ಪಿಸಿಐಟಿ ಕಚೇರಿ ಉಳಿಸಲು ಹೋರಾಟದ ಕಿಚ್ಚು
ಮಂಗಳೂರು ಐಟಿ ಕಚೇರಿಯ ವಿಭಾಗ ಗೋವಾಕ್ಕೆ ಎತ್ತಂಗಡಿ ; ನಿರ್ಧಾರ ಹಿಂಪಡೆಯಲು ಕೇಂದ್ರ ಸರಕಾರಕ್ಕೆ ಒತ್ತಾಯ
Team Udayavani, Sep 7, 2020, 6:41 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉಡುಪಿ: ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರ (ಪಿಸಿಐಟಿ) ಕಚೇರಿಯನ್ನು ಮಂಗಳೂರಿನಲ್ಲಿಯೇ ಉಳಿಸಿಕೊಳ್ಳುವಂತೆ ಕರಾವಳಿಯಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ.
ನಿರ್ಧಾರ ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಜನಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚಿದೆ.
ಕಚೇರಿಯನ್ನು ಶತಾಯಗತಾಯ ಮಂಗಳೂರಿನಲ್ಲೇ ಉಳಿಸಿಕೊಳ್ಳಲು ಸಾರ್ವಜನಿಕರು, ಸಂಘಟನೆಗಳು, ಪಕ್ಷಗಳು ಜನಪ್ರತಿನಿಧಿಗಳ ಮೇಲೆ ಬಲವಾಗಿ ಒತ್ತಡ ಹಾಕುತ್ತಿದ್ದಾರೆ.
ಉಡುಪಿ ಮತ್ತು ಮಂಗಳೂರಿನ ವಾಣಿಜ್ಯ- ಉದ್ಯಮ ಸಂಸ್ಥೆಗಳು, ಲೆಕ್ಕ ಪರಿಶೋಧಕರು, ವರ್ತಕರು ಈಗಾಗಲೇ ಸಭೆ ನಡೆಸಿ, ಕೇಂದ್ರದ ನಿರ್ಧಾರ ಸರಿಯಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ.
ಆರ್ಥಿಕ ಅಭಿವೃದ್ಧಿಗೆ ಕೊಡುಗೆ
ಆರ್ಥಿಕ ಮತ್ತು ಔದ್ಯಮಿಕ ಸಂಸ್ಥೆಗಳ ತವರಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಬ್ಯಾಂಕ್ಗಳನ್ನು ಈಗಾಗಲೇ ವಿಲೀನಗೊಳಿಸಲಾಗಿದೆ. ಈಗ ಮತ್ತೆ ಮಂಗಳೂರಿನ ಪಿಸಿಐಟಿ ಕಚೇರಿಯನ್ನು ಗೋವಾದೊಂದಿಗೆ ವಿಲೀನ ಮಾಡುವ ಮೂಲಕ ಜಿಲ್ಲೆಯು ಆರ್ಥಿಕ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯ ಕುರುಹನ್ನು ವ್ಯವಸ್ಥಿತವಾಗಿ ಮರೆಗೆ ಸರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿಯ ಹೋರಾಟದ ಕಾವು ನಮ್ಮಲ್ಲೂ ಬೇಕು !
ಹುಬ್ಬಳ್ಳಿಯಲ್ಲೂ ಇಂಥದೇ ಪರಿಸ್ಥಿತಿ ನಿರ್ಮಾಣವಾದಾಗ ಅಲ್ಲಿನ ಸಂಘಟನೆಗಳು, ಜನರು ಒಂದಾಗಿ ಹೋರಾಡಿದ್ದಾರೆ. ಫಲವಾಗಿ ಹುಬ್ಬಳ್ಳಿಯ ಪಿಸಿಐಟಿ ಕಚೇರಿಯನ್ನು ಉಳಿಸಿಕೊಳ್ಳುವ ಜತೆಗೆ ಮುಖರಹಿತ ಮೌಲ್ಯ ಮಾಪನ ಕೇಂದ್ರವನ್ನು ಹುಬ್ಬಳ್ಳಿಗೆ ನೀಡುವ ಭರವಸೆಯನ್ನು ಸಚಿವೆ ನಿರ್ಮಲಾ ಸೀತಾ ರಾಮನ್ ನೀಡಿದ್ದಾರೆ. ಇಂತಹ ಹೋರಾಟ, ಬದ್ಧತೆಯಿಂದ ಮಾತ್ರ ಮಂಗಳೂರಿನಲ್ಲಿ ಪಿಸಿಐಟಿ ಕಚೇರಿ ಉಳಿಸಿಕೊಳ್ಳಲು ಸಾಧ್ಯ.