ಮಲಿನಗೊಳ್ಳು ತ್ತಿದೆ ಪಂಚಗಂಗಾವಳಿ ನದಿ
ನದಿಯುದ್ದಕ್ಕೂ ಆಸ್ಪತ್ರೆ, ಅಂಗಡಿ, ಹೊಟೇಲ್ಗಳ ತ್ಯಾಜ್ಯ
Team Udayavani, Jan 19, 2020, 7:00 AM IST
ಕುಂದಾಪುರ: ಫೆರ್ರಿಪಾರ್ಕ್ ಸಮೀಪ ಪಂಚ ಗಂಗಾವಳಿ ನದಿ ಶುದ್ಧೀಕರಣಕ್ಕೆ ಒಂದೆಡೆಯಿಂದ ಯತ್ನ ನಡೆಯುತ್ತಿರುವಂತೆಯೇ ಇನ್ನೊಂದೆಡೆ ನದಿ ಮಲಿನ ಮಾಡುವ ಕೆಲಸವೂ ನಡೆಯುತ್ತಿದೆ. ಕುಂದಾಪುರ ನಗರದ ಸೌಂದರ್ಯಕ್ಕೆ ಕಲಶವಿಟ್ಟಂತೆ ಇರುವ ಪಂಚಗಂಗಾವಳಿ ನದಿ ಇಲ್ಲಿನ ಸೊಬಗನ್ನು ಹೆಚ್ಚಿಸಿದೆ. ಆದರೆ ಅದೇ ನದಿಯಲ್ಲಿ ಮಾಲಿನ್ಯವೂ ಇರುವುದು ನಗರದ ಜನತೆಗೆ ಬೇಸರ ಮೂಡಿಸಿದೆ.
ಕಸ ಸಂಗ್ರಹ
ಪುರಸಭೆ ವ್ಯಾಪ್ತಿಯ ಅಂಗಡಿ, ಮುಂಗಟ್ಟುಗಳ ತ್ಯಾಜ್ಯವನ್ನು ಪುರಸಭೆಯೇ ಮನೆ ಮನೆ ಕಸ ಸಂಗ್ರಹ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡುತ್ತದೆ. ಕಂದಾವರದಲ್ಲಿ ತ್ಯಾಜ್ಯ ವಿಲೇ ಘಟಕದಲ್ಲಿ ಕೊಂಡೊಯ್ದು ಸುರಿದು ಅಲ್ಲಿ “ಕಸದಿಂದ ರಸ’ ಎಂಬಂತೆ ಗೊಬ್ಬರ ತಯಾರಿಸುತ್ತದೆ.
ತ್ಯಾಜ್ಯ
ಪುರಸಭೆ ಇಷ್ಟೆಲ್ಲ ಕೆಲಸಗಳನ್ನು ಸುಂದರ ಕುಂದಾಪುರ ನಿರ್ಮಾಣಕ್ಕಾಗಿ ಮಾಡುತ್ತಿದ್ದರೂ ಪಂಚಗಂಗಾವಳಿ ಪರಿಸರದಲ್ಲಿ ತ್ಯಾಜ್ಯ ತಂದು ರಾಶಿ ಹಾಕುವವರು ಯಾರು ಎಂದು ಗೊತ್ತಾಗಿಲ್ಲ. ಪುರಸಭೆ ಇಲ್ಲೊಂದು ದೊಡ್ಡ ತೊಟ್ಟಿ ಇಟ್ಟಿದೆ. ಏಕೆಂದರೆ ಸಣ್ಣ ಸಣ್ಣ ವಾಹನಗಳಲ್ಲಿ ಮನೆ ಮನೆ ಕಸ ಸಂಗ್ರಹಿಸಿದಾಗ ಆ ಕಸವನ್ನು ಪ್ರತೀ ಬಾರಿ 14 ಕಿ.ಮೀ. ದೂರವಾಗುವ ಕಂದಾವರದಲ್ಲಿ ವಿಲೇ ಮಾಡಲು ಅಸಾಧ್ಯ. ಅದಕ್ಕಾಗಿ ಮನೆ ಮನೆಯಿಂದ ಸಂಗ್ರಹಿಸಿದ ಕಸವನ್ನು ಇಲ್ಲಿನ ದೊಡ್ಡ ತೊಟ್ಟಿಯಲ್ಲಿ ಹಾಕಿ ಅಲ್ಲಿಂದ ದೊಡ್ಡ ಲಾರಿಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಕಸದ ರಾಶಿ ಹೆಚ್ಚಾದಾಗ ಅದು ನದಿಯೊಡಲನ್ನು ಸೇರುತ್ತದೆ.
ಹೊರಗಿನಿಂದ ಕಸ
ಪುರಸಭೆ ತೊಟ್ಟಿ ಇಟ್ಟಿದೆಯಲ್ಲ ಎಂದು ಕೆಲವರು ಇಲ್ಲೇ ತಂದು ತ್ಯಾಜ್ಯ ರಾಶಿ ಹಾಕುವವರೂ ಇದ್ದಾರೆ. ಇಷ್ಟಲ್ಲದೆ ಪುರಸಭೆಗೆ ಸಂಬಂಧಪಡದವರೂ ಇಲ್ಲಿ ತ್ಯಾಜ್ಯ ತಂದು ನದಿಗೆ ಸುರಿಯುತ್ತಾರೆ ಎಂಬ ಸಂಶಯ ಇದೆ. ಈ ಅನುಮಾನ ಪುರಸಭೆ ಅಧಿಕಾರಿಗಳಿಗೂ ಇದೆ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಪ್ರವಾಸಿ ಜಾಗ
ಪಂಚಗಂಗಾವಳಿ ತೀರವೇ ಅತ್ಯುತ್ತಮ ಪ್ರವಾಸಿತಾಣ. ಎಲ್ಲಿ ಬೇಕಾದರೂ ಪ್ರಕೃತಿ ಸೌಂದರ್ಯ ಆಸ್ವಾದಿಸಬಹುದಾದ, ನದಿ ದಂಡೆಯಲ್ಲಿ ವಿರಮಿಸಬಹುದಾದ ಪ್ರದೇಶ. ಆದರೆ ನದಿಯುದ್ದಕ್ಕೂ ಆಸ್ಪತ್ರೆ, ಅಂಗಡಿ, ಹೊಟೇಲ್ಗಳ ತ್ಯಾಜ್ಯ , ಹಳೆ ಮನೆ ಸಾಮಗ್ರಿ ಹರಡಿದ ಕಾರಣ ಎಲ್ಲಿಯೂ ಕಾಲು ಹಾಕದಂತಾಗಿದೆ. ಹಂಚಿನ ಕಾರ್ಖಾನೆ ಸಮೀಪದಿಂದ ಸಹಾಯಕ ಕಮಿಷನರ್ ಅವರ ಬಂಗ್ಲೆ ತನಕವೂ ಇದೇ ಕೊಳಕು ಪರಿಸ್ಥಿತಿ ಇದೆ.
ಯುವ ಬ್ರಿಗೇಡ್ನಿಂದ ಸ್ವಚ್ಛತೆ
ಪಂಚಗಂಗಾವಳಿ ತೀರವನ್ನು ಯುವ ಬ್ರಿಗೇಡ್ ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಕಾರ್ಯವನ್ನು ಸ್ವತಃ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರೇ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಂಚಗಂಗಾವಳಿ ನದಿ ಪಾತ್ರದಲ್ಲಿ ನದಿಗೆ ಕಸ ಎಸೆದು ಸಂಪೂರ್ಣ ಗಲೀಜಾಗಿತ್ತು. ಇದನ್ನು ಮನಗಂಡ ಯುವಬ್ರಿಗೇಡ್ ಕುಂದಾಪುರ ಘಟಕ ಪಂಚಗಂಗಾವಳಿ ನದಿ ಸ್ವಚ್ಛಗೊಳಿಸಬೇಕು ಎಂದು ನಾಲ್ಕೈದು ವಾರ ನದಿ ಸ್ವತ್ಛ ಮಾಡಿತು. ಇದಿಷ್ಟೇ ಕ್ರಮ ಸಾಲದು ಎಂದು ಮನೆ ಮನೆಗೆ ಭೇಟಿ ಕೊಟ್ಟು ನದಿ ಸ್ವತ್ಛವಾಗಿಡುವುದರ ಕುರಿತು, ನದಿಗೆ ಕಸ ಎಸೆಯದಂತೆ ಅರಿವು ಮೂಡಿಸಿತು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕಾರ್ಯಕರ್ತರ ಸ್ವಂತ ಹಣದಿಂದ ಕಸದ ಬುಟ್ಟಿ ಖರೀದಿಸಿ ಇಟ್ಟಿತು. ನದಿ ಪಾತ್ರದಲ್ಲಿ ಕಸ ಎಸೆಯದಂತೆ ನಾಮ ಫಲಕ ತಂದು ನದಿ ಪಾತ್ರದಲ್ಲಿ ಹಾಕಲಾಯಿತು. ಸತತ 10 ವಾರದಿಂದ ಸ್ವಚ್ಛ ಮಾಡಿದ ತೃಪ್ತಿ ಬ್ರಿಗೇಡ್ಗಿದೆ. ಇದನ್ನು ಮುಂದುವರಿಸುವ ಇರಾದೆಯೂ ಸಂಘಟನೆಗಿದೆ.
ಮೀನುಗಾರಿಕೆಗೆ ಸಂಕಷ್ಟ
ಸಾಂಪ್ರದಾಯಿಕ ಮೀನುಗಾರರು ಇಲ್ಲಿ ದೋಣಿಗಳ ಮೂಲಕ ಮೀನುಗಾರಿಕೆಗೆ ತೆರಳುತ್ತಾರೆ. ಸಂಗ್ರಹವಾದ ತ್ಯಾಜ್ಯದಿಂದ ನದಿ ನೀರೆಲ್ಲ ಕಲ್ಮಶವಾಗಿದ್ದು ನೀರಿನ ಬಣ್ಣವೇ ಬದಲಾಗಿದೆ. ಈ ಕೊಳಚೆ ನೀರಿನಲ್ಲಿ ದೋಣಿ ಇಟ್ಟು ಮೀನುಗಾರಿಕೆಗೆ ತೆರಳಬೇಕಾದ ಅನಿವಾರ್ಯ ಇದೆ. ಸಾಂಕ್ರಾಮಿಕ ರೋಗ ಭೀತಿಯೂ ಇದೆ. ಮದ್ಯದ ಬಾಟಲಿಗಳ ರಾಶಿಯೂ ಆಗಾಗ ಕಂಡು ಬರುತ್ತದೆ. ಮದ್ಯದ ಬಾಟಲಿಗಳ ಸಂಖ್ಯೆ ಹೆಚ್ಚಾದಾಗ ಒಮ್ಮೆ ಮದ್ಯದ ಬಾಟಲಿಗಳ ಕೋಟೆಯನ್ನೇ ಇಲ್ಲಿ ಕಟ್ಟಲಾಗಿದ್ದುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತ್ಯಾಜ್ಯದ ವಾಸನೆ, ಬಾಟಲಿಗಳು ಕಾಲಿಗೆ ತಾಗಿದರೆ ಉಂಟಾಗಬಹುದಾದ ಅಪಾಯ, ಕಲ್ಮಶ ನೀರಿನಿಂದ ಮೀನುಗಳ ಮೇಲೆ ಉಂಟಾಗಬಹುದಾದ ಅಪಾಯದ ಕುರಿತು ಮೀನುಗಾರರು ಚಿಂತಿತರಾಗಿದ್ದಾರೆ.
ಶುಚಿಯಾಗಲಿದೆ
ಆ ಪರಿಸರದಲ್ಲಿ ತ್ಯಾಜ್ಯ ತಂದು ರಾಶಿ ಹಾಕಿ ಅಲ್ಲಿಂದ ಕಂದಾವರ ತ್ಯಾಜ್ಯ ವಿಲೇ ಘಟಕಕ್ಕೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ನಾವಿಟ್ಟ ಕಂಟೈನರನ್ನು ಕೆಲವರು ತಪ್ಪಾಗಿ ಭಾವಿಸಿ ನಮಗೆ ಅರಿವಿಲ್ಲದಂತೆ ಪುರಸಭೆ ವ್ಯಾಪ್ತಿಯಲ್ಲದವರೂ ತಂದು ಸುರಿಯುತ್ತಿರುವ ದೂರು ನಮಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಬಸ್ ಪಾರ್ಕಿಂಗ್ಗೆ ವ್ಯವಸ್ಥೆಯಾಗಲಿದ್ದು ಆಗ ಸಮಸ್ಯೆ ನಿವಾರಣೆಯಾಗಲಿದೆ. ನದಿ ಬದಿ ತ್ಯಾಜ್ಯ ಎಸೆಯುವುದು ಕಡ್ಡಾಯ ನಿರ್ಬಂಧವಿದೆ. ಈ ಪರಿಸರ ಶುಚಿಯಾಗಲಿದೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ