
ಉಡುಪಿ: ಶ್ರೀಕೃಷ್ಣ ಮಠದಲ್ಲಿ ವೈಭವದ ಮಕರಸಂಕ್ರಾಂತಿ ಉತ್ಸವ
Team Udayavani, Jan 14, 2023, 11:11 PM IST

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶನಿವಾರ ಮಕರ ಸಂಕ್ರಾಂತಿಯಂದು ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವ ವೈಭವದಿಂದ ಜರಗಿತು.
ಬ್ರಹ್ಮರಥ, ಗರುಡ ರಥ, ಸಣ್ಣ ರಥಗಳಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿ ಉತ್ಸವ ನಡೆಸಲಾಯಿತು. ಉತ್ಸವದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆದ ಬಳಿಕ ಮೂರು ರಥಗಳ ಉತ್ಸವವು ವಿದ್ಯುದ್ದೀಪಗಳು ಮತ್ತು ಆಕರ್ಷಕ ಸುಡು ಮದ್ದುಗಳಿಂದ ಕೂಡಿದ ರಥಬೀದಿಯಲ್ಲಿ ಸಂಪನ್ನಗೊಂಡಿತು. ಉತ್ಸವ ಅರ್ಧ ಸುತ್ತು ಬಂದ ಬಳಿಕ ರಥಬೀದಿಯ ದಕ್ಷಿಣ ಭಾಗದಲ್ಲಿ ಸುಡು ಮದ್ದುಗಳ ಪ್ರದರ್ಶನ ನಡೆಯಿತು. ಮಧ್ಯಾಹ್ನ ವಿಶೇಷ ಅನ್ನಸಂತರ್ಪಣೆ ನಡೆಯಿತು.
ಇಂದು ಚೂರ್ಣೋತ್ಸವ
ರವಿವಾರ ಬೆಳಗ್ಗೆ ಚೂರ್ಣೋತ್ಸವ, ಅವಭೃಥ ಸ್ನಾನ ನಡೆಯಲಿದೆ.
ಟಾಪ್ ನ್ಯೂಸ್
