ಜಿಲ್ಲೆಯಲ್ಲಿ ಡಿಪಿಆರ್ ಸಿದ್ಧ
Team Udayavani, Jan 16, 2021, 4:00 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆ ಯೋಜನೆಗಳಾದ ಜಲಜೀವನ್ ಮಿಷನ್ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಸರ್ವರೀತಿಯ ತಯಾರಿ ನಡೆಯುತ್ತಿದೆ. ಈ ಬಗೆಗಿನ ಕೆಲಸಕಾರ್ಯಗಳು ಮುಂದಿನ 15-20 ದಿನಗಳಲ್ಲಿ ನಡೆಯುವ ಸಾಧ್ಯತೆಗಳಿವೆ. ಇದರಿಂದ ಜಿಲ್ಲೆಯ 94 ಸಾವಿರ ಮನೆಗಳಿಗೆ ನೀರು ಲಭಿಸುವ ಉದ್ದೇಶ ಹೊಂದಲಾಗಿದೆ.
ಈ ಯೋಜನೆಯಡಿ ಜಿಲ್ಲೆಯಲ್ಲಿ391 ಕಾಮಗಾರಿಗಳಿಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, 145 ಕೋ.ರೂ.ಅನುದಾನ ಮೀಸಲಿರಿಸಲಾಗಿದೆ. 150 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ.
ಕಾರ್ಕಳ ತಾಲೂಕಿನಲ್ಲಿ ಗರಿಷ್ಠ ಕಾಮಗಾರಿ :
ಈ ಯೋಜನೆಯಂತೆ ಜಿಲ್ಲೆಯ ಕಾರ್ಕಳ ತಾಲೂಕಿಗೆ 242 ಡಿಪಿಆರ್ಸಿದ್ಧಪಡಿಸಲಾಗಿದ್ದು, ಒಟ್ಟು 61 ಕೋ.ರೂ.ಗಳ ಕಾಮಗಾರಿ ನಡೆಯಲಿದೆ. ಕುಂದಾಪುರ ತಾಲೂಕಿನಲ್ಲಿ 85 ಡಿಪಿಆರ್ ಸಿದ್ದಪಡಿಸಲಾಗಿದ್ದು, 36 ಕೋ.ರೂ. ಮೀಸಲಿರಿಸಲಾಗಿದೆ. ಉಡುಪಿ ತಾಲೂಕಿನಲ್ಲಿ 64 ಡಿಪಿಆರ್ ಸಿದ್ಧಪಡಿಸ ಲಾಗಿದ್ದು, 48 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ.
ಕಾರ್ಕಳ ತಾಲೂಕಿನ 34 ಗ್ರಾ.ಪಂ.ಗಳ 50 ಗ್ರಾಮಗಳಲ್ಲಿ, ಕುಂದಾಪುರ ತಾಲೂಕಿನ 23 ಗ್ರಾ.ಪಂ.ಗಳ 35 ಗ್ರಾಮಗಳಲ್ಲಿ, ಉಡುಪಿ ತಾಲೂಕಿನ 33 ಗ್ರಾಮ ಪಂಚಾಯತ್ಗಳ 55 ಗ್ರಾಮಗಳು ಸೇರಿದಂತೆ 90 ಗ್ರಾ.ಪಂ.ಗಳ 140 ಗ್ರಾಮ ಗಳಲ್ಲಿ ಈ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.
ಏನಿದು ಜಲ ಜೀವನ್ ಮಿಷನ್? :
ಕೇಂದ್ರ ಸರಕಾರ ಜೆಜೆ ಮಿಷನ್ ಅನ್ನು ಆ.2019 ರಲ್ಲಿ ಘೋಷಿಸಿತು. 2024ರ ವೇಳೆಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರು ಸರಬರಾಜು ಒದಗಿಸು ವುದು ಈ ಮಿಷನ್ನ ಉದ್ದೇಶ. ದೇಶಾದ್ಯಂತ ಸುಸ್ಥಿರ ನೀರು ಸರಬರಾಜು ನಿರ್ವಹಣೆಯ ಉದ್ದೇಶಗಳನ್ನು ಸಾಧಿಸಲು ಕೇಂದ್ರ, ರಾಜ್ಯ ಸರಕಾರಗಳು ಒಂದಾಗಿವೆ.
ಜೀವನ್ ಮಿಷನ್ ಗುರಿ : ಮಳೆನೀರು ಕೊಯ್ಲು, ಅಂತರ್ಜಲ ಪುನರ್ಭರ್ತಿ, ಕೃಷಿಯಲ್ಲಿ ಮರುಬಳಕೆಗಾಗಿ ಮನೆಯ ತ್ಯಾಜ್ಯ ನೀರನ್ನು ನಿರ್ವಹಿಸಲು ಸ್ಥಳೀಯ ಮೂಲ ಸೌಕರ್ಯ ರಚಿಸುವ ಗುರಿಯನ್ನು ಹೊಂದಿದೆ. ಜತೆಗೆ, ಪಾಯಿಂಟ್ ರೀಚಾರ್ಜ್, ಸಣ್ಣ ನೀರಾವರಿ ಟ್ಯಾಂಕ್ಗಳ ನಿರ್ಜಲೀಕರಣ, ಕೃಷಿಗೆ ಗ್ರೇ ವಾಟರ್ ಬಳಕೆ ಮತ್ತು ಮೂಲ ಸುಸ್ಥಿರತೆಯಂತಹ ವಿವಿಧ ನೀರಿನ ಸಂರಕ್ಷಣಾ ಪ್ರಯತ್ನ ಗಳನ್ನೂ ಆಧರಿಸಿದೆ.
ನೀರಿನ ಬೇಡಿಕೆ,ಪೂರೈಕೆಗೆ ಕ್ರಮ :
ಅಂತರ್ಜಲ ಮಟ್ಟ ಕಡಿಮೆಯಾಗು ತ್ತಿರುವುದರಿಂದ, ಇಂದು ದೇಶದಲ್ಲಿ ನೀರಿನ ಸಂರಕ್ಷಣೆಯ ತುರ್ತು ಅವಶ್ಯಕತೆಯಾಗಿದೆ. ಆದ್ದರಿಂದ, ಜಲಜೀವನ್ ಮಿಷನ್ ಸ್ಥಳೀಯ ಮಟ್ಟದಲ್ಲಿ ಸಮಗ್ರ ಬೇಡಿಕೆ ಮತ್ತು ನೀರಿನ ಪೂರೈಕೆ ನಿರ್ವಹಣೆಯತ್ತ ಗಮನ ಹರಿಸಲಿದೆ.
ಬೈಂದೂರಿಗೆ ಪ್ರತ್ಯೇಕ ಡಿಪಿಆರ್ :
ಬೈಂದೂರು ತಾಲೂಕಿಗೆ ನಬಾರ್ಡ್ ಯೋಜನೆಯಡಿ ಪ್ರತ್ಯೇಕ ಡಿಪಿಆರ್ ಸಿದ್ದಪಡಿಸಲು ಯೋಜನೆ ರೂಪಿಸ ಲಾಗುತ್ತಿದೆ. ಇದು ಇನ್ನಷ್ಟೇ ಜಾರಿ ಯಾಗಬೇಕಿದೆ. ಈ ಬಗೆಗಿನ ಪ್ರಕ್ರಿಯೆ ಗಳು ಈಗ ಚಾಲ್ತಿಯಲ್ಲಿದೆ.
ಜಲಜೀವನ್ ಯೋಜನೆ ಮೂಲಕ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರಥಮ ಹಂತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿವೆ. ಕಾಮಗಾರಿಯ ಮೇಲೆ ಹಣ ಬಿಡುಗಡೆ ಆಗಲಿದೆ. 15-20 ದಿನಗಳೊಳಗೆ ಕಾಮಗಾರಿ ಪ್ರಕ್ರಿಯೆ ಜಿಲ್ಲೆಯಾದ್ಯಂತ ಆರಂಭವಾಗಲಿದೆ.–ಡಾ| ನವೀನ್ ಭಟ್, ಜಿ.ಪಂ.ಸಿಇಒ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ