ಸಮಗ್ರ ಅಭಿವೃದ್ಧಿ, ಸುದೃಢ ಸಮಾಜ ನಿರ್ಮಾಣಕ್ಕೆ ಬಿಜೆಪಿಗೆ ಮತ ನೀಡಿ: ಕ್ಯಾ|ಗಣೇಶ್ ಕಾರ್ಣಿಕ್
ಮಲ್ಪೆಯಲ್ಲಿ ಬಿಜೆಪಿ ಚುನಾವಣ ಪ್ರಚಾರ ಸಭೆ, ಬೃಹತ್ ರೋಡ್ ಶೋ...
Team Udayavani, May 6, 2023, 6:43 PM IST
ಮಲ್ಪೆ: ರಾಜ್ಯದ 2023ರ ಚುನಾವಣೆಗೆ ಚಲಾಯಿಸುವ ಒಂದೊಂದು ಮತವು ದೇಶದ ಗಡಿ ಕಾಯುವಷ್ಟೇ ಪವಿತ್ರವಾದುದು. ಸಮಗ್ರ ಅಭಿವೃದ್ಧಿಯೊಂದಿಗೆ ಸ್ವಾಸ್ಥ್ಯ, ಸುದೃಢ ಸಮಾಜದ ನಿರ್ಮಾಣಕ್ಕಾಗಿ ಸಮರ್ಥ ನಾಯಕತ್ವ ಗುಣ ಹೊಂದಿರುವ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರಿಗೆ ಮತ ನೀಡುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಕರೆ ನೀಡಿದರು.
ಮಲ್ಪೆಯ ವಡಭಾಂಡೇಶ್ವರ ದೇಗುಲದ ಎದುರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಅವರ ಪರ ಮತಯಾಚಿಸಿ, ಮಾತನಾಡಿದರು.
ದೇಶದ ಭದ್ರತೆ, ಸುರಕ್ಷತೆಯ ಜತೆಗೆ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭವ್ಯ ಭಾರತದ ನಿರ್ಮಾಣ ಮತ್ತು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಬಿಜೆಪಿಗೆ ಸ್ಪಷ್ಟ ಬಹುಮತ ಕೊಡುವುದರ ಮೂಲಕ ಬಡವರ ಪರವಾಗಿರುವ ಬಿಜೆಪಿ ಸರಕಾರವನ್ನು ರಚಿಸಬೇಕಾಗಿದೆ. ಹಿಂದೂ ಸಮಾಜವನ್ನು ರಕ್ಷಿಸುವ ಕೈಂಕರ್ಯ ಮಾಡುತ್ತಿರುವ ಬಜರಂಗದಳವನ್ನು ನಿಷೇಧಿಸಲು ಹೊರಟ ಕಾಂಗ್ರೆಸಸ್ಗೆ ತಕ್ಕ ಉತ್ತರ ನೀಡಬೇಕಾಗಿದೆ.
ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಮತದಾರರು ಚಿಂತಿಸಬೇಕಾಗಿದೆ ಎಂದರು.
ಯಶ್ ಪಾಲ್ ಸುವರ್ಣ ಅವರು ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗುರುತಿಸಿ ಪಕ್ಷ ನೀಡಿದ ಜವಾಬ್ದಾರಿಯನ್ನು ಚಾಚೂ ತಪ್ಪದೇ ಪಾಲಿಸುವ ಜತೆಗೆ ಎಲ್ಲಿಯೂ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಲಿದ್ದೇನೆ. ಜನರ ಆಶೋತ್ತರಗಳಿಗೆ ಧ್ವನಿಯಾಗಿ, ಬಡವರ ಕಷ್ಟಗಳಿಗೆ ಸದಾ ಸ್ಪಂದಿಸುವ ಮೂಲಕ ಜನರೊಂದಿಗೆ ಇರಲಿದ್ದೇನೆ. ಯುವ ಜನರಿಗೆ ಹೆಚ್ಚೆಚ್ಚುಉದ್ಯೋಗಾವಕಾಶ ಕಲ್ಪಿಸುವ ಇರಾದೆ ಹೊಂದಿದ್ದೇನೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಉಡುಪಿಯಲ್ಲಿ ಬಿಜೆಪಿ ಶೇ.100ರಷ್ಟು ಗೆಲುವು ಸಾಧಿಸಲಿದೆ. ಕನಕದಾಸರಿಗೆ ಶ್ರೀಕೃಷ್ಣ ಒಲಿದ ರೀತಿಯಲ್ಲಿ ಯಶ್ಪಾಲರಿಗೂ ಒಲಿದಿದ್ದಾನೆ. ಉಡುಪಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗಿದೆ. ಉಳಿದ ಕೆಲಸವನ್ನು ಛಲಗಾರ ಯಶ್ಪಾಲರು ಮಾಡಿ ಪೂರೈಸಿ ಮಾದರಿ ಉಡುಪಿಯನ್ನಾಗಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೀರ್ತಿಶೇಷರಾದ ಟಿ.ಎ.ಪೈ, ಮಲ್ಪೆ ಮಧ್ವರಾಜ್ ಹಾಗೂ ಡಾ| ವಿ.ಎಸ್.ಆಚಾರ್ಯರು ಈ ಕ್ಷೇತ್ರವನ್ನು ಪ್ರತಿನಿಧಿಸಿ ಅಭಿವೃದ್ಧಿಯ ಬೀಜ ಬಿತ್ತಿದ್ದರು. ಈಗ ವಿಪಕ್ಷದವರು ಮಾಡುವ ಅಪವಾದಕ್ಕೆ ಕಿವಿಗೊಡದೆ ಬಿಜೆಪಿಗೆ ಮತ ನೀಡಲು ಮನವಿ ಮಾಡಿದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಹಿಂದುತ್ವದ ಡಿಎನ್ಎ ಕಾಂಗ್ರೆಸ್ಗೆ ಇಲ್ಲ. ಅದು ಬಿಜೆಪಿಯಲ್ಲಿ ಮಾತ್ರ. ಭ್ರಷ್ಟಾಚಾರಕ್ಕೂ ಕಾಂಗ್ರೆಸ್ಗೂ ಅವಿನಾಭಾವ ಸಂಬಂಧವಿದೆ. ಆದುದರಿಂದ ನಿರುದ್ಯೋಗ ನಿರ್ಮೂಲನೆಗೈದ, ಬಯಲು ಶೌಚಾಲಯ ಮುಕ್ತಗೊಳಿಸಿದ, ಸ್ವಾಭಿಮಾನಿ ಭಾರತ ಮಾಡುವ ಇರಾದೆ ಇಟ್ಟುಕೊಂಡ ಬಿಜೆಪಿಗೆ ಮತ ನೀಡಿರಿ. ಜಾತಿಯಾಗಿ ಮತ ಹಾಕದೆ ಭಾರತಕ್ಕಾಗಿ ಮತ ಹಾಕಿ. ಭಾರತದ ಉಳಿವಿಗೆ ಹಿಂದುತ್ವ ಉಳಿಯಬೇಕು. ಹಿಂದುತ್ವದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ ಎಂದರು.
ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ.ರಘುಪತಿ ಭಟ್, ಮಂಗಳೂರು ವಿಭಾಗೀಯ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ
ಶ್ಯಾಮಲಾ ಕುಂದರ್, ಅನಿಲ್ ಆ್ಯಂಟಿನಿ, ಗಣೇಶ್ ಹೊಸಪೇಟೆ, ಬಿ.ಎನ್. ಶಂಕರ ಪುಜಾರಿ, ರವಿರಾಜ್ ಸುವರ್ಣ, ವಿಜಯ್ ಕೊಡವೂರು, ಶ್ರೀಶ ಭಟ್, ಗಾಯತ್ರಿ, ಪ್ರಭಾಕರ ತಿಂಗಳಾಯ, ಕೃಷ್ಣ ದೇವಾಡಿಗ, ಲಕ್ಷಿ ¾à ಮಂಜುನಾಥ್, ಎಡ್ಲಿನ್ ಕರ್ಕಡ, ದಿನಕರ ಬಾಬು, ಕೃಷ್ಣಪ್ಪ ಜತ್ತನ್ನ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್ ಸ್ವಾಗತಿಸಿದರು. ಕೆ. ರಾಘವೇಂದ್ರ ಕಿಣಿ ನಿರೂಪಿಸಿದರು.
ಮೆರವಣಿಗೆಗೆ ಚಾಲನೆ
ಮಲ್ಪೆಯ ಏಳೂರು ಮೊಗವೀರ ಭವನದಿಂದ ವಡಭಾಂಡೇಶ್ವರ ದೇಗುಲದ ವರೆಗೆ ಸುಮಾರು ಒಂದೂವರೆ ಕಿ.ಮೀ. ಮೆರವಣಿಗೆ ಮೂಲಕ ಸಾಗಿ ಮತದಾರರಿಗೆ ಕೈ ಬೀಸುವ ಮೂಲಕ ಮತ ಯಾಚಿಸಿದರು. ಮಲ್ಪೆ ಏಳೂರು ಮೊಗವೀರ
ಭವನದ ಮುಂಭಾಗದಲ್ಲಿ ದಿ| ಡಾ| ವಿ.ಎಸ್. ಆಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಆನಂತರ ಕೊಡವೂರು ಶಂಕರನಾರಾಯಣ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮಲ್ಪೆಯಲ್ಲಿ ಕೇಸರಿ ಕಲರವ
ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಕೇಸರಿ ಶಾಲು, ಬಿಜೆಪಿ ಬಾವುಟ, ಕೇಸರಿ ಧ್ವಜವನ್ನು ಹಿಡಿದು ಭಾರತಾಂಬೆಗೆ ಜೈಕಾರ ಕೂಗಿದರು. ಡಿಜೆ, ಚೆಂಡೆ ವಾದನದೊಂದಿಗೆ ಯಶ್ಪಾಲರಿಗೆ ಜೈಕಾರ ಘೋಷಿಸುತ್ತಾ ಮೆರವಣಿಗೆಗೆ ಹುರುಪು ತುಂಬಿದರು.