
ಸುಟ್ಟ ಸ್ಥಿತಿಯಲ್ಲಿ ಬ್ಯಾಂಕ್ ಅಧಿಕಾರಿ ಮೃತದೇಹ; ಪೊಲೀಸರ ತನಿಖೆ ಮುಂದುವರಿಕೆ
Team Udayavani, Nov 16, 2022, 6:45 AM IST

ಉಡುಪಿ: ನಗರದ ವಾದಿರಾಜ ರಸ್ತೆ ಬಳಿಯ ಮನೆಯ ಮಹಡಿಯ ಕೊಠಡಿಯಲ್ಲಿ ಸೋಮವಾರ ಬ್ಯಾಂಕ್ ಅಧಿಕಾರಿ ರಾಜಗೋಪಾಲ್ ಸಾಮಗ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಲ್ಯಾಪ್ಟಾಪ್ ಸಿಡಿದು ಸಾವನ್ನಪ್ಪಿರುವುದೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದ್ಯುತ್ ಪರಿವೀಕ್ಷಕರೂ ಈ ಬಗ್ಗೆ ತಪಾಸಣೆಯನ್ನು ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ವರದಿ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮಾನಸಿಕ ಕಾಯಿಲೆ
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆ ದಿನ ಮನೆಯಲ್ಲಿ ಅವರ ತಾಯಿ ಹಾಗೂ ಒಂದೂವರೆ ವರ್ಷದ ಪುತ್ರ ಮಾತ್ರ ಇದ್ದರು. ಕೊಠಡಿಯಲ್ಲಿ ಬೆಂಕಿ ಆವರಿಸಿದ ಪರಿಣಾಮ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಇದು ಬೆಳಕಿಗೆ ಬಂದಿತ್ತು.
ಬಾಗಿಲಿಗೆ ಚಿಲಕ
ಘಟನೆ ನಡೆದ ಕೊಠಡಿಗೆ ಒಳ ಭಾಗದಿಂದ ಚಿಲಕ ಹಾಕಲಾಗಿತ್ತು. ಅಲ್ಲದೆ ಮಂಚ ಸಂಪೂರ್ಣ ಸುಟ್ಟು ಹೋಗಿತ್ತು. ಎಸಿ ಸಹಿತ ಒಟ್ಟು ಶೇ.70ರಷ್ಟು ಕೊಠಡಿಯ ಭಾಗಗಳು ಸುಟ್ಟುಹೋಗಿದ್ದವು. ಫಾರೆನ್ಸಿಕ್ ತಜ್ಞರು ಈ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಎಫ್ಎಸ್ಎಲ್ ವರದಿಯಿಂದಷ್ಟೇ ಸಂಪೂರ್ಣ ಮಾಹಿತಿ ತಿಳಿದುಬರಲಿದೆ.
ಟಾಪ್ ನ್ಯೂಸ್
