ಕುಣಿಗಲ್: ಗೋ ಮಾಂಸ ಜಾಲದ ಮೇಲೆ ಪೊಲೀಸರ ದಾಳಿ; 15 ಹಸು,13 ಎಮ್ಮೆ ರಕ್ಷಣೆ
ಕಟಾವು ಮಾಡಿದ್ದ ಭಾರಿ ಪ್ರಮಾಣದ ಮಾಂಸ ವಶ : ಇಬ್ಬರ ಬಂಧನ
Team Udayavani, Jul 9, 2022, 2:08 PM IST
ಕುಣಿಗಲ್ : ಹಸು, ಎಮ್ಮೆ ಕಟಾವು ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ 15 ಹಸು ಹಾಗೂ 13 ಎಮ್ಮೆಯನ್ನ ರಕ್ಷಣೆ ಮಾಡಿ ಇಬ್ಬರು ಆರೋಪಿಗಳನ್ನು ಬಂದಿಸಿರುವ ಘಟನೆ ತಾಲೂಕಿನ ಅಮೃತೂರು ಹೋಬಳಿ ಬಿಸ್ನೆಲೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಬಿಸ್ನೆಲೆ ಗ್ರಾಮದ ಮಂಜುನಾಥ್(42), ಶಿವರಾಜ್(19) ಬಂಧಿತರಾಗಿದ್ದು, ಆರೋಪಿಗಳು ಮೂರು ಮಂದಿ ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ.
ನಾಳೆ ನಡೆಯಲಿರುವ ಬಕ್ರೀದ್ ಹಬ್ಬಕ್ಕೆಂದು ತಾಲೂಕಿನ ಅಮೃತೂರು ಹೋಬಳಿ ಬಿಸ್ನೆಲೆ ಗ್ರಾಮದ ಶಿವಕುಮಾರ್ ಹಾಗೂ ಶಿವರಾಜ್ ಎಂಬುವವರು ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಕ್ರಮವಾಗಿ ಜಾನುವಾರು ಕೂಡಿ ಹಾಕಿ ವಧೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ಜಿ.ಆರ್ ರಮೇಶ್ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ 15 ಹಸು, 13 ಎಮ್ಮೆ ಹಾಗೂ ಕಟಾವು ಮಾಡಿದ ಮಾಂಸವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಾಳಿ ವೇಳೆ ಕಟಾವು ಮಾಡುತ್ತಿದ್ದ ಮೂರು ಮಂದಿ ತಲೆ ಮರಿಸಿಕೊಂಡಿದ್ದು , ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.