ಕಿಶನ್ ಹೆಗ್ಡೆ ಹತ್ಯೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ
Team Udayavani, Oct 2, 2020, 6:46 PM IST
ಉಡುಪಿ: ಹಿರಿಯಡ್ಕದಲ್ಲಿ ನಡುರಸ್ತೆಯಲ್ಲೇ ಹತ್ಯೆಗೀಡಾಗಿದ್ದ ಪಡುಬಿದ್ರಿ ಇನ್ನಾ ನಿವಾಸಿ ಕಿಶನ್ ಹೆಗ್ಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಟಿಪಳ್ಳ ಗ್ರಾಮದ ಸಚಿನ್ ಡಿ ಅಮೀನ್ ಯಾನೆ ಸಚ್ಚು(37), ಅಕ್ಷಯ್ ಶೆಟ್ಟಿಗಾರ್(26), ತೋಕುರು ನಿವಾಸಿ ಚೇತನ್(23), ಕಾಟಿಪಳ್ಳದ ಸಂಜಿತ್ ಪ್ರದಾನ್ ಯಾನೆ ಶೈಲೇಶ(19) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು, ಮಾರುತಿ ರಿಟ್ಜ್, ಇನೋವಾ ಕಾರು, 2 ಪಲ್ಸರ್ ಬೈಕ್ ಸೇರಿದಂತೆ ಸುತ್ತಿಗೆ ತಲವಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯನ್ನು ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ವೃತ್ತ ಕಛೇರಿಯ ಎಎಸ್ಐ ಕೃಷ್ಣಪ್ಪ, ಸಿಬ್ಬಂದಿಯವರಾದ ಪ್ರದೀಪ್ ನಾಯಕ, ವಾಸುದೇವ ಪಿ, ಗಣೇಶ, ರವೀಂದ್ರ ಹೆಚ್, ಚಾಲಕ ಶೇಖರ್, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ, ಸಿಬ್ಬಂದಿ ಯವರು ದಿಲೀಪ್, ಚಾಲಕ ಅಣ್ಣಪ್ಪ, ಡಿ.ಸಿ.ಐ.ಬಿ ತಂಡದ ಎ.ಎಸ್.ಐ ರವಿಚಂದ್ರನ್ ಸಿಬ್ಬಂದಿಯವರು ರಾಮು ಹೆಗ್ಡೆ & ರಾಘವೇಂದ್ರ ಮತ್ತು ಹಿರಿಯಡ್ಕ ಠಾಣೆ ಸಿಬ್ಬಂದಿಯವರು ಹರೀಶ್ ಮತ್ತು ಶಿವರಾಜ್ ನಡೆಸಿದ್ದಾರೆ.
ಪ್ರಕರಣದಲ್ಲಿ ಈ ಮೊದಲು ಪ್ರಮುಖ ಐದು ಆರೋಪಿಗಳನ್ನು ಬಂಧಿಸಲಾಗಿತ್ತು,
ಘಟನೆ ಹಿನ್ನೆಲೆ :
ಸೆಪ್ಟೆಂಬರ್ 24ರಂದು ಮಂಗಳೂರಿನ ದಿವ್ಯರಾಜ್ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಅವರೊಂದಿಗೆ ಕಿಶನ್ ಹೆಗ್ಡೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಲು ಕಾರಿನಿಂದ ಇಳಿಯುವ ವೇಳೆ ಗುರುವಾರ ಕೊಲೆ ನಡೆದಿತ್ತು.
ಸುತ್ತಿಗೆ, ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನ ಮುಂಭಾಗದಿಂದ ಆಗಮಿಸಿದ ತಂಡ ಏಕಾಏಕಿಯಾಗಿ ಕಾರಿನ ಗಾಜಿಗೆ ಸುತ್ತಿಗೆಯಿಂದ ಹೊಡೆದು ಜಖಂ ಗೊಳಿಸಿತ್ತು. ಅನಂತರ ಕಿಶನ್ ಹೆಗ್ಡೆ ಮೇಲೆ ತಲವಾರಿನಿಂದ ಕಡಿದು ಗಾಯಗೊಳಿಸಲಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ ಕಿಶನ್ನನ್ನು ಹಿಂಬಾಲಿಸಿದ ತಂಡ ತಲೆಗೆ ಬಲವಾಗಿ ಹೊಡೆದು ಕೊಲೆ ನಡೆಸಿದೆ. ಕಿಶನ್ ಹೆಗ್ಡೆ ಜತೆಯಲ್ಲಿದ್ದರ ಪೈಕಿ ಹರಿಪ್ರಸಾದ್ ಶೆಟ್ಟಿಯವರ ತಲೆಗೂ ಏಟು ಬಿದ್ದಿದೆ.
ಕೋಡಿಕೆರೆ ತಂಡದ ಕೃತ್ಯ: ರೌಡಿಶೀಟರ್ ಪಟ್ಟಿಯಲ್ಲಿದ್ದ ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೊಲೆಯ ಬಳಿಕ ಆರೋಪಿಗಳು ರಿಡ್ಜ್ ಹಾಗೂ ಇನೋವಾ ಕಾರಿನಲ್ಲಿ ತೆರಳಿದ್ದರು.