ಯಕ್ಷಗಾನದ ಬೆಳವಣಿಗೆಗೆ ಮಹತ್ತರ ಕೊಡುಗೆ: ನಿರುಪಮಾ ಪ್ರಸಾದ್
Team Udayavani, Mar 12, 2019, 1:00 AM IST
ಕಟಪಾಡಿ: ಕಳೆದ 11 ವರ್ಷಗಳಿಂದಲೂ ಸಂಗಮ ಸಾಂಸ್ಕೃತಿಕ ವೇದಿಕೆಯ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತÂ, ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಇದೀಗ ಗಂಡುಕಲೆಯಾದ ಯಕ್ಷಗಾನವನ್ನು ತರಬೇತಿ ನೀಡಿ ಪ್ರದರ್ಶನಕ್ಕೆ ಸಜ್ಜುಗೊಳಿಸುವ ಮೂಲಕ ಯಕ್ಷಗಾನಕ್ಕೆ ಗೌರವ ನೀಡಿದಂತಾಗಿದೆ. ಸಂಸ್ಥೆಯ ಈ ಪರಿಶ್ರಮ ನಿಜಕ್ಕೂ ಮಾದರಿಯಾಗಿದ್ದು, ಯಕ್ಷಗಾನದ ಬೆಳವಣಿಗೆಗೆ ಮಹತ್ತರ ಕೊಡುಗೆಯಾಗಿದೆ ಎಂದು ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಟ್ರಸ್ಟಿ ನಿರುಪಮಾ ಪ್ರಸಾದ್ ಹೇಳಿದರು.
ರವಿವಾರ ಉದ್ಯಾವರ ಕುತ್ಪಾಡಿ ಶಾಲಾ ವಠಾರದಲ್ಲಿ ಸಂಗಮ ಸಾಂಸ್ಕೃತಿಕ ವೇದಿಕೆಯ 11ನೇ ವರ್ಷದ ಸಂಗಮ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಡಿ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ, ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆಗೆ ಹೆಚ್ಚು ಪ್ರೋತ್ಸಾ ಹ ನೀಡುವ ಜೊತೆಗೆ ಸಮಾಜಮುಖೀಯಾಗಿ ಹಲವಾರು ಕುಟುಂಬಕ್ಕೆ ಆಸರೆಯಾಗಿ ಕೈ ಜೋಡಿಸುವ ಮೂಲಕ ಗುರುತರವಾದ ಸಮಾಜ ಸೇವೆಯನ್ನೂ ನಿಭಾಯಿಸಿರುವುದು ಶ್ಲಾಘನೀಯ ಎಂದರು.
ಪಿತ್ರೋಡಿ 14ಪಟ್ನ ಮೊಗವೀರ ಗ್ರಾಮಸಭಾದ ಅಧ್ಯಕ್ಷ ಕೇಶವ ಎಂ. ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಮಂಡಲ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್, ತಾ.ಪಂ. ಸದಸ್ಯೆ ಶಿಲ್ಪಾರವೀಂದ್ರ ಕೋಟ್ಯಾನ್, ಪ್ರಗತಿಪರ ಕೃಷಿಕ ಜೂಲಿಯನ್ ದಾಂತಿ, ವಕೀಲ ಜಯಶಂಕರ್ ಕುತ್ಪಾಡಿ, ಕಡೆಕಾರ್ ಗ್ರಾ.ಪಂ. ಉಪಾಧ್ಯಕ್ಷೆ ಮಾಲತಿವಿಶ್ವನಾಥ್ ಶೆಟ್ಟಿ, ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ, ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್, ವೇದಿಕೆಯ ಮಹಿಳಾ ಸಂಚಾಲಕಿ ಗೀತಾಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗಮ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಮಾಧವ ಅಮೀನ್ ಸ್ವಾಗತಿಸಿದರು. ಗೌರವಾಧ್ಯಕ್ಷ ಗಣೇಶ್ ಕುಮಾರ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಜಿ.ಎನ್. ಕೋಟ್ಯಾನ್ ವಂದಿಸಿದರು. ಪ್ರತಾಪ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.