
ಸರಕಾರದ ಅನುದಾನ ಸಮರ್ಪಕ ಬಳಕೆಗೆ ಸೂಚನೆ: ಉಡುಪಿ ಜಿಲ್ಲಾ ತ್ತೈಮಾಸಿಕ ಕೆಡಿಪಿ ಸಭೆ
Team Udayavani, Jan 25, 2023, 11:25 PM IST

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಸಮನ್ವಯದಿಂದ ಅಭಿವೃದ್ಧಿ ಕೆಲಸಗಳನ್ನು ನಡೆಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸೂಚನೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಮರಳು ಲಭ್ಯವಿರುವ ಸ್ಥಳಗಳನ್ನು ವಿಳಂಬವಿಲ್ಲದೆ ಮುಂಚಿತವಾಗಿ ಗುರುತಿಸಿಕೊಂಡು ಮಂಜೂರಾತಿಗೆ ಕ್ರಮ ವಹಿಸಬೇಕು. ಇದರಿಂದ ಮರಳಿನ ಕೊರತೆ ಸಮಸ್ಯೆ ಪರಿಹಾರವಾಗುತ್ತದೆ. ಗ್ರಾ.ಪಂ.ಮಟ್ಟದಲ್ಲಿ ಶೀಘ್ರವಾಗಿ ಮರಳು ತೆರವುಗೊಳಿಸಿದರೆ ಮನೆ ನಿರ್ಮಾಣ ಕಾಮಗಾರಿಗಳ ಅನುಷ್ಠಾನಕ್ಕೆ ಅನುಕೂಲವಾಗುವುದರಿಂದ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದರು.
ನೋಟಿಸ್ ನೀಡುವಂತಿಲ್ಲ
ಮನೆ ನಿರ್ಮಾಣದ ಸಾಲ ಮನ್ನವಾಗಿದ್ದು, ತಾಂತ್ರಿಕ ಕಾರಣಗಳಿಂದ ಸರಕಾರದಿಂದ ಹಣ ಪಾವತಿಯಾಗದ ಪ್ರಕರಣಗಳಲ್ಲಿ ಬ್ಯಾಂಕ್ಗಳು ಫಲಾನುಭವಿಗಳಿಗೆ ನೋಟಿಸ್ ನೀಡುವಂತಿಲ್ಲ ಎಂದರು. ಗ್ರಾಮೀಣ ವಸತಿ ಯೋಜನೆಯಡಿ ಸರಕಾರದಿಂದ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ 4 ಸಾವಿರ ಮನೆಗಳ ಗುರಿ ನೀಡಲಾಗಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೂ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಲು ತಿಳಿಸಲಾಯಿತು.
ಅರ್ಹರನ್ನು ಗುರುತಿಸಿ
ನಗರೋತ್ಥಾನ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯಡಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸಭೆ ಸೂಚಿಸಿತು. ನಗರವಸತಿ ಯೋಜನೆಯಡಿ ಫಲಾನುಭವಿಗಳು ಪೂರ್ಣ ಪ್ರಮಾಣದಲ್ಲಿ ಆಯ್ಕೆಯಾಗಿಲ್ಲದಿರುವ ಬಗ್ಗೆ ಚರ್ಚಿಸಲಾಗಿದ್ದು, ಸಾಕಷ್ಟು ಪ್ರಚಾರ ನೀಡಿ ಅರ್ಹರನ್ನು ಗುರುತಿಸಲು ತಿಳಿಸಲಾಯಿತು.
ತುರ್ತುಕ್ರಮಕ್ಕೆ ಸೂಚನೆ
ವಿವಿಧ ಅಭಿವೃದ್ಧಿ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಬಾವಿಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇರುವ ಪ್ರಕರಣಗಳಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು. ಜಿಲ್ಲಾ ಹಂತದಲ್ಲಿ ಪಂಪ್ ಸರಬರಾಜಿಗೆ ಅವಕಾಶ ಕಲ್ಪಿಸಿರುವುದರಿಂದ ಬಾಕಿ ಇರುವುದನ್ನು ಶೀಘ್ರ ಒದಗಿಸುವಂತೆ ಸಚಿವರು ತಿಳಿಸಿದರು.
ಕಾಲುಸಂಕ: ಸೂಚನೆ
468 ಕಾಲುಸಂಕ ಕಾಮಗಾರಿಗಳನ್ನು ಲೋಕೋ ಪಯೋಗಿ ಇಲಾಖೆಯಿಂದ ಅನುಷ್ಠಾನ ಗೊಳಿಸುತ್ತಿದ್ದು, ಇದರಲ್ಲಿ 42 ಕಾಮಗಾರಿಗಳು ಬಾಕಿ ಇವೆ. ಗ್ರಾಮ ಬಂಧು ಯೋಜನೆ ಯಡಿ 404 ಕಾಮಗಾರಿಗಳಿದ್ದು, 136 ಪೂರ್ಣ ಗೊಂಡಿದೆ. ಇದನ್ನು ಮಾರ್ಚ್ ತಿಂಗಳೊಳಗೆ ಪೂರ್ಣ ಗೊಳಿಸುವಂತೆ ನಿರ್ಧರಿಸಲಾಯಿತು.
ಭೂಸ್ವಾಧೀನ ಸಮಸ್ಯೆ
ಮಣಿಪಾಲ-ಶೀಂಬ್ರ ರಸ್ತೆ ಭೂಸ್ವಾಧೀನ ಮತ್ತು ಪರಿಹಾರದ ಬಗ್ಗೆ ಚರ್ಚೆಯಾಗಿದ್ದು, ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ತೀರ್ಮಾನಿಸಲಾ ಯಿತು. ಮಣಿಪಾಲ ರಾ.ಹೆ. ರಸ್ತೆ ಕಾಮಗಾರಿ ಯಥಾಸ್ಥಿತಿ ಕಾಪಾಡಲು ನ್ಯಾಯಾ ಲಯದ ಆದೇಶವಿರುವ ಬಗ್ಗೆ ಚರ್ಚೆಯಾಗಿ ಭೂಸ್ವಾಧೀನ ಆದೇಶದಲ್ಲಿನ ನ್ಯೂನತೆಯ ಕಾರಣದಿಂದಾಗಿ ಉಂಟಾದ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಸಚಿವರು ಸೂಚನೆ ನೀಡಿದರು.
ಆ್ಯಪ್ ಬಿಡುಗಡೆ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಐಟಿಡಿಪಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಆ್ಯಪ್ಗ್ಳನ್ನು ಸಚಿವರು ಬಿಡುಗಡೆಗೊಳಿಸಿದರು. ಶಾಸಕರಾದ ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಜಿ.ಪಂ. ಸಿಇಒ ಪ್ರಸನ್ನ ಎಚ್., ಪೊಲೀಸ್ ವರಿಷ್ಠಾಧಿ ಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
