್ಲೇ ಬೃಹನ್ಮಠದ
ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಮಾನ್ವಿ ಕಲ್ಮಠದ ವಿರುಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಆರ್.ಕುಟುಂಬದ ಆರ್.ಕೆ. ಕಮಲಮ್ಮ,
ಆರ್.ಕೆ. ಅಮರೇಶ ಸಾಹುಕಾರ, ಆರ್.ಕೆ.ಚನ್ನಬಸವ, ಎನ್.ಗಿರಿಜಾಶಂಕರ, ಎನ್.ಉದಯಕುಮಾರ ಸೇರಿದಂತೆ ಗಣ್ಯರು, ಸಾವಿರಾರು ಜನ ಭಾಗವಹಿಸಿದ್ದರು.