ತೋಪ್ಲು ಕಿಂಡಿ ಅಣೆಕಟ್ಟುನಿರ್ವಹಣೆ ಸಮಸ್ಯೆ : ಒಳನುಗ್ಗುತ್ತಿದೆ ಉಪ್ಪು ನೀರು
4 ಗ್ರಾಮದ ಜನರಿಗೆ ಅನುಕೂಲವಾಗಬೇಕಿದ್ದ ಅಣೆಕಟ್ಟು
Team Udayavani, Jan 24, 2020, 12:12 AM IST
ಹೆಮ್ಮಾಡಿ: ನಾಲ್ಕು ಗ್ರಾಮದ ಜನರಿಗೆ ಕುಡಿಯುವ ನೀರಿಗೆ, ನೂರಾರು ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗಬೇಕಿದ್ದ ಹಕ್ಲಾಡಿ ಗ್ರಾಮದಲ್ಲಿ ತೋಪ್ಲುವಿನಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುವಿನ ಸಮರ್ಪಕ ನಿರ್ವಹಣೆ ಸಮಸ್ಯೆಯಿಂದಾಗಿ ಈಗಾಗಲೇ ಉಪ್ಪು ನೀರು ಒಳ್ಳ ನುಗ್ಗಲು ಆರಂಭವಾಗಿದೆ. ಈ ಭಾಗದ ಬಾವಿಗಳಲ್ಲಿನ ನೀರಿನ ರುಚಿಯೂ ಬದಲಾಗುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಇದಕ್ಕೀಗ ಸಣ್ಣ ನೀರಾವರಿ ಇಲಾಖೆಯು ಮೆಕ್ಯಾನಿಕಲ್ ಗೇಟು ಅಳವಡಿಕೆಗೆ ಚಿಂತನೆ ನಡೆಸುತ್ತಿದೆ.
ಇಲ್ಲಿಗೆ ಸಮೀಪದ ತೋಪ್ಲುವಿನಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುವಿನಲ್ಲಿ ಸರಿಯಾದ ಸಮಯಕ್ಕೆ ಹಲಗೆ ಅಳವಡಿಸದ ಕಾರಣ ನೀರು ಸೋರಿ ಹೋಗಿ, ಉಪ್ಪು ನೀರು ನುಗ್ಗುತ್ತದೆ. ಪ್ರತೀ ವರ್ಷ ಹಲಗೆ ಜೋಡಣೆ ಸಮರ್ಪಕವಾಗಿ ಮಾಡದೆ ಇರುವುದರಿಂದ ಕಿಂಡಿ ಅಣೆಕಟ್ಟಿದ್ದರೂ ಈ ಭಾಗದ ಕೃಷಿಕರಿಗೆ ಸಿಹಿ ನೀರು ಮಾತ್ರ ಮರೀಚಿಕೆಯೇ ಆಗುತ್ತದೆ. ಕಿಂಡಿ ಅಣೆಕಟ್ಟುವಿಗೆ ಹಲಗೆ ಜೋಡಣೆ ರೈತರ ಅನುಕೂಲಕ್ಕಾಗಿಯಾ ಅಥವಾ ಅಧಿಕಾರಿಗಳು, ಗುತ್ತಿಗೆದಾರರ ಪ್ರಯೋಜನಕ್ಕಾ ಎಂದು ಕೃಷಿಕರು ಪ್ರಶ್ನಿಸುತ್ತಿದ್ದಾರೆ.
ಕಿಂಡಿ ಅಣೆಕಟ್ಟುವಿನೊಳಗೆ ಉಪ್ಪು ನೀರು ನುಗ್ಗುವ ಮೊದಲೇ ಹಲಗೆ ಹಾಕಬೇಕೆಂದಿದ್ದರೂ, ಇಲ್ಲಿ ಮಾತ್ರ ಉಪ್ಪು ನೀರು ಮೇಲಕ್ಕೆ ಹೋದ ಅನಂತರ ಹಲಗೆ ಹಾಕಲಾಗುತ್ತದೆ. ಹಲಗೆ ಹಾಕಿ ಎರಡೂ ಸಂಧುವಿನಲ್ಲಿ ಮಣ್ಣು ತುಂಬಿ ನೀರು ಮೇಲಕ್ಕೆ ಹೋಗದಂತೆ ತಡೆಯಬೇಕಿದ್ದರೂ ಹಲಗೆ ಹಾಕಿದ ಕಿಂಡಿಗಳಿಂದ ಸರಾಗ ನೀರು ಮೇಲಕ್ಕೆ ಹೋಗುತ್ತದೆ.
12 ಕೋ.ರೂ.
ವೆಚ್ಚದ ಯೋಜನೆ
ತೋಪ್ಲುವಿನಲ್ಲಿರುವ ಈ ಕಿಂಡಿ ಅಣೆಕಟ್ಟು 10 ವರ್ಷಗಳ ಹಿಂದೆ 12 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಹೆಮ್ಮಾಡಿ, ಕಟ್ಬೆಲೂ¤ರು, ಹಕ್ಲಾಡಿ, ವಂಡ್ಸೆ ಗ್ರಾಮಗಳ ಜನರು ಹಾಗೂ ಇದರ ಆಸುಪಾಸಿನ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಸರಿಯಿಲ್ಲ ಕಾರಣ ಕೃಷಿ ಭೂಮಿಗೆ ಹೆಚ್ಚಿನ ಅನುಕೂಲವಾಗುತ್ತಿಲ್ಲ. ಇಲ್ಲಿನ ಸುತ್ತಮುತ್ತಲಿನ ಬಾವಿಗಳಲ್ಲಿ ಕೆಲ ಸಮಯದವರೆಗೆ ನೀರಿದ್ದರೂ, ಕುಡಿಯಲು ಅಷ್ಟೇನು ಯೋಗ್ಯವಲ್ಲದಂತಾಗಿದೆ. ಇದರಿಂದ ಕೋಟ್ಯಾಂತರ ರೂ. ವೆಚ್ಚದ ಅಣೆಕಟ್ಟು ನಿರ್ಮಿಸಿದರೂ, ನಮಗೆ ಮಾತ್ರ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎನ್ನುವುದು ಈ ಭಾಗದ ಜನರ ಆರೋಪ.
ಪ್ರಯೋಜನವೇ ಆಗುತ್ತಿಲ್ಲ
4 ಗ್ರಾಮಗಳ ಜನರಿಗೆ, ನೂರಾರು ಮಂದಿ ರೈತರಿಗೆ ಅನುಕೂಲವಾಗಬೇಕಿದ್ದ ಈ ಕಿಂಡಿ ಅಣೆಕಟ್ಟುವಿನಿಂದ ತೊಂದರೆಯೇ ಆಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರೆ ಯಾರೋಬ್ಬರೂ ಇತ್ತ ಗಮನಹರಿಸುತ್ತಿಲ್ಲ. ಕಿಂಡಿ ಅಣೆಕಟ್ಟು ಇದ್ದರೂ ಫೆಬ್ರವರಿ, ಮಾರ್ಚ್ನಿಂದಲೇ ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಅಳವಡಿಸಿದ ಹಲಗೆಯನ್ನು ಕೆಲವರು ಮೀನು ಹಿಡಿಯಲೆಂದು ತೆಗೆಯುತ್ತಿದ್ದಾರೆ. ಆಗ ಉಪ್ಪು ನೀರು ಒಳ ನುಗ್ಗುತ್ತದೆ. ಇದನ್ನೆಲ್ಲ ಯಾರು ನಿರ್ವಹಣೆ ಮಾಡಬೇಕು.
– ಶರತ್ ಕುಮಾರ್ ಶೆಟ್ಟಿ,
ಉಪಾಧ್ಯಕ್ಷರು, ಕಟ್ಬೇಲೂ¤ರು ಗ್ರಾ.ಪಂ.
ಕುಡಿಯುವ ನೀರಿಗೂ ಬರ
ಈ ಕಿಂಡಿ ಅಣೆಕಟ್ಟುವಿನಿಂದ 4 ಗ್ರಾಮಗಳ ಕುಡಿಯುವ ನೀರಿಗೆ ಅನುಕೂಲವಾಗಬೇಕಿತ್ತು. ಆದರೆ ಈ ಅಣೆಕಟ್ಟು ಇರುವ ತೋಪ್ಲುವಿನಲ್ಲಿ 100 ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿ ಮಾರ್ಚ್ನಲ್ಲೇ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಬಾವಿಯಿದ್ದರೂ, ಅದು ಉಪ್ಪು ನೀರಾಗಿರುತ್ತದೆ. ಇನ್ನು ಹೆಮ್ಮಾಡಿ, ಕಟ್ಬೆಲೂ¤ರು, ವಂಡ್ಸೆ, ಹಕ್ಲಾಡಿ ಗ್ರಾಮಗಳಿಗೂ ಕುಡಿಯುವ ನೀರಿಗೆ ಯಾವುದೇ ಪ್ರಯೋಜನ ವಾಗುತ್ತಿಲ್ಲ ಎನ್ನುವುದು ಜನರ ಆರೋಪ.
ಮೆಕ್ಯಾನಿಕಲ್ ಗೇಟು ಅಳವಡಿಕೆ
ತೋಪ್ಲು ಕಿಂಡಿ ಅಣೆಕಟ್ಟಿಗೆ ಈಗಾಗಲೇ ಹಲಗೆ ಅಳವಡಿಸಲಾಗಿದೆ. ಮೀನು ಹಿಡಿಯುವವರು ಹಲಗೆ ತೆಗೆಯುತ್ತಿರುವ ಬಗ್ಗೆ ಸ್ಥಳೀಯರೇ ನಮಗೆ ತಿಳಿಸಿದರೆ ಉತ್ತಮ. ಇದಕ್ಕೆ ಪರಿಹಾರವೆನ್ನುವಂತೆ ಅಲ್ಲಿಗೆ ಮೆಕ್ಯಾನಿಕಲ್ ಗೇಟು ಅಳವಡಿಕೆಗೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದ್ದು, ಪ್ರಸ್ತಾವನೆಯನ್ನು ಕೂಡ ಕಳುಹಿಸಲಾಗಿದೆ. ಮುಂದಿನ ವರ್ಷದಿಂದ ಈ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.
-ಶೇಷಕೃಷ್ಣ,ಕಿರಿಯಇಂಜಿನಿಯರ್
ಸಣ್ಣ ನೀರಾವರಿ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?