ಭತ್ತಕ್ಕೆ ಹಸಿರು ಗೊಬ್ಬರವಾಗಿ ಸೆಣಬು ಬೆಳೆ
Team Udayavani, Jun 10, 2018, 6:00 AM IST
ಪಡುಬಿದ್ರಿ: ಭತ್ತ ಬೇಸಾಯ ವನ್ನು ಲಾಭದಾಕವನ್ನಾಗಿ ಮಾಡುವು ದರೊಂದಿಗೆ ಹೆಚ್ಚುವರಿ ಇಳುವರಿ ತೆಗೆಯಲು ಕೃಷಿ ಇಲಾಖೆ ಶ್ರಮಿಸುತ್ತಿದೆ. ಇದಕ್ಕಾಗಿ ರೈತರಿಗೆ ಕೆಲವೊಂದು ವಿಧಾನಗಳನ್ನು ಅದು ಪರಿಚಯಿಸುತ್ತಿದೆ. ಇದೀಗ ಭತ್ತದ ಕೃಷಿಗೆ ಪೂರಕವಾಗಿ ಹಸುರು ಗೊಬ್ಬರ ಒದಗಿಸಲು ಸೆಣಬು(ಸನ್ ಹೆಂಪ್)ಬೀಜ ಬಿತ್ತನೆ ವಿಧಾನ ಹೇಳಲಾಗಿದೆ. ಈ ಸೆಣಬು ಬೆಳದು ಹಸುರು ಗೊಬ್ಬರ ಮಾಡುವುದರಿಂದ ಮಣ್ಣಿನ ಫಲವತ್ತತೆ, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಬೀಜ ಪೂರೈಕೆ
ಭತ್ತ ಬೇಸಾಯದ ಕೃಷಿ ಭೂಮಿಯ ವಿಸ್ತೀರ್ಣಕ್ಕನುಗುಣವಾಗಿ ಕೃಷಿ ಭೂಮಿಯ ಪಹಣಿ ಪತ್ರದ ಆಧಾರದಲ್ಲಿ ಸ್ಥಳೀಯ ಕೃಷಿ ಸೇವಾ ಕೇಂದ್ರಗಳ ಮೂಲಕ ಸೆಣಬು ಬೀಜವನ್ನು ರೈತ ಫಲಾನುಭವಿಗಳು ಪಡೆಯಬಹುದಾಗಿದೆ.
ಹಸಿರು ಗೊಬ್ಬರ ಸಮಸ್ಯೆಯಿಲ್ಲ
ಸತ್ವಾಂಶಗಳನ್ನು ಒದಗಿಸುವ ಯಾವುದೇ ಕೃತಕ ಪೋಷಕಾಂಶಗಳ ತಯಾರಿ ಇಂದಿನ ದಿನಗಳಲ್ಲಿ ತುಂಬಾ ದುಬಾರಿ. ಈ ನಿಟ್ಟಿನಲ್ಲಿ ಸೆಣಬನ್ನು ಬೆಳೆಸಿದರೆ ಹಸಿರು ಗೊಬ್ಬರದ ಸಮಸ್ಯೆಯೇ ಇಲ್ಲದಂತಾಗುತ್ತದೆ. ಹದ ಮಾಡಿದ ಗದ್ದೆಗೆ ಎಕರೆಗೆ 20ಕೆ. ಜಿ. ಪ್ರಮಾಣದಲ್ಲಿ ಸೆಣಬು ಬೀಜ ಬಿತ್ತನೆ ಮಾಡಿ, 45ದಿನಗಳ ನಂತರದಲ್ಲಿ 3ರಿಂದ 4ಅಡಿ ಬೆಳೆದ ಸೆಣಬು ಗಿಡಗಳನ್ನು ಕಟಾವು ಮಾಡದೆ ಉಳುಮೆ ಮಾಡುವ ಮೂಲಕ ಮಣ್ಣಿಗೆ ಸೇರಿಸಲಾಗುತ್ತದೆ.
ಬಿತ್ತನೆಯ ವಿಧಾನ
ಭತ್ತದ ಬೆಳೆಗೆ 40ದಿನಗಳ ಮೊದಲು ಮಾಗಿ ಉಳುಮೆಯಾದ ಗದ್ದೆಯನ್ನು ಸ್ವಲ್ಪ ತೇವಾಂಶದಲ್ಲಿ ಉತ್ತು ಮಣ್ಣನ್ನು ಹದ ಮಾಡಿಟ್ಟು, ಎಕರೆಗೆ ಸಾಧಾರಣ 20ಕೆ. ಜಿ. ಯಷ್ಟು ಸೆಣಬು ಬೀಜವನ್ನು ಬಿತ್ತನೆ ಮಾಡಬೇಕು. 40ದಿನಗಳಲ್ಲಿ ಸೆಣಬು ಗಿಡಗಳು 3-4ಅಡಿಗಳಷ್ಟು ಎತ್ತರವಾಗಿ ಹುಲುಸಾಗಿ ಬೆಳೆಯುತ್ತವೆ. ಇದರಿಂದ ಎಕರೆಗೆ ಸಾಧಾರಣ 10ಟನ್ಗಳಷ್ಟು ಹಸಿ ಸೊಪ್ಪು ಲಭ್ಯವಾಗುತ್ತದೆ.
ಮಾನವ ಶ್ರಮ ಕಡಿಮೆ
ಸೆಣಬು ಬೆಳೆಯಿಂದ ಎಕರೆಗೆ 10ರಿಂದ 12 ಟನ್ ಹಸಿರು ಸೊಪ್ಪು ಲಭ್ಯ. ಇದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಪೋಷಕಾಂಶ ಒದಗುತ್ತದೆ. ಸೆಣಬನ್ನು ಬೆಳೆದು ಅದನ್ನೇ ಉಳುಮೆ ಮಾಡುವುದರಿಂದ ಗೊಬ್ಬರ ಹೊರುವ ಮಾನವ ಶ್ರಮವೂ ಕಡಿಮೆಯಾಗುತ್ತದೆ.
– ಬಾಲಕೃಷ್ಣ ಭಟ್
2500ಎಕ್ರೆ ಸೆಣಬು ಬೆಳೆ
ಸದೃಢವಾಗಿ ಬೆಳೆದ ಸೆಣಬು ಸಸಿಗಳನ್ನು (ಕಟಾವು ಮಾಡದೆ) ಮತ್ತೂಮ್ಮೆ ಉಳುಮೆಯ ಮೂಲಕ ಮಣ್ಣಿಗೆ ಸೇರಿಸಬಹುದು. ಈ ರೀತಿಯಾಗಿ ಭೂಮಿಗೆ ಹೆಚ್ಚಿನ ಸಾರಜನಕದ ಜತೆಗೆ ರಂಜಕ, ಪೊಟಾಷ್ ಹಾಗೂ ಲಘು ಪೋಷಕಾಂಶಗಳನ್ನು ಸೇರಿಸಿ ದಂತಾಗುತ್ತದೆ. ಜಿಲ್ಲೆಯಲ್ಲಿ 310 ಕ್ವಿಂಟಾಲ್ ಸೆಣಬು ಬೀಜ ಪೂರೈಕೆಯಾಗಿದ್ದು, 2500 ಎಕರೆ ಜಮೀನಿನಲ್ಲಿ ಈ ವರ್ಷ ಸೆಣಬು ಬೆಳೆ ಬೆಳೆಸಲಾಗುತ್ತಿದೆ.
– ಚಂದ್ರಶೇಖರ ನಾಯಕ್,
ಉಡುಪಿ ಜಿಲ್ಲಾ ಕೃಷಿ ಕೇಂದ್ರ ಉಪ ನಿರ್ದೇಶಕರು
– ಆರಾಮ