ಮಲ್ಪೆ: “ನನ್ನ ಸಾವಿಗೆ ನಾನೇ ಕಾರಣ” ಎಂದು ಚೀಟಿ ಬರೆದಿಟ್ಟು ವ್ಯಕ್ತಿ ನಾಪತ್ತೆ
Team Udayavani, Oct 21, 2022, 6:58 AM IST
ಮಲ್ಪೆ: ಸ್ವಲ್ಪ ಹೊತ್ತು ಬಿಟ್ಟು ಇಲ್ಲವೇ ಬೆಳಗ್ಗೆ ಮನೆಗೆ ಬರುತ್ತೇನೆ ಎಂದು ಹೇಳಿ ಹೋದ ನೇಜಾರು ನಿಡಂಬಳ್ಳಿಯ ನಿವಾಸಿ ಪ್ರವೀಣ್ ಬೆಲ್ಚಡ (44) ಅವರು ಅ. 18ರಿಂದ ನಾಪತ್ತೆಯಾಗಿರುವ ಬಗ್ಗೆ ಅವರ ಸಂಬಂಧಿ ಪ್ರಕಾಶ್ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
6 ವರ್ಷದ ಹಿಂದೆ ಪ್ರವೀಣ್ ಅವರು ಸಂಧ್ಯಾ ಅವರನ್ನು ಮದುವೆಯಾಗಿದ್ದು, ಗಂಡ-ಹೆಂಡತಿ ಮನಸ್ತಾಪದಿಂದ ಕಳೆದ 3 ವರ್ಷದಿಂದ ಪತ್ನಿ, ಮಗು ಅವರ ತಾಯಿಯ ಮನೆಯಲ್ಲಿದ್ದಾರೆ. ಪ್ರವೀಣ್ ಊಟ-ತಿಂಡಿಗೆ ಸಂಬಂಧಿ ಪ್ರಕಾಶ್ ಅವರ ಮನೆಗೆ ಹೋಗಿ ಬರುತ್ತಿದ್ದರು.
ಪ್ರವೀಣ್ ಅವರ ಮೊಬೈಲ್ ಸ್ವಿಚ್ಅಫ್ ಆಗಿತ್ತು. ಅವರು ಮನಗೆ ಬೀಗ ಹಾಕಿ ಕೀಯನ್ನು ಮನೆಯ ಹೊರಗಿಟ್ಟು ಹೋಗಿದ್ದರು ಎಂದು ಮಾರನೇ ದಿನ ನೆರೆಮನೆಯವರು ತಿಳಿಸಿದ್ದರು. ಸಂಬಂಧಿಕರು ಮನೆಯ ಬಾಗಿಲು ತೆರೆದು ಒಳಗೆ ನೋಡಿದಾಗ ಟಿಪಾಯಿ ಮೇಲೆ ಕಾಗದದಲ್ಲಿ “ನನ್ನ ಸಾವಿಗೆ ನಾನೇ ಕಾರಣ’ ಎಂದು ಚೀಟಿಯನ್ನು ಬರೆದಿರುವುದು ಪತ್ತೆಯಾಗಿದೆ. ಪ್ರವೀಣ್ 5.6 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದಾರೆ. ಸಾರ್ವಜನಿಕರಿಗೆ ಅವರ ಕುರಿತು ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.