1 ರಿಂದ ಬಿಜೆಪಿ ಸಂಭ್ರಮಾಚರಣೆ
ಮೋದಿ ಪ್ರಧಾನಿಯಾಗಿ 8 ವರ್ಷ ಪೂರೈಕೆ-ಮಂಡಲದಿಂದ ವಿವಿಧ ಕಾರ್ಯಕ್ರಮ
Team Udayavani, May 29, 2022, 12:11 PM IST
ಭಟ್ಕಳ: ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದಿಂದ ಬಂದ ಸೂಚನೆಯಂತೆ ಭಟ್ಕಳ ಮಂಡಳದ ವತಿಯಿಂದ ಜೂ.1 ರಿಂದ 15ರ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು.
ಶನಿವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಮೋರ್ಚಾಗಳ ಸಹಯೋಗದಲ್ಲಿ ಯಶಸ್ವಿ ಕಾರ್ಯಕ್ರಮಗಳ ಮೂಲಕ ಸಂಭ್ರಮಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಬಿಜೆಪಿ ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರೊಂದಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದ್ದು, ದೇಶದ ಘನತೆ ಏನೆನ್ನುವುದನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂ.1 ರಂದು ಪಕ್ಷದ ರೈತ ಮೋರ್ಚಾದಿಂದ ರೈತರ ಕಾರ್ಯಕ್ರಮ, 2ರಂದು ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ, 3 ರಂದು ಪರಿಶಿಷ್ಟ ಜಾತಿ ಮೋರ್ಚಾ ಕಾರ್ಯಕ್ರಮ, 4 ರಂದು ಪರಿಶಿಷ್ಟ ಪಂಗಡ ಮೋರ್ಚಾ ಕಾರ್ಯಕ್ರಮ, 5 ರಂದು ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕ್ರಮ ನಡೆದರೆ, 6 ರಂದು ದುರ್ಬಲ ವರ್ಗದವರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. 13 ರಂದು ಬಿಜೆಪಿ ಯುವ ಮೋರ್ಚಾದಿಂದ ಸೈಕಲ್ ರ್ಯಾಲಿ ನಡೆಸಲಾಗುತ್ತದೆ. ಹಿರಿಯ ಸಾಧಕರಿಗೆ ಸನ್ಮಾನ, ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದವರಿಗೆ ಗೌರವ ಹೀಗೆ ಜೂ.15ರ ವರೆಗೂ ಸರಣಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಪಕ್ಷದ ಎಲ್ಲಾ ಮೋರ್ಚಾಗಳಿಗೂ ವಹಿಸಲಾಗಿದ್ದು ಸಂಚಾಲಕರನ್ನು ಪ್ರಮುಖರನ್ನಾಗಿ ಮಾಡಲಾಗಿದೆ ಎಂದರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಸ್ಪರ್ಧಿಸಿದ್ದು, ಈಗಾಗಲೇ ಅವರ ಗೆಲುವಿಗೆ ಎಲ್ಲಾ ಸಿದ್ಧತೆ ನಡೆಸಲಾಗಿದೆ. ತಾಲೂಕಿನಲ್ಲಿ 37 ಪ್ರೌಢಶಾಲೆ ಹಾಗೂ 10 ಕಾಲೇಜುಗಳಿದ್ದು, ಶಿಕ್ಷಕ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಲಾಗಿದೆ. 4 ಶಿಕ್ಷಣ ಸಂಸ್ಥೆಗಳಿಗೆ ಒಬ್ಬರಂತೆ ನಾಲ್ಕು ಮಂದಿ ಘಟಕ ಪ್ರಮುಖರನ್ನು ನೇಮಕ ಮಾಡಲಾಗಿದೆ. ಬಸವರಾಜ ಹೊರಟ್ಟಿ ಅವರಿಗೆ ಭಟ್ಕಳದಿಂದ ಅತೀ ಹೆಚ್ಚು ಮತಗಳು ದೊರೆಯುವ ವಿಶ್ವಾಸವಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದಿಂದ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಟದ ಸುರೇಶ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಮೋಹನ ನಾಯ್ಕ, ಮುಖಂಡರಾದ ದಿನೇಶ ನಾಯ್ಕ, ಪಾಂಡುರಂಗ ನಾಯ್ಕ, ಪುರಸಭಾ ಸದಸ್ಯ ಉದಯ ನಾಯ್ಕ ಮುಂತಾದವರಿದ್ದರು.