ಹೊಸಂಗಡಿ: ವಾರಾಹಿ ಬುಡದಲ್ಲೇ ಕುಡಿಯಲು ನೀರಿಲ್ಲ !
Team Udayavani, Apr 9, 2019, 6:30 AM IST
ಕುಂದಾಪುರ: ಇಲ್ಲಿ ಏಷ್ಯಾದಲ್ಲೇ ಎರಡನೆಯ ಅತಿದೊಡ್ಡ ಭೂಗರ್ಭ ವಿದ್ಯುದಾಗಾರವಿದೆ. ವಾರಾಹಿ ಏತನೀರಾವರಿ ಯೋಜನೆ ಕಳೆದ ಮೂರೂವರೆ ದಶಕಗಳಿಂದ ನಿರಂತರ ಮುಂದುವರಿಯುತ್ತಿ ರುವ ಕಾಮಗಾರಿಯಾಗಿ ಪ್ರಸಿದ್ಧ. ಈ ಯೋಜನೆಯಿಂದಾಗಿ ಅನೇಕ ಕಡೆಗೆ ನೀರಾವರಿಗೆ ವ್ಯವಸ್ಥೆಯಾಗಿದೆ.
ಇನ್ನಷ್ಟು ಕಡೆಗೆ ಆಗಲಿದೆ. ಆದರೆ ಇಲ್ಲೇ ನದಿ ಹರಿಯುತ್ತಿದ್ದರೂ ಹೊಸಂಗಡಿಗೆ ಮಾತ್ರ ಪ್ರಯೋಜನ ಆಗಿಲ್ಲ. ಈ ಬಾರಿ ಹಿಂದೆಂದಿಗಿಂತ ಬಹಳ ಬೇಗನೇ ನೀರಿನ ಸಮಸ್ಯೆ ಇಲ್ಲಿ ಕಾಣಿಸಿಕೊಂಡಿದೆ.
ಹೊಸಂಗಡಿ ಪೇಟೆ ವಾಸಿಗಳಿಗೆ ಕುಡಿಯಲು ನೀರಿಲ್ಲ, ಸ್ಥಳೀಯರ ಬಹುತೇಕ ಬಾವಿಗಳು ಬತ್ತಿ ಹೋಗಿದ್ದು ದೂರದ ಊರುಗಳಿಂದ ಸೈಕಲ್, ಬೈಕ್, ವ್ಯಾನ್ಗಳಲ್ಲಿ ಜನರು ಕುಡಿಯುವ ನೀರು ತರುವ ಪರಿಸ್ಥಿತಿ ಬಂದಿದೆ. ಟಾಟಾ ಏಸ್, 407 ವಾಹನಗಳಲ್ಲಿ ಟ್ಯಾಂಕ್ ಮೂಲಕ ನೀರು ಖರೀದಿ ಮಾಡುತ್ತಿದ್ದಾರೆ.ಜಲ ವಿದ್ಯುದಾಗಾರದಿಂದ ಕೇವಲ ಎರಡು ಕಿ.ಮೀ. ದೂರದ ಬಾಗಿಮನೆ ಎಂಬಲ್ಲಿ ನೀರು ಹೊರಬಂದರು ಪೇಟೆಯಲ್ಲಿ ನೀರಿಲ್ಲದ ಸ್ಥಿತಿ ಇದೆ. ಮೇಲ್ಬಾಗಿಮನೆ, ಕೆಳಬಾಗಿಮನೆ ಪರಿಸರಕ್ಕೆ ಸಂಡೂರು ಜಲವಿದ್ಯುತ್ ಯೋಜನೆ ಮೂಲಕ ನೀರು ಸರಬರಾಜಾಗುತ್ತಿದೆ.
ಎಲ್ಲೆಲ್ಲಿ ನೀರಿಲ್ಲ
ಹೊಸಂಗಡಿ ಪೇಟೆಯಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮನೆಗಳಿಗೆ ನೀರಿಲ್ಲ. ಅಂತೆಯೇ ಭದ್ರಾಪುರ, ಮಾವಿನಮನೆ, ಕಾರೂರು, ರಾಂಪನಜೆಡ್ಡು, ಬೆದ್ರಳ್ಳಿ, ಹೆಗ್ಗೊàಡ್ಲು, ಕೆರೆಕಟ್ಟೆ ಮೊದಲಾದ ಕಡೆ ಬಾವಿ ಗಳು ಬತ್ತಿ ಹೋಗಿವೆ.
ಕೋಟೆಕೆರೆ
ನಾಲ್ಕು ವರ್ಷಗಳ ಹಿಂದೆ ಕೋಟೆಕೆರೆಯ ಹೂಳೆತ್ತಿದ ಕಾರಣ ಈವರೆಗೆ ನೀರಿಗೆ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಹೂಳು ತುಂಬಿದ ಕಾರಣ ಕೋಟೆಕೆರೆಯಲ್ಲಿ ನೀರು ಆರಿದೆ. ಇದರಿಂದ ಈ ಭಾಗದ ಪರಿಸರದ ಬಾವಿಗಳಿಗೆ ಸಮಸ್ಯೆಯಾಗಿದೆ.
ವಾರಾಹಿ ನೀರನ್ನು ಕೋಟೆಕೆರೆ ಗಿಂತಲೂ ಮೇಲೆ ಇರುವ ಬಾಕಲ್ಕೆರೆಗೆ ಹರಿಸಿದರೆ ನೂರಾರು ಬಾವಿಗಳಿಗೆ ಪ್ರಯೋಜನ ವಾಗಲಿದೆ. ಹೆನ್ನಾಬೈಲು, ಸಿದ್ದಾಪುರದವರೆಗಿನ ಸಮಸ್ಯೆ ನಿವಾರಣೆಯಾಗಲಿದೆ. ಆದರೆ ಇದಕ್ಕಾಗಿ ದೊಡ್ಡ ಮೊತ್ತದ ಯೋಜನೆ ತಯಾರಾಗುವವರೆಗೆ ಸಮಸ್ಯೆ ಅನುಭವಿಸ ಲೇಬೇಕು.
ಹೊಸಂಗಡಿ ಪಂಚಾಯತ್ ಮೂಲಕ ಶನಿವಾರದಿಂದ ನೀರು ವಿತರಣೆ ಆರಂಭವಾಗಿದೆ. ಈಗಾಗಲೇ 7-8 ಪ್ರದೇಶ ಗಳಿಂದ ಕುಡಿಯುವ ನೀರು ಸರಬರಾಜಿಗೆ ಬೇಡಿಕೆ ಬಂದಿದೆ. ಗುಡ್ಡ ಪ್ರದೇಶಗಳಲ್ಲಿ ಕೂಡ ನೀರಿಲ್ಲದ ಕಾರಣ ಅಲ್ಲಿಗೆಲ್ಲ ನೀರು ಸರಬರಾಜು ಮಾಡಬೇಕಿದೆ.
ಪೂರೈಕೆ ಮಾಡಲಾಗುತ್ತಿದೆ
ಶನಿವಾರದಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು ಅದರಂತೆ ಅಲ್ಲಿಗೆಲ್ಲ ಕಳುಹಿಸಲಾಗುತ್ತಿದೆ. ಬಾವಿಗಳೆಲ್ಲ ಬೇಗನೇ ಬತ್ತಿದ ಕಾರಣ ನೀರಿನ ಬೇಡಿಕೆ ಹೆಚ್ಚಾಗಿದೆ.
-ಗಿರೀಶ್ ಕುಮಾರ್ ಶೆಟ್ಟಿ, ಪಿಡಿಒ, ಹೊಸಂಗಡಿ
ನೀರು ಖರೀದಿ
ಪಂಚಾಯತ್ಗೆ ನೀರಿಗಾಗಿ ಅರ್ಜಿ ಕೊಟ್ಟು ಒಂದು ತಿಂಗಳು ಕಳೆಯಿತು. ಇನ್ನೂ ವ್ಯವಸ್ಥೆಯಾಗಿಲ್ಲ. ಈಗ ನಾವು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸುತ್ತಿದ್ದೇವೆ. ಹೊಸಂಗಡಿ ಪೇಟೆಯಲ್ಲೇ ಸಮಸ್ಯೆ ಇದೆ.
-ಸುಭಾಶ್ಚಂದ್ರ ಶೆಟ್ಟಿ, ನಿವೃತ್ತ ಶಿಕ್ಷಕರು
- ಲಕ್ಷ್ಮೀ ಮಚ್ಚಿನ