ಗೋಡೆ ಬರಹದಲ್ಲಿ ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ
Team Udayavani, Sep 24, 2022, 7:17 PM IST
ತುಮಕೂರು: ತುಮಕೂರು ನಗರದ ವಿವಿಧ ಕಡೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗೋಡೆ ಬರಹ ಬರೆಸಿದ್ದು, ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬರೆದಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ವಿವಿಧ ಕಡೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಗೋಡೆ ಬರಹಗಳನ್ನು ಬರೆಯ ಲಾಗುತ್ತಿದ್ದು, ಅವೆಲ್ಲವೂ ಬಹುತೇಕ ತಪ್ಪು ಕನ್ನಡ ಪದಗಳಿಂದ ಕೂಡಿವೆ. ಈ ಪದಗಳನ್ನು ನೋಡಿದ ಜನರೇ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪರಿಸರ, ಟ್ರಾಫಿಕ್ ರೂಲ್ಸ್, ಸಂಚಾರ ನಿಯಮಗಳು ಹಾಗೂ ಸ್ಮಾರ್ಟ್ಸಿಟಿ ಅಭಿವೃದ್ಧಿ ಕಾಮಗಾರಿ ಗಳ ಕುರಿತ ಸಂದೇಶ ಸಾರುವ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಆದರೆ ಬರಹಗಳಲ್ಲಿ ಕನ್ನಡ ಪದಗಳು ತಪ್ಪಾಗಿರುವುದರಿಂದ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಇನ್ನು ಕನ್ನಡ ಪದಗಳ ದೊಡ್ಡ ಅಕ್ಷರದಲ್ಲಿ ತಪ್ಪಾಗಿ ಬರೆಯುತ್ತಿದ್ದರೂ ಕೂಡ ಸ್ಮಾರ್ಟ್ಸಿಟಿ ಅಧಿಕಾರಿಗಳು ಅಥವಾ ಮಹಾನಗರ ಪಾಲಿಕೆ ಸಿಬ್ಬಂದಿಗಳು ಇತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿಸಿರುವುದು ಸ್ಮಾರ್ಟ್ಸಿಟಿ ಕಾರ್ಯವೈಖರಿಯ ಬೇಜ ವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಈ ರೀತಿ ತಪ್ಪಾಗಿ ಕನ್ನಡ ಪದಗಳನ್ನು ಬಳಸುತ್ತ ಗೋಡೆ ಬರಹ ಗಳನ್ನು ಬರೆಯಲಾಗುತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುತ್ತಿಲ್ಲ.
ಹೀಗೆ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಲು ದೂರವಾಣಿ ಕರೆ ಮಾಡಿದರೂ ಅಧಿಕಾರಿಗಳು ಕರೆ ಸ್ವೀಕರಿಸಿದರೂ ಉತ್ತರಿಸದೇ ಇರುವ ಧೋರಣೆ ತೋರುತ್ತಿದ್ದಾರೆ.