ಸ್ಟೂಡೆಂಟ್ ಪೊಲೀಸ್ ಕೆಡೆಟ್: ದಕ್ಷಿಣ ಕನ್ನಡ 47,ಉಡುಪಿ ಜಿಲ್ಲೆಯ 24 ಶಾಲೆಗಳು ಆಯ್ಕೆ
Team Udayavani, Nov 18, 2022, 7:40 AM IST
ಕಾರ್ಕಳ: ಮಾಜಿ ರಾಷ್ಟ್ರಪತಿ ದಿ| ಎಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಕೂಸು ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್ಪಿಸಿ) ದೇಶಾದ್ಯಂತ ಶಾಲೆಗಳಲ್ಲಿ ಜಾರಿಯಲ್ಲಿದ್ದು, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಗೃಹ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮುಂದಾಗಿವೆ.
ಪ್ರಸಕ್ತ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 71 ಶಾಲೆಗಳು ಯೋಜನೆಗೆ ಆಯ್ಕೆಗೊಂಡಿವೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಅರಿವು, ನಾಯಕತ್ವ ಗುಣ, ನಾಗರಿಕ ಜ್ಞಾನ ಮೂಡಿಸುವುದು ಇದರ ಉದ್ದೇಶ.
ಕೇರಳ ಸರಕಾರವು 2010ರಲ್ಲಿಯೇ ಎಸ್ಪಿಸಿ ಯೋಜನೆ ಜಾರಿಗೆ ತಂದಿತ್ತು. ಅದೇ ಮಾದರಿ ಯಲ್ಲಿ ಕರ್ನಾಟಕ ಸರಕಾರ ಜಾರಿ ಮಾಡಿದ್ದು, ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 17, ಕಮಿಷನರೆಟ್ ವ್ಯಾಪ್ತಿಯಲ್ಲಿ 30 ಶಾಲೆಗಳು ಸೇರಿ ದ.ಕ. ಜಿಲ್ಲೆಯಲ್ಲಿ ಒಟ್ಟು 47 ಶಾಲೆಗಳು, ಉಡುಪಿ ಜಿಲ್ಲೆಯ 24 ಶಾಲೆಗಳು ತರಬೇತಿಗೆ ಆಯ್ಕೆಯಾಗಿವೆ. ಉಡುಪಿಯಲ್ಲಿ 1,056 ಮಂದಿ ಹಾಗೂ ದ.ಕ.ದಲ್ಲಿ 2,068 ಮಕ್ಕಳು ಸೇರಿ ಒಟ್ಟು 3,124 ಮಕ್ಕಳು ತರಬೇತಿ ಪಡೆಯಲಿದ್ದಾರೆ. ಆಯ್ಕೆಯಾದ ಶಾಲೆಗಳಿಗೆ ತರಬೇತಿಯ ಖರ್ಚು ವೆಚ್ಚಗಳಿಗಾಗಿ 50 ಸಾವಿರ ರೂ. ನೀಡಲಾಗುತ್ತಿದೆ.
ಕೇಂದ್ರ ಅಥವಾ ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯುವ ಆಯ್ದ ಶಾಲೆಗಳ 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಎಸ್ಪಿಸಿ ಯೋಜನೆಗೆ ಆಯ್ಕೆಯಾಗುತ್ತಾರೆ. ಆಯ್ಕೆಯಾದವರಿಗೆ ಪ್ರತೀ ತಿಂಗಳಲ್ಲಿ ಒಟ್ಟು ಮೂರು ಶನಿವಾರ ಶಾಲಾ ಅವಧಿ ಮುಗಿದ ಬಳಿಕ ತರಬೇತಿ ನೀಡಲಾಗುತ್ತದೆ.
ತರಬೇತಿಯಲ್ಲೇನಿದೆ?:
ಸಮಾಜದಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಸಾಮಾಜಿಕ ಪಿಡುಗುಗಳು, ರಸ್ತೆ ಸುರಕ್ಷೆ, ಪ್ರಥಮ ಚಿಕಿತ್ಸೆ, ಮಳೆ, ಮಕ್ಕಳ ಸುರಕ್ಷೆ, ಪ್ರಾಕೃತಿಕ ವಿಕೋಪಗಳ ನಿರ್ವಹಣೆ, ಪರೇಡ್, ಯೋಗಾಭ್ಯಾಸ, ಪೊಲೀಸ್ ಠಾಣೆಯ ಕಾರ್ಯ ವೈಖರಿಗಳ ಬಗ್ಗೆ ಠಾಣೆಗೆ ಭೇಟಿ ನೀಡಿ ತರಬೇತಿ ನೀಡಲಾಗುತ್ತದೆ. ಪೊಲೀಸ್, ಶಿಕ್ಷಣ ಇಲಾಖೆ ಬಿಇಒ ಮತ್ತು ಶಾಲಾ ಮುಖ್ಯಸ್ಥರ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಉಡುಪಿ: ದೇಶಾದ್ಯಂತ ನಡೆಯುತ್ತಿರುವ “ಮಿಷನ್ ಸಾಹಸಿ’ ಕಾರ್ಯಕ್ರಮದ ಪ್ರಯುಕ್ತ ಉಡುಪಿ ನಗರದ ವಿವಿಧ ಪ್ರೌಢಶಾಲೆ, ಪ.ಪೂ. ಮತ್ತು ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ಒಂದು ವಾರ ಕಾಲ ನುರಿತ ತರಬೇತುದಾರರಿಂದ ಅತ್ಮರಕ್ಷಣೆಯ ತರಬೇತಿ ನೀಡಲಾಗುತ್ತಿದೆ. ನಗರದ 9 ಶಾಲಾ ಕಾಲೇಜುಗಳ 1,200 ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮದ ಸಮಾರೋಪ ಮತ್ತು ತರಬೇತಿ ಪಡೆದ ವಿದ್ಯಾರ್ಥಿನಿಯರಿಂದ ಸಾಹಸ ಪ್ರದರ್ಶನ ಅಜ್ಜರಕಾಡು ಮೈದಾನದಲ್ಲಿ ನ. 19ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಜನರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಸದ್ಭಾವನೆ ಮೂಡಿಸುವ ಜತೆಗೆ ಭರವಸೆಯನ್ನೂ ಮೂಡಿಸಬೇಕಿದೆ. ಪೊಲೀಸರ ಕಾರ್ಯನಿರ್ವಹಣೆ ಇತ್ಯಾದಿ ವಿಚಾರಗಳ ಬಗ್ಗೆ ಮಕ್ಕಳು ತಿಳಿಸುವ ಕಾರ್ಯ ನಡೆಸಲಾಗುತ್ತಿದೆ. – ಅಕ್ಷಯ್ ಎಂ. ಹಾಕೆ, ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ
ವಿದ್ಯಾರ್ಥಿಗಳಿಗೆ ದೇಹದಂಡನೆ, ಪರೇಡ್ ಮೂಲಕ ಶಾರೀರಿಕವಾಗಿ ಮತ್ತು ಬೋಧನ ಪ್ರಾಥಮಿಕ ತರಗತಿಗಳಿರುತ್ತವೆ. ದುಶ್ಚಟಗಳು, ಮಾದಕ ದ್ರವ್ಯದ ದುರುಪಯೋಗ, ವಿಕೃತ ನಡವಳಿಕೆ ಅಸಹಿಷ್ಣುತೆ ಮತ್ತು ಇತರ ಸಾಮಾಜಿಕ ಅನಿಷ್ಟಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಲಾಗುತ್ತದೆ. – ಎನ್. ಶಶಿಕುಮಾರ್ ಪೊಲೀಸ್ ಆಯುಕ್ತ ಪೊಲೀಸ್ ಕಮಿಷನರೆಟ್ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ