ಸೌಡ – ಶಂಕರನಾರಾಯಣ ಸೇತುವೆಗೆ ಇನ್ನೂ ಟೆಂಡರೇ ಆಗಿಲ್ಲ
Team Udayavani, Dec 8, 2018, 1:35 AM IST
ವಿಶೇಷ ವರದಿ : ಶಂಕರನಾರಾಯಣ: ಕಳೆದ ವರ್ಷದ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಿಲಾನ್ಯಾಸಗೊಂಡ ವಾರಾಹಿ ನದಿಗೆ ಅಡ್ಡಲಾಗಿ ಸೌಡ – ಶಂಕರ ನಾರಾಯಣ ಸೇತುವೆ ಕಾಮಗಾರಿ ಕುರಿತಂತೆ ಇನ್ನೂ ಟೆಂಡರೇ ಆಗಿಲ್ಲ. ಶಿಲಾನ್ಯಾಸಗೊಂಡು ವರ್ಷವಾದರೂ, ಇನ್ನೂ ಟೆಂಡರ್ ಪ್ರಕ್ರಿಯೆ ಆಗಿಲ್ಲ ಎನ್ನುವುದು ಆರ್.ಟಿ.ಐ. ಮಾಹಿತಿಯಿಂದ ಬಹಿರಂಗಗೊಂಡಿದೆ. ಸೌಡ – ಶಂಕರನಾರಾಯಣ ಸೇತುವೆ ರಚನೆ ಕುರಿತು ಈ ಭಾಗದ ಜನರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿಯು ಕೂಡ ಇದರ ಪರ ಧ್ವನಿಗೂಡಿಸಿತ್ತು.
3 ಸೇತುವೆಗೆ 18 ಕೋ.ರೂ.
ಈ ಸೌಡ – ಶಂಕರನಾರಾಯಣ, ಆಲೂರು ರಾಗಿ ಹಕ್ಲು ಬಳಿ ಹಾಗೂ ಕಬ್ಬಿನಾಲೆ ಬಳಿ ಚಕ್ರ ನದಿಗೆ ಸೇತುವೆ ಸೇರಿ ಒಟ್ಟು 3 ಕಡೆಗಳಲ್ಲಿ ಸೇತುವೆ ನಿರ್ಮಾಣಕ್ಕೆ 18 ಕೋ.ರೂ. ವೆಚ್ಚದ ಕಾಮಗಾರಿಗೆ ಆಗಿನ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಜ. 8 ರಂದು ಚಾಲನೆ ನೀಡಿದ್ದರು.
ಚುನಾವಣೆ ಬಂದಾಗ ಪ್ರಸ್ತಾಪ
ಪ್ರತಿ ಚುನಾವಣೆ ಬಂದಾಗೊಮ್ಮೆ ಸೇತುವೆ ಬಗ್ಗೆ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ ಬಳಿಕ ಆ ವಿಚಾರ ಅಲ್ಲಿಗೆ ಮುಗಿದು ಹೋಗುತ್ತದೆ. ಮತ್ತೆ ಜನಪ್ರತಿನಿಧಿಗಳಿಗೆ ನೆನಪಾಗೋದು ಇನ್ನೊಂದು ಚುನಾವಣೆ ಬಂದಾಗ ಎನ್ನುವುದು ಶಂಕರನಾರಾಯಣ ಹೋರಾಟ ಸಮಿತಿಯ ಚಿಟ್ಟೆ ರಾಜಗೋಪಾಲ್ ಹೆಗ್ಡೆಯವರ ಆರೋಪ. ಪ್ರಸ್ತಾವಿತ ಸೌಡ – ಶಂಕರನಾರಾಯಣ ಸೇತುವೆ ನಿರ್ಮಾಣ ಪ್ರದೇಶದಲ್ಲಿ ವಾರಾಹಿ ನದಿ ಪಾತ್ರದ ಒಂದು ದಡವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ, ಇನ್ನೊಂದು ತೀರವು ಉಡುಪಿ – ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ.
ಟೆಂಡರ್ಗೆ ಕಳುಹಿಸಿದ್ದೇವೆ
ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪ ವಿಭಾಗದಿಂದ ಮೇಲಧಿಕಾರಿಗಳಿಗೆ ಯೋಜನೆ ಅಂತಿಮಗೊಳಿಸಿ, ಕಳುಹಿಸಿಲಾಗಿದೆ. ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ಕಾಮಗಾರಿ ಆರಂಭವಾಗುವಾಗ ಇನ್ನು ಸುಮಾರು 2 ತಿಂಗಳು ಆಗಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಸೌಡ ಸೇತುವೆ ರಚನೆ ಆದರೆ ಉಪ ನೋಂದಾವಣೆ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನೂ ಹೊಂದಿರುವ ಶಂಕರನಾರಾಯಣಕ್ಕೆ ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಹೊಂಬಾಡಿ-ಮಂಡಾಡಿ, ಯಡಾಡಿ-ಮತ್ಯಾಡಿ, ಕೊರ್ಗಿ, ಜಪ್ತಿ, ಹೆಸ್ಕತ್ತೂರು ಗ್ರಾಮಗಳ ಜನರಿಗೆ ಪ್ರಯೋಜನವಾಗಲಿದೆ. ಈ ಭಾಗದ ಜನರು ಕುಂದಾಪುರ ಹಾಗೂ ಉಡುಪಿಗೆ ಪ್ರಯಾಣಿಸಲು 10 ರಿಂದ 12 ಕಿ.ಮೀ. ದೂರ ಕಡಿಮೆಯಾಗಲಿದೆ.
ಟೆಂಡರ್ ಅಂತಿಮಗೊಳಿಸಲಿ
ಈ ಸೇತುವೆ ನಿರ್ಮಾಣ ಕುರಿತು ನಾನು ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಶೃಂಗೇರಿ ಇಲ್ಲಿಗೆ ಮಾಹಿತಿ ಕೇಳಿದಾಗ, ಕೇಂದ್ರ ರಸ್ತೆ ನಿಧಿ ಯೋಜನೆ ಅಡಿ ಮಂಜೂರು ಆಗಿದ್ದು, ಆದರೆ ಟೆಂಡರ್ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎನ್ನುವ ಸತ್ಯ ತಿಳಿಯಿತು. ಜನಪ್ರತಿನಿಧಿಗಳು ಇನ್ನಾದರೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಟೆಂಡರ್ ಅಂತಿಮಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ.
– ಬಿ.ಕೆ. ಶ್ರೀನಿವಾಸ ಸೌಡ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ
“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ
Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ
Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ
Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ