ಮಧುಗಿರಿ: ಟ್ರ್ಯಾಕ್ಟರ್ ಪಲ್ಟಿ ಓರ್ವ ಸಾವು; 4 ಜನ ಗಂಭೀರ
Team Udayavani, Jan 11, 2023, 8:03 PM IST
ಮಧುಗಿರಿ: ತಾಲೂಕಿನ ಚಿಕ್ಕಮಾಲೂರಿನಿಂದ ಇಟ್ಟಿಗೆ ಲೋಡ್ ಖಾಲಿ ಮಾಡಿ ಹೋಗುತಿದ್ದ ವೇಳೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಘಟನೆ ನಡೆದಿದೆ.
ಹಾಲಗಾನಹಳ್ಳಿ ದರ್ಶನ್ (20) ಸ್ಥಳದಲ್ಲೇ ಮೃತಪಟ್ಟಿದ್ದು, ರಮೇಶ್ (26 ) ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಅಜಿತ್ (24 ) ಎಂಬುವವನಿಗೆ ಕಾಲು ಮುರಿದ್ದು ಅಂಜಪ್ಪ ಸೇರಿದಂತೆ ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಗಾಯಾಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೋಬಳಿಯ ದೊಡ್ಡಮಾಲೂರು ಗ್ರಾಮದ ಹೊರವಲಯದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಘಟನೆ ನಡೆದಿದೆ. ತಾಲ್ಲೂಕಿನ ಗಡಿಗ್ರಾಮದ ಹಾಲಗಾನಹಳ್ಳಿಯಿಂದ ಚಿಕ್ಕಮಾಲೂರಿಗೆ ಇಟ್ಟಿಗೆ ಲೋಡ್ ಸಾಗಿಸಲು ಹಿಂತಿರುಗಿ ಹೋಗುವಾಗ ಘಟನೆ ನಡೆದಿದ್ದು ತಿರುವಿನ ಗುಂಡಿ ತಪ್ಪಿಸಲು ಹೋಗಿ ದುರ್ಘಟನೆ ಸಂಭವಿಸಿದೆ.
ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದ್ದು ಇಂಹತ ಅಪಘಾತ ಪ್ರಕರಣಗಳು ಮಾಮೂಲಿ ಆಗಿದೆ. ಇದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಿಎಸೈ ನಾಗರಾಜು ಸೇರಿದಂತೆ ಮಂಜುನಾಥ್ ಭೇಟಿ ನೀಡಿದ್ದಾರೆ.