Koratagere: ರೈತರಿಗೆ ಭಯ ಹುಟ್ಟಿಸಿದ್ದ ಚಿರತೆ ಬೋನಿಗೆ
Team Udayavani, Jan 13, 2024, 8:46 PM IST
ಕೊರಟಗೆರೆ: ತಾಲೂಕಿನ ಹಂಚೆಹಳ್ಳಿ ಬಳಿಯ ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಚಿರತೆ ರಾತ್ರಿ ಸೆರೆ ಸಿಕ್ಕಿದೆ.
ರಾತ್ರಿಯ ವೇಳೆ ತಾಲೂಕಿನ ಹಂಚೇಹಳ್ಳಿ ಗ್ರಾಮಕ್ಕೆ ಆಗಮಿಸಿ ಕುರಿ, ಮೇಕೆ ಹಾಗೂ ಸಾಕು ನಾಯಿಗಳನ್ನು ತಿನ್ನುತ್ತಿದ್ದ ಚಿರತೆ ರೈತರಿಗೆ ಭಯ ಹುಟ್ಟಿಸಿತ್ತು. ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಿಮ್ಮಪ್ಪನ ಬೆಟ್ಟದ ಬಳಿ ಇಟ್ಟಿದ್ದ ಬೋನು ಇಡಲಾಗಿತ್ತು.
ತಿಮ್ಮಪ್ಪನ ಬೆಟ್ಟ ಸೇರಿದಂತೆ ಇನ್ನಿತರ ಸುತ್ತುಮುತ್ತಲ ಬೆಟ್ಟ ಗುಡ್ಡಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಬೋಡಬಂಡೆನಹಳ್ಳಿ, ಹಂಚಿಹಳ್ಳಿ ಹಾಗೂ ಮಾದವಾರ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ರೈತರು ಸಂಜೆಯ ವೇಳೆ ಜಮೀನುಗಳ ಕಡೆ ಹೋಗುತ್ತಿರಲಿಲ್ಲ. ಈ ಭಾಗದಲ್ಲಿ ಇನ್ನು ಹೆಚ್ಚಿನ ಚಿರತೆಗಳು ಇದ್ದು ಅವುಗಳನ್ನೂ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬಂದಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದು ಉಳಿದ ಚಿರತೆಗಳ ಸೆರೆಗೆ ಯೋಜನೆ ರೂಪಿಸಿದ್ದಾರೆ.