ಕುಣಿಗಲ್: ಗಂಡನ ಮನೆಗೆ ಹೋಗಲು ಹೇಳಿದಕ್ಕೆ ಬೇಸರಗೊಂಡು ಗೃಹಿಣಿ ಆತ್ಮಹತ್ಯೆ
Team Udayavani, Nov 13, 2022, 3:34 PM IST
ಕುಣಿಗಲ್: ಗಂಡನ ಮನೆ ಹೋಗು ಎಂದು ತಾಯಿ ತನ್ನ ಮಗಳಿಗೆ ಬುದ್ದಿವಾದ ಹೇಳಿದಕ್ಕೆ ಬೇಸರಗೊಂಡ ಗೃಹಿಣಿರ್ಯೋವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ಪಟ್ಟಣದ ಉಪ್ಪಾರಬೀದಿ(ಮಾವಿನತೋಪು) ನಲ್ಲಿ ನಡೆದಿದೆ.
ಉಪ್ಪಾರಬೀದಿ ನಿವಾಸಿ ಐಶ್ವರ್ಯ (20) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಘಟನೆ ವಿವರ: ಐಶ್ವರ್ಯ ತಾಲೂಕಿನ ಅಮೃತೂರಿನ ಅನಿಲ್ಕುಮಾರ್ನೊಂದಿಗೆ ಹಲವು ವರ್ಷಗಳ ಹಿಂದೆಯೆ ಮದುವೆಯಾಗಿ 2021ರಲ್ಲಿ ಗರ್ಭಿಣಿಯಾಗಿದ್ದಳು. ಈ ವೇಳೆ ಐಶ್ವರ್ಯಳ ಮೈದುನ ಹಾಗೂ ನಾದಿನಿಗೆ ಕೊರೊನಾ ಸೊಂಕು ಕಾಣಿಸಿಕೊಂಡ ಹಿನ್ನಲೆ ಪತಿ ಅನಿಲ್, ಐಶ್ವರ್ಯಳನ್ನು ಆಕೆಯ ತವರು ಮನೆ ಕುಣಿಗಲ್ ಪಟ್ಟಣದ ಉಪ್ಪಾರಬೀದಿಗೆ ಕರೆದುಕೊಂಡು ಬಿಟ್ಟು ಹೋಗಿದ್ದರು.
ತವರು ಮನೆಯಲ್ಲೇ ಐಶ್ವರ್ಯಳಿಗೆ ಹೆರಿಗೆ ಆಗಿದ್ದು, ಹೆರಿಗೆ ಆಗಿ ಹಲವು ತಿಂಗಳು ಕಳೆದರೂ ಐಶ್ವರ್ಯ ಗಂಡನ ಮನೆಗೆ ಹೋಗಲಿಲ್ಲ ಎನ್ನಲಾಗಿದೆ. ಐಶ್ವರ್ಯಳ ತಾಯಿ ಗಂಡನ ಮನೆಗೆ ಹೋಗು ಎಂದು ತನ್ನ ಮಗಳಿಗೆ ಬುದ್ದಿವಾದ ಹೇಳಿದಳು ಎನ್ನಲಾಗಿದ್ದು, ಇದರಿಂದ ಬೇಸರಗೊಂಡ ಐಶ್ವರ್ಯ, ತಾಯಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಮನೆಯ ಕೊಠಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ತಾಯಿ ನೀಡಿದ ದೂರಿನಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.