ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ : ಡಾ| ವೀರೇಂದ್ರ ಹೆಗ್ಗಡೆ
Team Udayavani, Jul 7, 2022, 12:55 AM IST
ಮಧುಗಿರಿ: ರಾಜ್ಯದಲ್ಲಿ ಮಹಿಳಾ ಸಬಲೀಕರಣವೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.
ಮಧುಗಿರಿಯಲ್ಲಿ ನಡೆದ ಸ್ವ-ಉದ್ಯೋಗ ಮೇಳ ಹಾಗೂ ಸಾಧನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬಡತನ ಹೋಗಲಾಡಿಸಲು ಯೋಜನೆಯು ಸದಾ ಸಿದ್ಧವಿದೆ. ಅದರಂತೆ ಸಾಮಾಜಿಕ ಸಾಮರಸ್ಯ ಬೆಸೆಯಲು ಜಾತಿ, ಧರ್ಮ ಮೀರಿ ಸದಸ್ಯರನ್ನು ಹೊಂದಿದ್ದು, ಎಲ್ಲ ಸಮಸ್ಯೆಗೂ ಸಂಘದಲ್ಲಿ ಪರಿಹಾರವಿದೆ. ಸಂಘವು ಶಿಕ್ಷಣ ಹಾಗೂ ಸ್ವ ಸಾಮರ್ಥ್ಯವನ್ನು ನೀಡಲಿದ್ದು, ದುಡಿದ ಸಂಪತ್ತು ಸೋರಿಕೆಯಾಗದಂತೆ ಆರ್ಥಿಕವಾದ ಸ್ವಾವಲಂಬನೆಯ ಬದುಕನ್ನು ನೀಡುತ್ತದೆ ಎಂದರು. ಶಾಸಕ ಡಾ| ಜಿ. ಪರಮೇಶ್ವರ್ ಮತ್ತಿತರ ಗಣ್ಯರಿದ್ದರು.
ಹೆಗ್ಗಡೆ ಸಂಸ್ಕೃತಿಯ ರಾಯಭಾರಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ರಾಜ್ಯದ ಬಡವರ ಸಬಲೀಕರಣಕ್ಕೆ ಪೂಜ್ಯರು ಮಂಜುನಾಥನ ಆಜ್ಞೆಯಂತೆ ಮುಂದಡಿಯಿಟ್ಟಿದ್ದಾರೆ. ಅವರು ನಡೆದಾಡುವ ಮಂಜುನಾಥನೇ ಆಗಿದ್ದು, ಈ ಕಾರ್ಯಕ್ಕೆ ನಾವೆಲ್ಲ ಜತೆಯಾಗಬೇಕು. ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಸೊÌàದ್ಯೋಗ ಸೃಷ್ಟಿಗೆ ಪೂಜ್ಯ ಡಾ| ಹೆಗ್ಗಡೆಯವರು ಮತ್ತಷ್ಟು ಪ್ರೋತ್ಸಾಹ ನೀಡಬೇಕೆಂದರು.
ಸಂಘದ ಸದಸ್ಯರ 10 ರೂ. ಉಳಿತಾಯದಿಂದ 367 ಕೋಟಿ ರೂ. ಸಂಗ್ರಹವಾಗಿದ್ದು, 1,400 ಕೋಟಿ ರೂ. ಹಣವು ಸಾಲದ ರೂಪದಲ್ಲಿ ಬಳಕೆಯಾಗಿ ಮರುಪಾವತಿಯಾಗಿದೆ. ಸರಕಾರದ ಸವಲತ್ತುಗಳನ್ನು ಪರಿಚಯ ಮಾಡಲು 326 ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರಿಗೆ ಯೋಜನೆಯ ಅರಿವು ಹಾಗೂ ಲಾಭವನ್ನು ತಂದುಕೊಡಲಿದೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ
ಉತ್ತಮ ಸಮಾಜ ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಸರಕಾರಗಳು ಪೂಜ್ಯ ಹೆಗ್ಗಡೆಯವರೊಂದಿಗೆ ಕೈಜೋಡಿಸಿವೆ. ಸಂಸ್ಕಾರಯುತ, ಆರ್ಥಿಕ ಶಿಸ್ತಿನ ಜತೆ ವ್ಯಸನಮುಕ್ತ ಸಮಾಜ ನಿರ್ಮಾಣವಾದರೆ ಪೊಲೀಸ್ ಇಲಾಖೆಗೆ ಅರ್ಧ ಕೆಲಸ ಕಡಿಮೆಯಾಗುತ್ತದೆ. ಪ್ರಧಾನಿ ಮೋದಿಯವರೇ ಪೂಜ್ಯರಲ್ಲಿ ಮನವಿ ಮಾಡಿದ್ದು, ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಕೋರಿರುವುದು ಪೂಜ್ಯರ ಆಶಯಕ್ಕಿರುವ ಶಕ್ತಿ.
– ಆರಗ ಜ್ಞಾನೇಂದ್ರ, ಗೃಹ ಸಚಿವ