ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ
Team Udayavani, Nov 27, 2022, 10:18 AM IST
ಕೋಟ: ಮತದಾರರ ಮಾಹಿತಿ ಕಳವು ವಿಚಾರವಾಗಿ ಯಾವ ಮುಚ್ಚುಮರೆ ಇಲ್ಲದೆ ತನಿಖೆ ನಡೆಯುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ಹೆಚ್ಚಿನ ತನಿಖೆ ಮಾಡಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ತಿಳಿಸಿದರು.
ಶನಿವಾರ ಕೋಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಎಲ್ಲ ಕಾಲದಲ್ಲೂ ಆಗುತ್ತಿರುತ್ತದೆ. ಪಟ್ಟಿಯಲ್ಲಿ ಯಾವುದೇ ತಪ್ಪು ಒಪ್ಪುಗಳಿದ್ದರೂ ಪರಿಷ್ಕರಣೆ ಆಗಬೇಕು. ನಾವು ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಕೊಡುವುದಿಲ್ಲ. ನಮ್ಮ ಸರಕಾರ, ಪಕ್ಷ ಈ ವಿಚಾರದಲ್ಲಿ ಪಾರದರ್ಶಕವಾಗಿದೆ. ಗೊಂದಲ ಉಂಟು ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ನಾವು ಜನರ ಆಶೀರ್ವಾದ ಇರುವವರು, ಯಾವುದೇ ಅಡ್ಡ ದಾರಿಯಲ್ಲಿ ನಮಗೆ ನಂಬಿಕೆ ಇಲ್ಲ ಎಂದರು.
ಕಾರ್ಯಕರ್ತರಿಲ್ಲದ ಪಕ್ಷ ಕಾಂಗ್ರೆಸ್
ಕಾರ್ಯಕರ್ತರಿಲ್ಲದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ಸಿಗೆ ಜನರ ಆಶೀರ್ವಾದವೂ ಇಲ್ಲ. ಕಾಂಗ್ರೆಸ್ ಕುಟುಂಬದ ಪಕ್ಷ, ಚುನಾವಣ ಆಯೋಗ ಮಧ್ಯಪ್ರವೇಶ ಮಾಡಿರುವುದು ಸ್ವಾಗತ. ಮತದಾರರ ಸ್ವಾತಂತ್ರ್ಯ ರಕ್ಷಣೆಗೆ ಚುನಾವಣ ಆಯೋಗ ಇದೆ. ಮತದಾರರ ಹಕ್ಕನ್ನು ಯಾವ ಸಂದರ್ಭ ದಲ್ಲಿ ಯಾರೂ ಕಸಿಯಬಾರದು. ನನ್ನ ಕ್ಷೇತ್ರದಲ್ಲಿ ಇಂತಹ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ತನ್ನ ಹಿತ್ತಲು ನೋಡಿದರೆ ಅದರ ಹಣೆಬರಹ ತಿಳಿಯಲಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಮಹಾಪುರುಷರು ಯಾರು ಅನ್ನುವುದು ಬಯಲಾಗಬೇಕು. ಕಾಂಗ್ರೆಸ್ ಪಕ್ಷದ ನಾಯಕರ ಹಿತ್ತಲು ಬರೀ ಕೊಳಕು ಎಂದು ವಾಗ್ಧಾಳಿ ನಡಸಿದರು.
ಭಾರತೀಯತೆ ಗಡಿ ಮೀರಿದ ವಿಚಾರ
ಮಹಾರಾಷ್ಟ್ರದ ಧೋರಣೆಯನ್ನು ಖಂಡಿಸುತ್ತೇವೆ. ಇತ್ಯರ್ಥ ಆಗಿರುವ ವಿಚಾರವನ್ನು ಮತ್ತೆ ಮತ್ತೆ ಕೆದಕವುದು ಸರಿಯಲ್ಲ. ಜನರ ಭಾವನೆಯನ್ನು ಕೆರಳಿಸುವುದು ಖಂಡನೀಯ. ಇಂತಹ ವಿಚಾರಗಳಿಗೆ ನಾಗರಿಕರು ಬಲಿಯಾಗಬೇಡಿ.
ನಾವು ಜತೆಯಾಗಿ ಬದುಕಿ ಬಾಳಬೇಕು; ಪ್ರಚೋದನೆಗಳಿಗೆ ಬಲಿಯಾಗಬೇಡಿ. ನಾವೆಲ್ಲರೂ ಭಾರತೀಯರು ಎನ್ನುವ ಭಾವನೆಯಲ್ಲಿ ಮುಂದೆ ಸಾಗೋಣ. ಯಾವುದೇ ಅಹಿತಕರ ಘಟನೆ ಗಲಭೆೆ, ಗದ್ದಲಕ್ಕೆ ಅವಕಾಶವಿಲ್ಲದಂತೆ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಿವಸೇನೆ ತನ್ನ ರಾಜಕೀಯ ಅಸ್ತಿತ್ವಕ್ಕೆ ಬೇಕಾಗಿರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದೆ. ನೆಲಜಲದ ವಿಚಾರದಲ್ಲಿ ಯಾವುದೇ ಪ್ರಚೋದನೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಅಸ್ಸಾಂ: ಐರನ್, ಫೋಲಿಕ್ ಆಸಿಡ್ ಮಾತ್ರೆ ಸೇವಿಸಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ