ಹಿರ್ಗಾನ: ಬಸ್ಸಿಗೆ ಬೈಕ್ ಢಿಕ್ಕಿ; ಸವಾರ ಸಾವು
ವಿದೇಶಕ್ಕೆ ತೆರಳಲು ವೈದ್ಯಕೀಯ ಪತ್ರ ಪಡೆದು ವಾಪಸಾಗುತ್ತಿದ್ದಾಗ ಘಟನೆ
Team Udayavani, Mar 2, 2023, 6:55 AM IST
ಕಾರ್ಕಳ: ಕಾರ್ಕಳ- ಹಿರ್ಗಾನ ಮಾರ್ಗದ ಮಧ್ಯೆ ಮುಜೂರು ಗೊರಟ್ಟಿ ಚರ್ಚ್ ಸಮೀಪದ ಅಮ್ಮಾಸ್ ಡಾಬಾ ಬಳಿ ಬಸ್ಗೆ ಬೈಕ್ ಢಿಕ್ಕಿ ಹೊಡೆದು ಹಿರ್ಗಾನ ಕಾನಂಜಿ ಹಂಕಾರಬೆಟ್ಟು ನಿವಾಸಿ ಬೈಕ್ ಸವಾರ ಮನೋಹರ ಪೂಜಾರಿ (43) ಮೃತಪಟ್ಟ ಘಟನೆ ಬುಧವಾರ ರಾತ್ರಿ 7.45ರ ಸುಮಾರಿಗೆ ನಡೆದಿದೆ.
ಬಸ್ಸು ಕಾರ್ಕಳದಿಂದ ಹೆಬ್ರಿ ಕಡೆಗೆ ತೆರಳುತ್ತಿತ್ತು. ಬಸ್ಸು ಚಾಲಕ ಬಸ್ಸು ನಿಲ್ಲಿಸಿ ಹೊರಡುವಷ್ಟರ ವೇಳೆಗೆ ಹಿಂದಿನಿಂದ ಬೈಕ್ ಢಿಕ್ಕಿ ಹೊಡೆದಿದೆ. ಸವಾರನ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಘಟನೆ ನಡೆದ ಸ್ಥಳ ನೇರ ದಾರಿಯಾಗಿದ್ದು, ಅಪಾಯಕಾರಿ ಸ್ಥಳವಾಗಿರಲಿಲ್ಲ.
ಮನೋಹರ ಪೂಜಾರಿ ತನ್ನ ಬೈಕಿನಲ್ಲಿ ಬುಧವಾರ ರಾತ್ರಿ ವೇಳೆಗೆ ಕಾರ್ಕಳ ಕಡೆಯಿಂದ ಹಿರ್ಗಾನ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಹೋಗುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಕ್ಕೆ ಹೋಗುವವರಿದ್ದರು
ಮೃತ ಮನೋಹರ ಪೂಜಾರಿ ಬಹೆರೈನ್ನಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಮರಳಿದ್ದರು. ಮುಂದಿನ ಕೆಲವೇ ದಿನಗಳಲ್ಲಿ ಅವರು ವಿದೇಶಕ್ಕೆ ತೆರಳುವವರಿದ್ದರು. ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಇದಕ್ಕೆಂದು ಕಾರ್ಕಳಕ್ಕೆ ಬಂದು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ದೈಹಿಕ ದೃಢತೆ ಪ್ರಮಾಣ ಪತ್ರ ತರಲು ಕಾರ್ಕಳಕ್ಕೆ ಹೋಗಿ ವಾಪಸು ಮನೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಮೃತರು ವಿವಾಹಿತರಾಗಿದ್ದು, ಪತ್ನಿ, ಕಾಲೇಜು ಶಿಕ್ಷಣ ಪಡೆಯುತ್ತಿರುವ ಪುತ್ರಿಯನ್ನು ಅಗಲಿದ್ದಾರೆ.