ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಇಳಿಕೆ; 15 ದಿನಗಳಲ್ಲಿ ಶೂನ್ಯ ಮರಣ ಪ್ರಕರಣ
Team Udayavani, Nov 21, 2020, 7:35 AM IST
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದಿನೇ ದಿನೆ ಕಡಿಮೆಯಾಗಿದ್ದು, ಕಳೆದ 15 ದಿನಗಳಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಶೂನ್ಯಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಇದುವರೆಗೆ 2,21,371 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನಿತ್ಯ ಸುಮಾರು 1,600 ರಿಂದ 2000 ಜನರ ಗಂಟಲ ಮಾದರಿ ಸಂಗ್ರಹಿಸಲಾಗುತ್ತಿದೆ. ಇದು
ವರೆಗೆ 22,470 ಜನರಿಗೆ ಪಾಸಿಟಿವ್ ವರದಿಯಾಗಿದ್ದು 22,073 ಮಂದಿ ಗುಣಮುಖರಾಗಿದ್ದಾರೆ. 211 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 64 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಹೋಂ ಐಸೋಲೇಶನ್ನಲ್ಲಿ ಇದ್ದಾರೆ.
ಶೂನ್ಯ ಮರಣ
ನ. 5ರಿಂದ 20 ವರೆಗೆ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಶೂನ್ಯ. ಇದಕ್ಕೆ ಕೋವಿಡ್ ಪ್ರಕರಣಗಳ ಇಳಿಕೆ ಹಾಗೂ ಸುಸಜ್ಜಿತ ವೈದ್ಯಕೀಯ ತಂಡ, ಆಸ್ಪತ್ರೆಗಳು ಮುಖ್ಯ ಕಾರಣ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. ಇಲ್ಲಿಯವರೆಗೆ ಒಟ್ಟು 187 ಮಂದಿ ಕೋವಿಡ್ನಿಂದ ಮೃತ ಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಇತರ ಕಾಯಿಲೆಗಳಿಂದ ಬಳಲುತ್ತಿರುವವರಾಗಿದ್ದಾರೆ. ಪ್ರಸ್ತುತ ಕೊರೊನಾ ಮರಣ ಪ್ರಮಾಣ ಶೇ. 0.8ರಷ್ಟು ಇದೆ.
ಕೋವಿಡ್ ದಾಖಲಾತಿ ಕುಸಿತ
ಪ್ರಸ್ತುತ ಪ್ರಕರಣಗಳ ಕಡಿಮೆ ಯಾದ ಹಿನ್ನೆಲೆಯಲ್ಲಿ ಕೆಲವು ಆಸ್ಪತ್ರೆಯಲ್ಲಿ ಕೊರೊನಾ ದಾಖಲಾತಿ ಶೂನ್ಯವಿದೆ ಹಾಗೂ ಖಾಸಗಿಯಲ್ಲಿ ಚಿಕಿತ್ಸೆ ಕಡ್ಡಾಯಗೊಳಿಸಿಲ್ಲ.
ಸಾರ್ವಜನಿಕರ ಜವಾಬ್ದಾರಿ
ಜಿಲ್ಲೆಯಲ್ಲಿ ಕೋವಿಡ್-19 ಹಿಡಿತಕ್ಕೆ ತರುವಲ್ಲಿ ವೈದ್ಯಕೀಯ ತಂಡ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಾಕಷ್ಟು ಶ್ರಮ ವಹಿಸಿದೆ. ಪ್ರಸ್ತುತ ಕೊರೊನಾ ಪ್ರಕರಣ ಕಡಿಮೆಯಾಗಿದೆ. ಈ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್ ತಿಳಿಸಿದರು.
ಕೋವಿಡ್ ಕೇರ್ ಸೆಂಟರ್ ಸ್ಥಗಿತ
ಈ ಹಿಂದೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿರ್ವಹಣೆಗಾಗಿ ಜಿಲ್ಲಾಡಳಿತ ಕಾರ್ಕಳದಲ್ಲಿ 1, ಉಡುಪಿಯಲ್ಲಿ 3, ಕುಂದಾಪುರದಲ್ಲಿ 1 ಸೇರಿದಂತೆ 5 ಕೋವಿಡ್ ಕೇರ್ ಸೆಂಟರ್ನಲ್ಲಿ 870 ಹಾಸಿಗೆಯನ್ನು ಸಿದ್ಧಪಡಿಸಿತ್ತು. ಪ್ರಸ್ತುತ ಪ್ರಕರಣ ಸಂಖ್ಯೆ ಇಳಿಮುಖವಾಗುತ್ತಿರುವುರಿಂದಾಗಿ ಕೋವಿಡ್ ಕೇರ್ ಸೆಂಟರ್ಗಳ ಅಗತ್ಯ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸೆಂಟರ್ ಅನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ಪ್ರಕರಣ ಹೆಚ್ಚಾದರೆ ಮತ್ತೆ ಸೆಂಟರ್ ಕಾರ್ಯಾಚರಿಸಲಿದೆ.