ಗಂಗೊಳ್ಳಿ: ಬೋಟ್ಗಳಿಗೆ ಕರಾವಳಿ ಕಾವಲು ಪಡೆ ಸ್ಟಿಕ್ಕರ್
Team Udayavani, Jan 22, 2019, 12:50 AM IST
ಗಂಗೊಳ್ಳಿ: ಶಿರೂರಿನ ಅಳ್ವೆಗದ್ದೆಯಿಂದ ಕೋಟತಟ್ಟುವರೆಗಿನ ಬೋಟ್ಗಳಿಗೆ, ಕರಾವಳಿ ಕಾವಲು ಪಡೆಯ ಪೊಲೀಸರಿಂದ ವಿಶೇಷ ಸ್ಟಿಕ್ಕರ್ ನೀಡಲಾಗಿದೆ. ಯಾವುದಾದರೂ ಅನಾಹುತ, ಅವಘಡ ಸಂಭವಿಸಿದ ತತ್ಕ್ಷಣ ಇಲಾಖೆಗೆ ಮಾಹಿತಿ ನೀಡುವಲ್ಲಿ ನೆರವಾಗಲು ಈ ಕ್ರಮ ಜಾರಿಗೊಳಿಸಲಾಗಿದೆ.
ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ್ ನಾಯ್ಕ ಮಾರ್ಗದರ್ಶನದಲ್ಲಿ ಸಹಾಯಕ ಉಪ ನಿರೀಕ್ಷಕ ಆಗಸ್ಟಿನ್ ಕ್ವಾಡ್ರರ್ಸ್, ಹೆಡ್ ಕಾನ್ಸ್ಸ್ಟೇಬಲ್ ಸುರೇಶ್ ಹಾಗೂ ಸಿಬಂದಿ ಸ್ಟಿಕ್ಕರ್ಗಳನ್ನು ಮೀನುಗಾರರಿಗೆ ವಿತರಿಸಿದರು.
ಸ್ಟಿಕ್ಕರ್ ಪಡೆಯಲು ಮನವಿ
ಈ ಸ್ಟಿಕ್ಕರ್ನಲ್ಲಿ ಕರಾವಳಿ ಕಾವಲು ಪಡೆಯ ಟೋಲ್ ಫ್ರೀ ದೂರವಾಣಿ ಸಂಖ್ಯೆ, ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ, ಠಾಣಾ ದೂರವಾಣಿ ಸಂಖ್ಯೆ, ಪೊಲೀಸ್ ಉಪ ನಿರೀಕ್ಷಕರ ಸಂಖ್ಯೆಯನ್ನು ನೀಡಲಾಗಿದೆ. ಈ ಸ್ಟಿಕ್ಕರ್ಗಳನ್ನು ಎಲ್ಲ ಬೋಟುಗಳ ಮಾಲಕರು ಪಡೆದು ಅಂಟಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನಿಗೂಢವಾಗಿ ನಾಪತ್ತೆಯಾಗಿ 38 ದಿನಗಳಾದರೂ ಇನ್ನೂ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ತುರ್ತು ಸಂದರ್ಭದಲ್ಲಿ ನೆರವಾಗಲು ಈ ಸ್ಟಿಕ್ಕರ್ಗಳನ್ನು ಮೀನುಗಾರರಿಗೆ ಉಚಿತವಾಗಿ ವಿತರಿಸುತ್ತಿದೆ.
2,000ಕ್ಕೂ ಹೆಚ್ಚು ಸ್ಟಿಕ್ಕರ್
ಗಂಗೊಳ್ಳಿ, ಮರವಂತೆ, ಉಪ್ಪುಂದ, ಕೊಡೇರಿ, ಶಿರೂರು ಅಳ್ವಗದ್ದೆ ಸೇರಿ ಸುಮಾರು 2,000 ಕ್ಕೂ ಹೆಚ್ಚಿನ ಸ್ಟೀಲ್ ಬೋಟುಗಳು, ನಾಡದೋಣಿಗಳು, ಪರ್ಸಿನ್, ಗಿಲ್ನೆಟ್ ಬೋಟುಗಳಿಗೆ ಈ ಸ್ಟಿಕ್ಕರ್ ನೀಡಲಾಗುವುದಾಗಿ ಕರಾವಳಿ ಕಾವಲು ಪಡೆಯ ಪೊಲೀಸರು ತಿಳಿಸಿದ್ದಾರೆ.