ಪ್ರಕೃತಿ, ದೇಶವನ್ನು ಪ್ರೀತಿಸುತ್ತ ಬದುಕು ಸಾಗಿಸಬೇಕು: ಕಶೆಕೋಡಿ
ಶಿವಪಾಡಿ ದೇಗುಲ ಅತಿರುದ್ರ ಮಹಾಯಾಗ ಧಾರ್ಮಿಕ ಸಭೆ
Team Udayavani, Feb 25, 2023, 1:21 AM IST
ಮಣಿಪಾಲ: ಪ್ರಕೃತಿ ಮಾತೆ, ಭಾರತವನ್ನು ಪ್ರೀತಿಸುತ್ತ, ಪೂಜಿಸುತ್ತ ಬದುಕು ಸಾಗಿಸಿದಾಗ ಜೀವನ ಸಾರ್ಥಕವಾಗಲಿದೆ. ಪ್ರಕೃತಿಯೇ ದೇವರು, ನಮಗೆ ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ಪ್ರಕೃತಿಗೆ ವಿರುದ್ಧವಾಗಿ ಸಾಗುತ್ತಿದ್ದೇವೆ. ಈ ಮನಸ್ಥಿತಿ ಬದಲಾವಣೆ ಮಾಡಿಕೊಂಡರೆ ಮಾತ್ರ ಬದುಕು ಸುಂದರವಾಗಲಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ತಿಳಿಸಿದರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಶುಕ್ರವಾರ ನಡೆದ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಮಾನವೀಯತೆಯಿಂದ ಬದುಕು ವುದೇ ಮಾನವತ್ವ. ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಪ್ರಸ್ತುತ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶ ಮಾಡಿ ನಮ್ಮ ಅಧಃಪತನಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಹಿಂದಿ ನಿಂದಲೂ ಪ್ರಕೃತಿ, ಸಮಾಜಕ್ಕಾಗಿ ಬದುಕಿದವರನ್ನು ಸ್ಮರಿಸುತ್ತ ಬಂದಿ ದ್ದೇವೆ. ಮಾನವೀಯತೆಯನ್ನು ಮರೆತ ಪರಿಣಾಮ ಮಾಲಿನ್ಯತೆಯನ್ನು ತುಂಬಿಕೊಳ್ಳುತ್ತಿದ್ದೇವೆ ಎಂದರು.
ಅರ್ಬಿಕೋಡಿ ಶ್ರೀ ವೈಷ್ಣವಿದುರ್ಗಾ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಜ್ ಹೆಗ್ಡೆ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ನಾರಾಯಣ ಶೆಣೈ ಮಾತನಾಡಿ, ಲೋಕ ಉಳಿಯಬೇಕಾದರೆ ಹಿಂದೂ ಸನಾತನ ಧರ್ಮ ಉಳಿಯಬೇಕು. ಲೋಕ ಕಲ್ಯಾ ಣಾರ್ಥವಾಗಿ ನಡೆಯುತ್ತಿರುವ ಯಾಗದ ಉದ್ದೇಶ ಈಡೇರಲಿ ಎಂದರು.
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಆಡಳಿತ ಮೊಕ್ತೇಸರ ಶ್ರೀನಿವಾಸ ಉಪಾಧ್ಯ ಮಾತನಾಡಿ, ಮನಸ್ಸಿಗೆ ನೆಮ್ಮದಿ ಕೊಡುವ ತಾಣವೇ ದೇವಸ್ಥಾನ. ನಿತ್ಯ ದೇಗುಲ ಸಂದರ್ಶನದಿಂದ ಮಾನಸಿಕ ಪ್ರಫುಲ್ಲತೆ ಲಭಿಸಲಿದೆ ಎಂದರು.
ಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ರಾಜಪುರ ಸಾರಸ್ವತ ಮಹಾಸಭಾದ ಅಧ್ಯಕ್ಷ ಶ್ರೀಶ ನಾಯಕ್, ಉದ್ಯಮಿ ದೇವಿಚರಣ್ ಕಾವಾ, ಹವ್ಯಕ ಬ್ರಾಹ್ಮಣ ಸಂಘದ ಅಧ್ಯಕ್ಷ ಉದಯ ಶಂಕರ್, ಧ.ಗ್ರಾ.ಯೋಜನೆಯ ನಿರ್ದೇಶಕ ಶಿವರಾಯ, ಮನೋಜ್ ಪ್ರಭು, ಮೊಕ್ತೇಸರರಾದ ದಿನೇಶ್ ಪ್ರಭು, ಶುಭಕರ ಸಾಮಂತ್, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಟ್ರಸ್ಟಿ ಸಂಜಯ ಪ್ರಭು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಉಪಸ್ಥಿತರಿದ್ದರು. ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿ, ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.
ಹಿಂದೂ ಸಂಸ್ಕೃತಿಗೆ ಒತ್ತು ನೀಡಿ
ಹಿಂದೂ ಸಂಸ್ಕೃತಿಯನ್ನು ಉಳಿಸಬೇಕಾದರೆ ಮನೆಯಲ್ಲೇ ಮಕ್ಕಳಿಗೆ ಸಂಸ್ಕಾರ ಹಾಗೂ ಸತ್ಯ ಹೇಳುವುದನ್ನು ಕಲಿಸಬೇಕು. ಮಹಿಳೆಯರು ದೇಶಿ ಸಂಸ್ಕೃತಿಯನ್ನು ಮರೆತರೆ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯ ಹಿರಿಯರು ಮಕ್ಕಳಿಗೆ ಆದರ್ಶವಾಗಿರಬೇಕು ಎಂದು ಸೂರ್ಯನಾರಾಯಣ ಭಟ್ ಕಶೆಕೋಡಿ ಸಲಹೆ ನೀಡಿದರು.