ನಿರ್ವಹಣೆಯಿಲ್ಲದೆ ಕಳೆಗುಂದಿದ ದೊಡ್ಡಣಗುಡ್ಡೆಯ ವಾಜಪೇಯಿ ಪಾರ್ಕ್
ಆಟೋಟ ಸಲಕರಣೆಗಳಿಗೆ ತುಕ್ಕು, ವಾಕಿಂಗ್ ಟ್ರ್ಯಾಕ್ನಲ್ಲಿ ಹುಲ್ಲು
Team Udayavani, Jan 27, 2020, 5:59 AM IST
ಉಡುಪಿ: ನಿರ್ವಹಣೆ ಕೊರತೆಯಿಂದಾಗಿ ದೊಡ್ಡಣಗುಡ್ಡೆ ವಾರ್ಡ್ ನಲ್ಲಿರುವ ಮಕ್ಕಳ ವಾಜಪೇಯಿ ಪಾರ್ಕ್ ಇದೀಗ ಬಡವಾಗಿದೆ. ಗಿಡಮೂಲಿಕೆ ಸಸ್ಯಗಳನ್ನು ನೆಟ್ಟು ಗಾರ್ಡನ್ ರೂಪಿಸಲಾಗಿತ್ತು. ಆದರೆ ನಿರ್ವಹಣೆ ಸಮಸ್ಯೆಯಿಂದ ಇದು ಕಳೆ ಕಳೆದುಕೊಂಡಿದ್ದು, ಪಾರ್ಕ್ ಅಭಿವೃದ್ಧಿ ಅಗತ್ಯವಾಗಿದೆ.
ನಿರ್ವಹಣೆ ಸಮಸ್ಯೆ
ಈ ಹಿಂದೆ ಗಾರ್ಡನ್ನಲ್ಲಿ ಔಷಧ ಗಿಡಗಳು, ಅವುಗಳ ಹೆಸರಿನ ಬಗ್ಗೆ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ಅವುಗಳೀಗ ಸಮರ್ಪಕವಾಗಿಲ್ಲ. ಮಕ್ಕಳ ಆಟೋಟ ಸಲಕರಣೆಗಳು ಹಳೆಯದಾಗಿದ್ದು ತುಕ್ಕು ಹಿಡಿದಿವೆ. ತುಂಡಾಗುವ ಆತಂಕವೂ ಇದೆ. ವಾಕಿಂಗ್ ಟ್ರ್ಯಾಕ್ನಲ್ಲಿ ಹುಲ್ಲು, ಗಿಡಗಳು ಬೆಳೆದಿರುವುದರಿಂದ ಬಳಕೆಗೆ ಇಲ್ಲವಾಗಿದೆ.
ಮದ್ಯಪಾನಿಗಳ ಹಾವಳಿ
ಪಾರ್ಕ್ನಲ್ಲೇ ಪುಂಡರು ಮದ್ಯಪಾನ ಮಾಡುತ್ತಾರೆ. ಇವರ ವಿರುದ್ಧ ಪೊಲೀಸ್ ಇಲಾಖೆ ಕಠಿನ ಕ್ರಮ ಕೈಗೊಂಡಿತ್ತು. ಆದರೂ ಅವರ ಕಣ್ತಪ್ಪಿಸಿ ಇಂತಹ ಘಟನೆ ನಡೆಯುತ್ತಿವೆ. ಮಕ್ಕಳ ಪಾರ್ಕ್ನಲ್ಲಿ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂಬುವುದು ಹೆತ್ತವರ ಅಭಿಪ್ರಾಯ.
ಸೌಕರ್ಯವಿಲ್ಲ
ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ ಮೊದಲಾದ ಅವಶ್ಯ ಮೂಲ ಸೌಕರ್ಯಗಳ ಲಭ್ಯತೆ ಈ ಪಾರ್ಕ್ನಲ್ಲಿ ಇಲ್ಲದಿರುವುದರಿಂದ ಪಾರ್ಕ್ ಜನರನ್ನು ಸೆಳೆಯುವಲ್ಲಿ ಹಿಂದೆ ಬೀಳುವಂತಾಗಿದೆ.
ಅಭಿವೃದ್ಧಿಗೆ ಒತ್ತು
ಹಿಂದೆ ಎಲ್ಲ ರೀತಿಯ ಸೌಲಭ್ಯ ಈ ಪಾರ್ಕ್ನಲ್ಲಿ ಲಭ್ಯವಾಗಿತ್ತು. ಆದರೆ ನಿರ್ವಹಣೆಯ ಸಮಸ್ಯೆ ಉಂಟಾದ್ದರಿಂದ ಈಗ ಇವುಗಳಿಗೆ ಹಾನಿಯಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಔಷಧಿ ಗಿಡಗಳು ಸೇರಿದ ಗಾರ್ಡನ್ ನಿರ್ಮಾಣದ ಚಿಂತನೆ ಇದೆ. ಸುಸಜ್ಜಿತ ವಾಕಿಂಗ್ ಟ್ರ್ಯಾಕ್ ಆವಶ್ಯಕತೆಯೂ ಇದೆ. ಪಾರ್ಕ್ನ ಪ್ರವೇಶ ಸಮಯ ನಿಗದಿ ಮಾಡುವ ಮೂಲಕ ಮತ್ತಷ್ಟು ಸುರಕ್ಷೆಯ ಬಗ್ಗೆ ಕ್ರಮ ಕೈಗೊಳ್ಳುವ ಚಿಂತನೆ ಇದೆ.
-ಪ್ರಭಾಕರ್ ಪುಜಾರಿ, ದೊಡ್ಡಣ್ಣ ಗುಡ್ಡೆ ವಾರ್ಡ್ ಸದ್ಯಸ್ಯರು