ಕುಂದಾಪುರ: ಭಿನ್ನಮತ ಶಮನಕ್ಕೆ ಹಿರಿಯ ನಾಯಕರ ಪ್ರಯತ್ನ
Team Udayavani, Apr 22, 2018, 11:34 AM IST
ಕುಂದಾಪುರ: ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಪಕ್ಷದೊಳಗೆ ಉದ್ಭವಿಸಿದೆ ಎನ್ನಲಾದ ಭಿನ್ನಮತವನ್ನು ಶಮನಗೊಳಿಸಲು ಹಿರಿಯ ನಾಯಕರು ಪ್ರಯತ್ನಿಸಿದ್ದಾರೆ.
ಕಳೆದ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಕಿಶೋರ್ ಕುಮಾರ್ ಅವರ ಮನೆಯಲ್ಲಿ ಶನಿವಾರ ಭಿನ್ನಮತೀಯರ ಸಭೆ ನಡೆದಿದ್ದು, ಇದರಲ್ಲಿ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಹಿರಿಯ ನಾಯಕ ಎ.ಜಿ. ಕೊಡ್ಗಿ ಪಾಲ್ಗೊಂಡು ಅತೃಪ್ತರನ್ನು ಸಮಾಧಾನಪಡಿಸಿದ್ದಾರೆ, ಭಿನ್ನಮತ ಕೈಬಿಟ್ಟು ಬಿಜೆಪಿಯ ಪರವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರು ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಸಭೆಗೆ ಕರೆದಿದ್ದರು, ಹೋಗಿದ್ದೇನೆ. ಅಭ್ಯರ್ಥಿ ಘೋಷಣೆಯಾದ ಬಳಿಕ ಭಿನ್ನಮತ ಸರಿಯಲ್ಲ, ಪಕ್ಷದ ಗೆಲುವಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂಬುದಾಗಿ ಸಲಹೆ ನೀಡಿದ್ದೇನೆ ಎಂದಿದ್ದಾರೆ.