ಕೊರಟಗೆರೆ: ಅಕ್ರಮ ಮರಳು ಸಾಗಾಟ ; ಪೊಲೀಸ್ ಕಂಡೊಡನೆ ಟ್ರಾಕ್ಟರ್ ಬಿಟ್ಟು ಚಾಲಕ ಪರಾರಿ
Team Udayavani, Oct 27, 2022, 6:35 PM IST
ಕೊರಟಗೆರೆ: ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಟ್ರಾಕ್ಟರ್ ನಲ್ಲಿ ಮರಳು ತುಂಬಿಕೊಂಡು ಚಾಲನೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ಎದುರಿಗೆ ಬಂದ ಪೊಲೀಸರನ್ನು ನೋಡಿ ಟ್ರಾಕ್ಟರ್ ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಟ್ಟ ಶಂಭೋನಹಳ್ಳಿ ಗ್ರಾಮದ ಕಡೆಯಿಂದ ಬಿಟ್ಟನಕುರಿಕೆ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ದಾರಿಯಲ್ಲಿ ಜರುಗಿದೆ.
ಘಟನೆಯ ವಿವರ: ಮರಳು ತುಂಬಿದ್ದ ಟ್ರಾಕ್ಟರ್ ಸೀಮೆಎಣ್ಣೆ ಸಿದ್ದರಾಜುರವರ ಶೆಡ್ ನ ಸಮೀಪದ ಮಣ್ಣಿನ ದಾರಿಯಲ್ಲಿ ಹೋಗುತ್ತಿದ್ದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಚಾಲಕ ಟ್ರಾಕ್ಟರ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ನಂತರ ಮರಳು ತುಂಬಿರುವ ಟ್ರಾಕ್ಟರ್ ನ್ನು ಸಾರ್ವಜನಿಕರ ಸಹಾಯದಿಂದ ಠಾಣೆಯ ಬಳಿ ತರಲಾಗಿದೆ. ಟ್ರಾಕ್ಟರ್ ಚಾಲಕನ ವಿಳಾಸ ಪತ್ತೆಯಾಗಿದ್ದು, ಚಾಲಕ ರಘುಬಿನ್ ದೊಡ್ಡರಂಗಪ್ಪ ಯಾವುದೇ ಪರವಾನಗಿ ಇಲ್ಲದೇ ಮರಳು ಸಾಗಿಸುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಮುಖ್ಯ ಪೇದೆ ಹನುಮಂತರಾಯಪ್ಪ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಚೇತನ್ ಕುಮಾರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.