ಕೊರಟಗೆರೆ: ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿದ ಬಿಜೆಪಿ ಮುಖಂಡ ಅನಿಲ್ಕುಮಾರ್
Team Udayavani, Jan 18, 2023, 6:54 PM IST
ರಟಗೆರೆ:ಗಡ್ಡೋಬನಹಳ್ಳಿ ಗ್ರಾಮಸ್ಥರ ಮನವಿಯ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ಕುಮಾರ್ ತನ್ನ ಸ್ವಂತ ಹಣದಿಂದಲೇ 5 ಕಿ.ಮೀ ರಸ್ತೆಯ ಜಂಗಲ್ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಮೇಳೆಹಳ್ಳಿಯ ಮುಖ್ಯರಸ್ತೆಯಿಂದ ಗಡ್ಡೋಬನಹಳ್ಳಿಗೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆಯ ದುರಸ್ತಿ ಕೆಲಸಕ್ಕೆ ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್ಕುಮಾರ್ ಮುಂದಾಗಿದ್ದಾರೆ. ಮೇಳೆಹಳ್ಳಿ ಕ್ರಾಸಿನಿಂದ ಗಡ್ಡೋಬನಹಳ್ಳಿಗೆ 2 ಕಿ.ಮೀ ರಸ್ತೆ ಮತ್ತು ಗಡ್ಡೋಬನಹಳ್ಳಿ ಗ್ರಾಮದಿಂದ ಮಧ್ಯವೆಂಕಟಾಪುರ ಕ್ರಾಸಿಗೆ 3 ಕಿ.ಮೀ ಸೇರಿ ಒಟ್ಟು 5 ಕಿ.ಮೀ ಉದ್ದದ ರಸ್ತೆಯ ದುರಸ್ತಿ ಕೆಲಸವು ಪ್ರಾರಂಭವಾಗಿದೆ. ಗಡ್ಡೋಬನಹಳ್ಳಿ ಗ್ರಾಮದಲ್ಲಿ ಒಟ್ಟು 90 ಮನೆಗಳಿದ್ದು 450 ಕ್ಕೂ ಅಧಿಕ ಮತದಾರರು ಇದ್ದಾರೆ. ಪ್ರತಿನಿತ್ಯ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲಾ ಮತ್ತು ಕಾಲೇಜುಗಳಿಗೆ ತೆರಳುತ್ತಾರೆ.
ಗಡ್ಡೋಬನಹಳ್ಳಿ ಗ್ರಾಮಸ್ಥ ಕಾಮರಾಜು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿಯೇ ಕಾಣದಂತಹ ರಸ್ತೆ ನಮ್ಮೂರಿನಲ್ಲಿ ಸಿಗಲಿದೆ. ಜಂಗಲ್ ಬೆಳೆದು ಅಪಘಾತವಾಗಿ ಕೈಕಾಲು ಮುರಿದು ಸಾಕಷ್ಟು ಜನ ಮನೆಯಲ್ಲಿ ಇದ್ದಾರೆ. ಜಂಗಲ್ ಬೆಳೆದು ಸಂಚಾರಕ್ಕೆ ಸಮಸ್ಯೆ ಆಗಿದೆ. ರಾಜಕೀಯ ನಾಯಕರು ಮತ್ತು ಸರಕಾರಿ ಅಧಿಕಾರಿ ವರ್ಗ ನಮ್ಮೂರನ್ನು ಮರೆತು ಹೋಗಿದ್ದಾರೆ ಎಂದು ಆರೋಪ ಮಾಡಿದರು.
ಗಡ್ಡೋಬನಹಳ್ಳಿ ರೈತ ಚಿಕ್ಕಕಾಮರಾಜು ಮಾತನಾಡಿ, ನಮ್ಮೂರಿಗೆ ಬಿಜೆಪಿ ಮುಖಂಡ ಅನಿಲ್ಕುಮಾರ್ ಭೇಟಿ ನೀಡಿದಾಗ ರಸ್ತೆಯ ದುರಸ್ಥಿಯ ಬಗ್ಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ತಕ್ಷಣವೇ ಸ್ಪಂದಿಸಿ ರಸ್ತೆ ದುರಸ್ತಿ ಕೆಲಸಕ್ಕೆ ಮುಂದಾಗಿದ್ದಾರೆ. ರಸ್ತೆ ದುರಸ್ತಿ ಕೆಲಸದಿಂದ ರೈತಾಪಿವರ್ಗ ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿ.ಹೆಚ್.ಅನಿಲ್ಕುಮಾರ್ ಮಾತನಾಡಿ, ಗಡ್ಡೋಬನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕಾಣೆಯಾಗಿದೆ. ರಸ್ತೆಯ ಎರಡು ಬದಿಯಲ್ಲಿ ಜಂಗಲ್ ಬೆಳೆದು ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರ ಮನವಿಯ ಮೇರೆಗೆ ನನ್ನ ಸ್ವಂತ ಹಣದಿಂದಲೇ ರಸ್ತೆಯ ಕೆಲಸ ಪ್ರಾರಂಭ ಮಾಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ತಕ್ಷಣ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.
ಗ್ರಾಮಸ್ಥರ ಮನವಿಗೆ ತಕ್ಷಣವೇ ಸ್ಪಂದಿಸಿದ ಕೊರಟಗೆರೆ ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್ಕುಮಾರ್ ಮಾರನೇಯ ದಿನವೇ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ಜೆಸಿಬಿ ಮತ್ತು ಟ್ರಾಕ್ಟರ್ ಬಳಸಿ ಜಂಗಲ್ ಸ್ವಚ್ಚಮಾಡಿ ರಸ್ತೆಗೆ ಹೊಸ ಮಣ್ಣು ಹಾಕಿಸಿದ್ದಾರೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.