ಸೊರಗುತ್ತಿದೆ ವಸತಿ ರಹಿತರ ಆಶ್ರಯ ಕೇಂದ್ರ
ಸರಕಾರದಿಂದ 4 ಲಕ್ಷ ರೂ. ಬಿಲ್ ಬಾಕಿ
Team Udayavani, Nov 29, 2021, 7:01 AM IST
ಉಡುಪಿ: ನಗರದ ಬೀಡಿನಗುಡ್ಡೆಯಲ್ಲಿ 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿರಹಿತರ ಆಶ್ರಯ ಕೇಂದ್ರ ನಿರ್ವಹಣೆ, ಸೌಕರ್ಯವಿಲ್ಲದೆ ಸೊರಗುವಂತಾಗಿದೆ.
2015-16ರಲ್ಲಿ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗಿ ವರ್ಷ ಕಳೆದರೂ ಕೇಂದ್ರವು ವಸತಿ ರಹಿತರಿಗೆ ಸೂರಾಗಿರಲಿಲ್ಲ. ಅನಂತರ 2017ರಿಂದ ಕೇಂದ್ರವು ವಸತಿರಹಿತರಿಗೆ ಕಾರ್ಯಾರಂಭಗೊಂಡು ಉತ್ತಮವಾಗಿ ಸಾಗುತ್ತಿತ್ತು. ಸರಕಾರ ಕಳೆದೊಂದು ವರ್ಷದಿಂದ ನಿರ್ವಹಣೆ ಮಾಡುವ ಸಂಸ್ಥೆಗೆ ಬಿಲ್ ಬಾಕಿ ಇಟ್ಟ ಪರಿಣಾಮ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಂತಾಗಿದೆ.
ನಗರಕ್ಕೆ ಉದ್ಯೋಗ ಅರಸಿ ಅಥವಾ ಇನ್ನೂ ಯಾವುದೋ ಕಾರಣಗಳಿಂದ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕಗಳಿಂದ ಇಲ್ಲಿಗೆ ಕಾರ್ಮಿಕರು ವಲಸೆ ಬರುತಿದ್ದಾರೆ. ಹೀಗೆ ಬಂದ ಹಲವರಲ್ಲಿ ನಿರ್ಗತಿಕರು ಹೆಚ್ಚಾಗಿರುತ್ತಾರೆ. ತಂಗಲು ಜಾಗವಿಲ್ಲದೆ ಬಸ್, ನಿಲ್ದಾಣ, ಖಾಲಿ ಕಟ್ಟಡ, ಅಂಗಡಿ ಮುಂಗಟ್ಟುಗಳ ಎದುರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರಿಗೆ ಸೂರು ಕಲ್ಪಿಸಿ, ಜೀವನ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ನಗರದ ಬೀಡಿನಗುಡ್ಡೆಯಲ್ಲಿ ನಗರ ವಸತಿರಹಿತರಿಗೆ ಆಶ್ರಯ ಕಟ್ಟಡ ನಿರ್ಮಿಸಲಾಗಿದೆ.
33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
ರಾಷ್ಟ್ರೀಯ ನಗರ ಜೀವನೋಪಾಯ ಅಭಿ ಯಾನ, ದೀನ ದಯಾಳ್ ಅಂತ್ಯೋದಯ ಯೋಜನೆ ಯಡಿಯಲ್ಲಿ ನಗರಸಭೆ ವತಿಯಿಂದ 33 ಲಕ್ಷ ರೂ. ವೆಚ್ಚದಲ್ಲಿ ವಸತಿರಹಿತರಿಗೆ ಈ ಆಶ್ರಯ ಕೇಂದ್ರ ನಿರ್ಮಿಸಲಾಗಿದೆ. ಬಿಸಿನೀರಿಗೆ ಸೋಲಾರ್, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ, ಅಡುಗೆ ಕೋಣೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಈ ಕಟ್ಟಡಕ್ಕೆ ಒದಗಿಸಲಾಗಿದೆ. ಹಾಸಿಗೆ, ಮಂಚ, ಟಿವಿ, ಬೆಡ್ಶೀಟ್ ಸೌಲಭ್ಯಗಳನ್ನು ನಿರ್ವಹಣೆ ವಹಿಸಿಕೊಂಡ ಸಂಸ್ಥೆ ನಿರಾಶ್ರಿತರಿಗೆ ಒದಗಿಸುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಣೆ ಇಲ್ಲಿದೆ. ಇದರಲ್ಲಿ 20ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಬಹುದು. ಪ್ರಸ್ತುತ ಒಬ್ಬರು ಮಹಿಳೆ, ಐವರು ಪುರುಷರು ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ವರ್ಷದಿಂದ ಬಿಲ್ ಪಾವತಿ
ನಿಯಮ ಪ್ರಕಾರ ಕಟ್ಟಡದ ನಿರ್ವಹಣೆ ನಗರಸಭೆ ವಹಿಸಿಕೊಳ್ಳುವಂತಿಲ್ಲ. ಕೇಂದ್ರದ ನಿರ್ವಹಣೆಯನ್ನು ಸನ್ನಿಧಿ ಎಂಬ ಮಹಿಳಾ ಸ್ವಸಹಾಯ ಸಂಘಕ್ಕೆ ನೀಡಲಾಗಿದೆ. ಸಂಘವು ಒಬ್ಬ ಮ್ಯಾನೇಜರ್ ಮತ್ತು ಇಬ್ಬರು ಕೇರ್ಟೇಕರ್ಗಳನ್ನು ನೇಮಿಸಿ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿದ್ದಾರೆ. ವಾರ್ಷಿಕ 4 ಲಕ್ಷ ರೂ., ಬಿಲ್ ಪಾವತಿ ಮಾಡಲಾಗುತ್ತದೆ. ಆದರೆ ಸರಕಾರ ಒಂದು ವರ್ಷದಿಂದ ಬಿಲ್ ಬಾಕಿ ಇರಿಸಿದ ಕಾರಣ ನಿರಾಶ್ರಿತರ ಊಟ, ತಿಂಡಿ, ಸ್ವತ್ಛತೆ ಕಾರ್ಯಕ್ಕೆ ಸಂಘವು ಆರ್ಥಿಕ ಸಂಕಷ್ಟದ ನಡುವೆಯೂ ಸ್ವಂತ ಖರ್ಚಿನಿಂದ ಹಣ ಭರಿಸುತ್ತಿದೆ.
ಕಟ್ಟಡಕ್ಕೆ ಕಾಯಕಲ್ಪ ಹೇಗೆ ?
ಕಟ್ಟಡದ ಮುಂಭಾಗದಲ್ಲಿ ಕಾಂಪೌಂಡ್ ವಾಲ್ ಸಹಿತ ಗೇಟ್ ವ್ಯವಸ್ಥೆ ಇಲ್ಲದಿರುವುದು ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ. ಕೂಡಲೇ ಕೇಂದ್ರಕ್ಕೆ ಕಾಂಪೌಂಡ್ ವಾಲ್, ಗೇಟ್ ವ್ಯವಸ್ಥೆ ಆಗಬೇಕು. ಕಟ್ಟಡ ನಿರ್ಮಿಸುವಾಗ ನಿರ್ಲಕ್ಷ್ಯ ವಹಿಸಿ ತಾರಸಿ ಮೇಲೆ ಹೋಗಲು ಮೆಟ್ಟಿಲನ್ನು ನಿರ್ಮಿಸದೆ ಹಾಗೇ ಬಿಟ್ಟಿರುತ್ತಾರೆ. ಪರಿಣಾಮ ಹಲವು ವರ್ಷಗಳಿಂದ ತಾರಸಿಯನ್ನು ಮತ್ತು ನೀರಿನ ಟ್ಯಾಂಕ್ ಅನ್ನು ಸ್ವತ್ಛ ಮಾಡಲು ಸಾಧ್ಯವಾಗಿಲ್ಲ. ಮಳೆ ದಿನಗಳಲ್ಲಿ ಹಲವು ದಿನಗಳು ನೀರು ನಿಂತು ಸೊಳ್ಳೆ ಉತ್ಪಾದನೆಗೆ ಕಾರಣವಾಗುತ್ತಿದೆ. ತಾರಸಿ ಮೇಲೆ ಹೋಗಲು ಕಟ್ಟಡಕ್ಕೆ ಮೆಟ್ಟಿಲು ನಿರ್ಮಾಣದ ಅಗತ್ಯವಿದೆ. ಕಟ್ಟಡದ ಗೋಡೆಗಳ ಬಣ್ಣ ಮಾಸಿದ್ದು, ಪೈಂಟಿಂಗ್ ಆಗಬೇಕಿದೆ, ಕಟ್ಟಡದ ಒಳಗೆ ಪಾತ್ರೆ ತೊಳೆಯುವ ಸಿಂಕ್ ವ್ಯವಸ್ಥೆ ಮಾಡಿಲ್ಲ.
ಪರಿಶೀಲಿಸಿ ಸೂಕ್ತ ಕ್ರಮ
ವಸತಿ ರಹಿತರ ಆಶ್ರಯಕ್ಕೆ ಕೇಂದ್ರದ ನಿರ್ವಹಣೆ ವಹಿಸಿಕೊಂಡ ಸಂಸ್ಥೆಗೆ ಕಳೆದ ಮಾರ್ಚ್ನಲ್ಲಿ ಸರಕಾರದಿಂದ ಬಿಲ್ ಪಾವತಿಯಾಗಬೇಕಿತ್ತು, ಕಾರಣಾಂತರದಿಂದ ತಡವಾಗಿದೆ. ಇದೀಗ ಸರಕಾರದ ಹಂತದಲ್ಲಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಬಿಲ್ ಪಾವತಿ ಆಗಲಿದೆ. ಕಟ್ಟಡದ ಕಾಯಕಲ್ಪಕ್ಕೆ ತಾರಸಿಗೆ ಹೋಗುವ ಮೆಟ್ಟಿಲು, ಕಟ್ಟಡಕ್ಕೆ ಪೈಂಟಿಂಗ್ ಸಹಿತ ಇನ್ನಿತರ ಸೌಕರ್ಯಗಳ ಅಗತ್ಯತೆ ಬಗ್ಗೆ ಪರಿಶೀಲಿಸಿ ನಗರಸಭೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ನಾರಾಯಣ ಎಸ್.ಎಸ್. , ಸಮುದಾಯ ಅಭಿವೃದ್ಧಿ ಅಧಿಕಾರಿ, ನಗರಸಭೆ
– ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ