ಭವಿಷ್ಯಕ್ಕೆ ಕೈ ಕತ್ತರಿ: ಕುವೆಂಪು ಕವನ ಉಲ್ಲೇಖೀಸಿದ ಮೋದಿ
Team Udayavani, May 6, 2023, 7:25 AM IST
ಬಳ್ಳಾರಿ/ತುಮಕೂರು: ದೇಶದಲ್ಲಿ ಜಾರಿ ಮಾಡಲಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದು ಮಾಡುವ ಕಾಂಗ್ರೆಸ್ ಪ್ರಣಾಳಿಕೆ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಿಡಿ ಯಾಗಿದ್ದಾರೆ. ಇಂಥ ನಿರ್ಣಯದ ಮೂಲಕ ಕಾಂಗ್ರೆಸ್ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಆಟವಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಶುಕ್ರವಾರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲ ವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿತು. ಅದರಿಂದ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ತುಂಬಾ ಪ್ರಯೋಜನ ಆಗಿದೆ ಎಂದಿದ್ದಾರೆ.
ಮಾತೃ ಭಾಷೆಯ ಮೂಲಕ ವಿದ್ಯಾರ್ಥಿಗಳು ಬಯಸುವವರೆಗೆ ಓದಬಹುದು. ಬಡವರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು. ಎನ್ಇಪಿಗೆ ವಿರೋಧ ಮಾಡುವ ಮೂಲಕ ಬಡವರ ಮಕ್ಕಳ ಆಶಯಗಳಿಗೆ ಕಾಂಗ್ರೆ ಸ್ ನ ವರು ತಡೆಯೊಡ್ಡುತ್ತಿದ್ದಾರೆ. ಜತೆ ಗೆ ಆ ಪಕ್ಷದ ಮುಖಂಡರಿಗೆ ಇಂಗ್ಲಿಷ್ ಮೇಲೆ ಬಹಳ ಪೀÅತಿ ಎಂದು ಆರೋ ಪಿ ಸಿ ದ್ದಾರೆ.
ಕೇಂದ್ರ ಸರಕಾರದ ಹಲವು ಪರೀಕ್ಷೆಗಳು ಈಗ ಕನ್ನಡ ದಲ್ಲಿ ನಡೆಯುತ್ತಿವೆ. ಇದರಿಂದ ಸ್ಥಳೀಯ ಅಭ್ಯರ್ಥಿ ಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಆದರೆ ಕಾಂಗ್ರೆಸ್ ಕರ್ನಾಟಕದ ಯುವಕರಿಗೆ ಮೋಸ ಮಾಡುತ್ತಿದೆ. ನಮ್ಮ ಬಿಜೆಪಿ ಸರಕಾರ ಶೈಕ್ಷಣಿಕ ವಾಗಿಯೂ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಯವರ ತ್ರಿವಿಧ ದಾಸೋಹವನ್ನು ನೆನೆದ ಪ್ರಧಾನಿ ಮೋದಿಯವರು ಅನ್ನ, ಅಕ್ಷರ ದಾಸೋಹದಂತೆ ಕರ್ನಾಟಕ ಸರಕಾರ ಕೂಡ ಅಭಿವೃದ್ಧಿಯ ಸಂಕಲ್ಪ ಮಾಡಿದೆ. ಡಬಲ್ ಎಂಜಿನ್ ಸರಕಾರದಿಂದ ಜನರ ಜೀವನ ಸುಧಾರಣೆಗೊಂಡಿದೆ ಎಂದು ಶ್ಲಾಘಿಸಿದರು.
ಹದಗೆಟ್ಟಿತ್ತು
ಕಾಂಗ್ರೆಸ್ನ ಅವಧಿಯಲ್ಲಿ ಎಚ್ಎಎಲ್ ಅನ್ನು ನಿರ್ನಾಮ ಮಾಡಲಾಗಿತ್ತು ಎಂದು ಪ್ರಧಾನಿ ಹೇಳಿ ದರು. ಐದು ವರ್ಷಗಳ ಹಿಂದೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಹಗರಣವನ್ನು ಪದೇ ಪದೆ ಪ್ರಸ್ತಾವ ಮಾಡು ತ್ತಿದ್ದುದನ್ನು ಪರೋಕ್ಷವಾಗಿ ಉಲ್ಲೇಖೀಸಿದ ಪ್ರಧಾನಿ, “ಐದು ವರ್ಷಗಳ ಹಿಂದೆ ಎಚ್ಎಎಲ್ ಬಗ್ಗೆ ಸುಳ್ಳು ಹೇಳಲಾಗುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೂಡ ತಪ್ಪು ಮಾಹಿತಿ ನೀಡಿದ್ದರು. ಗಡಿಯಲ್ಲಿ ದೇಶದ ಸೇನೆ ನಿಯೋಜನೆಗೊಂಡಿದ್ದ ವೇಳೆಯೇ ಇಂಥ ಆಟ ಆಡಲಾಗಿತ್ತು. ಕಾಂಗ್ರೆಸ್ ಕಾಲದಲ್ಲಿ ರಕ್ಷಣ ವ್ಯವಸ್ಥೆ ಹದಗೆಟ್ಟಿತ್ತು. ಅವರ ಕಾಲದಲ್ಲಿ ಎಲ್ಲವೂ ಲೂಟಿ ಆಗಿತ್ತು. ಅವರದ್ದು 85 ಪರ್ಸೆಂಟ್ ಕಮಿಷನ್ ಸರಕಾರ ಆಗಿತ್ತು’ ಎಂದು ಆರೋಪಿಸಿದರು.
ಕುವೆಂಪು ಕವನ ಉಲ್ಲೇಖ
ರಾಷ್ಟ್ರಕವಿ ಕುವೆಂಪು ಅವರು, “ಓ ಲಂಕಾ ಭಯಂಕರ ಸಮೀರ ಕುಮಾರ ಹೇ ಆಂಜನೇಯ’ ಎಂದು ಕವನವೊಂದರಲ್ಲಿ ಹಾಡಿ ಹೊಗಳಿದ್ದಾರೆ. ಆದರೆ ಜೈ ಬಜರಂಗ ಬಲಿ ಎಂದು ಕೂಗಿದರೆ ಕಾಂಗ್ರೆಸ್ಗೆ ತೊಂದರೆಯಾಗುತ್ತದೆ. ಆ ಪಕ್ಷದ ಮುಖಂಡರು ಮತಬ್ಯಾಂಕ್ಗೆ ಗುಲಾಮರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ನೀವು ಮತ ನೀಡಿದರೆ ಅಸ್ಥಿರ ಸರಕಾರಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ಬಾರಿ ಬಹುಮತದ ಬಿಜೆಪಿ ಸರಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೇರಳ ಸ್ಟೋರಿಯ ಪ್ರಸ್ತಾಪ
ಬಳ್ಳಾರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು “ದ ಕೇರಳ ಸ್ಟೋರಿ’ ಸಿನೆ ಮಾದ ಬಗ್ಗೆ ಪ್ರಸ್ತಾವ ಮಾಡಿ ದರು. ಸಿನೆಮಾದಲ್ಲಿ ಭಯೋತ್ಪಾದನೆ ಮತ್ತು ಅದರ ಹೀನ ಸಂಚಿನ ಬಗ್ಗೆ ಚಿತ್ರಿಸಲಾಗಿದೆ. ಕಾಂಗ್ರೆಸ್ ಮಾತ್ರ ಆ ಸಿನೆಮಾವನ್ನು ವಿರೋಧಿಸುತ್ತಿದೆ. ಜತೆಗೆ ಉಗ್ರರ ನಿಲುವಿಗೆ ಬೆಂಬಲ ನೀಡುತ್ತಿದೆ. ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಉಗ್ರರ ಸಮಸ್ಯೆಯನ್ನು ನಿರ್ಲಕ್ಷಿಸಿದೆ ಎಂದು ಪ್ರಧಾನಿ ದೂರಿದರು. ಸಿನೆಮಾದಲ್ಲಿ ಒಂದು ರಾಜ್ಯದ ಅಂಶದ ಬಗ್ಗೆ ಮಾತ್ರ ಪ್ರಸ್ತಾವಿಸಲಾಗಿದೆ ಎಂದರು.
ಇಂದು, ನಾಳೆ ಪ್ರಧಾನಿ ರೋಡ್ ಶೋ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ, ರವಿವಾರ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಗುಜರಾತ್ ಚುನಾವಣೆ ಬಳಿಕ ಪ್ರಧಾನಿ ಮೋದಿ ನಡೆಸಲಿರುವ ಅತೀ ದೊಡ್ಡ ರೋಡ್ ಶೋ ಇದಾಗಲಿದೆ.
ಬೆಂಗಳೂರಿನ ಒಟ್ಟು 17 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಂತೆ ಈ ರೋಡ್ ಶೋ ನಡೆಯಲಿದ್ದು, ಶನಿವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್ಬಿಐ ಮೈದಾನದಿಂದ ಆರಂಭಗೊಂಡು ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್ ವರೆಗೆ ನಡೆ ಯು ತ್ತದೆ. ಒಟ್ಟು 26.5 ಕಿ.ಮೀ. ವ್ಯಾಪ್ತಿಯಲ್ಲಿ ಮೋದಿ ಸಂಚರಿಸಲಿದ್ದಾರೆ.
ರವಿವಾರ ಬೆಳಗ್ಗೆ 9ರಿಂದ 11.30ರ ವರೆಗೆ ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದ ವರೆಗೆ 8 ಕಿ.ಮೀ. ರೋಡ್ ಶೋ ನಡೆಯಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಪರ ಅಲೆ ಮೂಡಿಸುವುದಕ್ಕಾಗಿ ಪ್ರಧಾನಿ ಅಖಾಡಕ್ಕೆ ಇಳಿದಿದ್ದಾರೆ. ಬಳ್ಳಾರಿ ಮತ್ತು ತುಮಕೂರು ಪ್ರಚಾರ ಮುಗಿಸಿ ಶುಕ್ರವಾರ ಸಂಜೆ 6.30ಕ್ಕೆ ಬೆಂಗಳೂರಿಗೆ ಆಗಮಿಸಿದ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು.