Koratagere: ಸಂಬಳ ನೀಡಿಲ್ಲವೆಂದು ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿದ ಸಿಬಂದಿ!
Team Udayavani, Aug 10, 2023, 10:04 PM IST
ಕೊರಟಗೆರೆ: ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಬಳ ನೀಡಿಲ್ಲವೆಂದು ಬೀಗ ಜಡಿದು ಏಜೆನ್ಸಿ ಮಾಲಕನ ವಿರುದ್ಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಡವರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ನಿರ್ಮಿಸಿ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟವನ್ನು ವಿತರಣೆ ಮಾಡುತ್ತಿದ್ದರೂ, ಇಂದಿರಾ ಕ್ಯಾಂಟಿನ್ ಎಜೆನ್ಸಿ ಮಾಲಕ ಸಿಬ್ಬಂದಿಗೆ ಸುಮಾರು 7 ತಿಂಗಳಿನಿಂದ ಸಂಬಳ ನೀಡದಿರುವ ಕಾರಣ ಸಿಬ್ಬಂದಿಯು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾನೆ.
ಈ ವಿಚಾರವಾಗಿ ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ, ಈ ವಿಷಯದ ಬಗ್ಗೆ ಮಾಧ್ಯಮದವರಿಗೆ ತಿಳಿಸಿದರೆ ಕೆಲಸದಿಂದ ತೆಗೆದು ಬೇರೆಯ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ, ನೀವು ಕೆಲಸಕ್ಕೆ ಬಂದರೆ ಬನ್ನಿ.. ಇಲ್ಲ ಬಿಡಿ ಎಂದು ಬೆದರಿಕೆ ಹಾಕಿದರು ಆದ್ದರಿಂದ ಪೋಲಿಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ ಎಂಬ ಮಾಹಿತಿಯು ಸಿಬ್ಬಂದಿಯಿಂದ ತಿಳಿದು ಬಂದಿದೆ.
ಸಚಿವರ ಕ್ಷೇತ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಸಿಬ್ಬಂದಿಯು ಸಂಬಳ ನೀಡಿಲ್ಲವೆಂದು ಕ್ಯಾಂಟೀನ್ ಗೆ ಬೀಗ ಹಾಕಿದ್ದು, ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸಿಬ್ಬಂದಿಯಿಂದ ಈ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಕೂಡಲೇ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.