Brahmavara: ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್ ಅಪಘಾತ; ತಪ್ಪಿದ ಭಾರೀ ಅನಾಹುತ
Team Udayavani, Jan 29, 2024, 6:41 PM IST
ಬ್ರಹ್ಮಾವರ: ಇಲ್ಲಿನ ಪೇಟೆಯಲ್ಲಿ ಸೋಮವಾರ ಸಂಜೆ ರಾ.ಹೆ. ವಾಹನ ಹಾಗೂ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿತು.
ಸಿಟಿ ಸೆಂಟರ್ ಬಳಿ ಹೆದ್ದಾರಿ ಮಣ್ಣು ಸ್ವಚ್ಚಗೊಳಿಸುವ ವಾಹನಕ್ಕೆ ಮಂಗಳೂರಿನಿಂದ ಕುಂದಾಪುರ ಕಡೆ ತೆರಳುತ್ತಿದ್ದ ಟ್ಯಾಂಕರ್ ಹಿಂದಿನಿಂದ ಢಿಕ್ಕಿ ಹೊಡೆಯಿತು.
ಅಪಘಾತದ ತೀವ್ರತೆಗೆ ರಾ.ಹೆ. ವಾಹನ ಬಲಭಾಗದ ಡಿವೈಡರ್ ಮೇಲೇರಿ ನಿಂತರೆ, ಟ್ಯಾಂಕರ್ ಎಡ ಬದಿಯ ಡಿವೈಡರ್ ಹಾಗೂ ಸರ್ವಿಸ್ ರಸ್ತೆ ದಾಟಿ ಚರಂಡಿಯ ಮೇಲೇರಿ ನಿಂತಿತು. ಸ್ವಲ್ಪ ಮುಂದಕ್ಕೆ ಚಲಿಸಿದ್ದರೂ ಪಕ್ಕದ ಕಣಿವೆಗೆ ಉರುಳುವ ಸಾಧ್ಯತೆ ಇದ್ದಿತ್ತು. ಚಾಲಕನ ಕಾಲಿಗೆ ತೀವ್ರ ಗಾಯವಾಗಿದೆ.
ತಪ್ಪಿದ ದುರಂತ:
ಅವಘಡ ನಡೆದ ಸ್ಥಳಕ್ಕೆ ತಾಗಿಕೊಂಡೇ ನೂರಾರು ಮನೆಗಳಿರುವ ಇಂದಿರಾನಗರ ಪ್ರದೇಶವಿದ್ದು, ಗ್ಯಾಸ್ ಸೋರಿಕೆಯಾದರೆ ಭಾರೀ ಅನಾಹುತವಾಗುತ್ತಿತ್ತು. ಅತಿ ಸಮೀಪದಲ್ಲೇ ವಿದ್ಯುತ್ ತಂತಿಗಳು ಹಾದುಹೋಗಿದೆ. ಹತ್ತಾರು ಶಾಲಾ ಬಸ್ಗಳು ಸಂಚರಿಸುತ್ತಿದ್ದ ಸಮಯದಲ್ಲೇ ಘಟನೆ ನಡೆದಿದ್ದು, ಅದೃಷ್ಟವಶಾತ್
ದುರಂತವೊಂದು ಕೂದಲೆಳೆಯಲ್ಲಿ ತಪ್ಪಿ ಹೋಗಿದೆ.
ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.