ಬ್ರಹ್ಮಾವರ: ಬೊಲೆರೊ ಜೀಪ್ ಢಿಕ್ಕಿ: ಪಾದಚಾರಿ ಸಾವು
Team Udayavani, Jan 14, 2023, 12:38 AM IST
ಬ್ರಹ್ಮಾವರ: ಉಪ್ಪೂರು ಗ್ರಾಮದ ಕೆ.ಜಿ. ರೋಡ್ ಬಳಿ ರಾ.ಹೆ. 66ರಲ್ಲಿ ಶುಕ್ರವಾರ ಬೊಲೆರೊ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಆರೂರಿನ ಜಯಲಕ್ಷ್ಮೀ ಭಟ್ (69) ಮೃತಪಟ್ಟಿದ್ದಾರೆ.
ಅವರು ಕೆ.ಜಿ. ರೋಡ್ ಪೇಟೆ ಕಡೆಯಿಂದ ಬ್ರಹ್ಮಾವರ ಕಡೆಯ ಬಸ್ ನಿಲ್ದಾಣಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಉಡುಪಿಯತ್ತ ತೆರಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದೆ.
ತಲೆಗೆ ತೀವ್ರ ಗಾಯಗೊಂಡ ಅವರನ್ನು ತತ್ಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜಯಲಕ್ಷ್ಮೀ ಭಟ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಅವರು ಮೊಮ್ಮಗನ ಉಪನಯನ ದಿನಾಂಕ ಕುರಿತು ಮಾತನಾಡಿ ಮರಳಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.