ಅನುದಾನ ಬಳಸಿಯೂ ಪ್ರಮಾಣ ಪತ್ರ ಸಲ್ಲಿಸದ ಕಾಲೇಜುಗಳಿಗೆ ಸಮಸ್ಯೆ!
Team Udayavani, Feb 15, 2023, 6:12 AM IST
ಉಡುಪಿ: ಪೀಠೊಪಕರಣ, ಪಠ್ಯಪುಸ್ತಕ, ದೂರವಾಣಿ ವೆಚ್ಚ, ನೀರು ಮತ್ತು ವಿದ್ಯುತ್ ಬಿಲ್ ಸಹಿತ ಕಚೇರಿ ವೆಚ್ಚ ಭರಿಸಲು ಕಾಲೇಜು ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಬಳಸಿ, ಬಳಕೆ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 12 ಸರಕಾರಿ ಪ್ರಥಮ ದರ್ಜೆ ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 19 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. 2022-23ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೀಠೊಪಕರಣ ಹಾಗೂ ಪಠ್ಯಪುಸ್ತಕ ಮತ್ತು ಇತರ ವೆಚ್ಚಕ್ಕಾಗಿ ಉಭಯ ಜಿಲ್ಲೆಯ 8 ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 4,35,870 ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 3,22,509 ರೂ. ಬಳಕೆಯಾಗಿದ್ದು, 1,13,361 ಕಾಲೇಜಿನ ಖಾತೆಯಲ್ಲೇ ಉಳಿದುಕೊಂಡಿದೆ. ದೂರವಾಣಿ ವೆಚ್ಚಕ್ಕಾಗಿ 6 ಕಾಲೇಜುಗಳಿಗೆ 22,500 ಬಂದಿದ್ದು, ಇದರಲ್ಲಿ ಕೇವಲ 3,882 ರೂ.ಗಳನ್ನು ಬಳಕೆ ಮಾಡಿ, 18,618 ರೂ.ಗಳನ್ನು ತಮ್ಮಲ್ಲೆ ಉಳಿಸಿಕೊಂಡಿವೆ. ನೀರು ಮತ್ತು ವಿದ್ಯುತ್ ಬಿಲ್ ಪಾವತಿಗೆ 8 ಕಾಲೇಜುಗಳಿಗೆ 67,686 ರೂ. ಬಿಡುಗಡೆಯಾಗಿದ್ದು, 31,170 ರೂ.ಗಳು ಬಳಕೆಯಾಗಿದ್ದು, 36,448 ಹಾಗೆಯೇ ಉಳಿದುಕೊಂಡಿದೆ.
ಅನುದಾನ ಹಿಂದಕ್ಕೆ
ಸರಕಾರದಿಂದ ಬಂದಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಅದಾಗ್ಯೂ ಅನೇಕ ಕಾಲೇಜುಗಳು ಅನುದಾನ ಬಳಸಿಕೊಳ್ಳದೆ ಖಾತೆಯಲ್ಲೇ ಉಳಿಸಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡದೆ ಇದ್ದಲ್ಲಿ ಕಾಲೇಜಿಗೆ ಯಾವುದೇ ಮುನ್ಸೂಚನೆ ನೀಡದೆ ಅನುದಾನದ ಆವಶ್ಯಕತೆ ಇರುವುದಿಲ್ಲ ಎಂದು ಪರಿಗಣಿಸಿ ವಾಪಸ್ ಪಡೆಯಲಾಗುತ್ತದೆ. ಮುಂದಿನ ವರ್ಷದಲ್ಲಿ ಇದೇ ಉದ್ದೇಶಕ್ಕೆ ಅನುದಾನ ಪಡೆಯಲು ಸಮಸ್ಯೆಯಾಗಬಹುದು ಎಂದು ಇಲಾಖೆ ನಿರ್ದೇಶನ ನೀಡಿದೆ.