ಮಳೆ-ಬಿಸಿಲಾಟ: ವಿಮೆಗೆ ದೋಖಾ
ಒಂದೇ ಹೋಬಳಿಯಲ್ಲಿ ಒಂದೆಡೆ ಬಿಸಿಲು-ಇನ್ನೊ ಂದೆಡೆ ಜೋರು ಮಳೆ
Team Udayavani, Aug 25, 2020, 4:59 PM IST
ಸಾಂದರ್ಭಿಕ ಚಿತ್ರ
ಶಿರಸಿ: ಹೋಬಳಿ ಆಧರಿಸಿ ಮಳೆ ವರದಿ ಸಾರ್ವಜನಿಕವಾಗಿ ಬಿಡುಗಡೆ ಗೊಳಿಸುತ್ತಿರುವುದರಿಂದ ಹವಾಮಾನ ಆಧರಿತ ಬೆಳೆ ವಿಮೆ ಮುಂದಿನ ವರ್ಷ ರೈತರಿಗೆ ದೋಖಾ ಆಗಲಿದೆಯೇ ಎಂಬ ಶಂಕೆ ಉಂಟಾಗಿದೆ.
ಹೋಬಳಿ ಒಂದೇ ಆದರೂ ಒಂದು ಕಡೆ ಮಳೆ ಇನ್ನೊಂದು ಕಡೆ ಬಿಸಿಲು ಇರುವ ವಿಲಕ್ಷಣ ಹವಾಮಾನ ಶಂಕೆಗೆ ಕಾರಣ ವಾಗಿದೆ. ಹೋಬಳಿ ಆಧರಿಸಿ ಮಳೆ ವರದಿ ಪ್ರಕಟಿಸುತ್ತಿರುವುದರಿಂದ ಹೋಬಳಿಯ ಒಂದು ಭಾಗದಲ್ಲಿ ಮಳೆ ಇದ್ದರೆ, ಇನ್ನೊಂದೆಡೆ ಬಿಸಿಲು ಇರುತ್ತಿದೆ. ಎಲ್ಲ ಗ್ರಾಪಂ ಮಳೆ ವರದಿಯನ್ನು ಸಮೀಕರಣಗೊಳಿಸಿ ಸರಾಸರಿ ವರದಿ ಪ್ರಕಟಿಸಲಾಗುತ್ತಿದೆ. ಇದು ಅತಿ ಮಳೆಬಿದ್ದ ಪ್ರದೇಶದ ರೈತರಿಗೆ ಸಿಗಬಹುದಾದ ಅಳಿದುಳಿದ ವಿಮೆಯ ಮೊತ್ತವೂ ಖೋತಾ ಆಗುವ ಸಾಧ್ಯತೆ ಇದೆ. ಬನವಾಸಿ ಹೋಬಳಿಯ ಬಿಸಲಕೊಪ್ಪದಲ್ಲಿ ಮಳೆ ಇದ್ದರೆ, ಬನವಾಸಿಯಲ್ಲಿ ಬಿಸಿಲು ಇರುವುದು, ಶಿರಸಿ ಹೋಬಳಿಯ ಕಾನಗೋಡಿನಲ್ಲಿ ಮಳೆ ಇದ್ದರೆ, ಕುಳವೆಯಲ್ಲಿ ಮಳೆ ಇಲ್ಲ. ಈ ಸಮಸ್ಯೆ ಈಗ ಜ್ವಲಂತವಾಗಿ ಕಾಡುವಂತೆ ಆಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹ ಭಾಗಿತ್ವದ ಹವಾಮಾನ ಆಧರಿತ ಬೆಳೆವಿಮೆ ರೈತರಿಗೆ ಕಳೆದ ಮೂರು ವರ್ಷಗಳಿಂದ ಜಾರಿಗೊಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆವಿಮೆ ಈಗಾಗಲೇ ಅನುಷ್ಠಾನದಲಿದೆ. ಅಗ್ರಿಕಲ್ಚರಲ್ ಇನ್ಸುರೆನ್ಸ್ ಕಂಪನಿ ವಿಮಾ ಜವಾಬ್ದಾರಿ ಹೊತ್ತಿದೆ. ರೈತರು ಶೇ.5ರ ಪಾಲನ್ನು ಸಹಕಾರಿ ಸಂಘಗಳಲ್ಲಿ ಬೆಳೆಸಾಲ ಪಡೆಯುವಾಗ ಅಥವಾ ಬೆಳೆಸಾಲ ಪಡೆಯದೇ ಇದ್ದರೂ ವಿಮೆ ಪಾವತಿಸಲು ಅನುಕೂಲವಿದೆ. ಜಿಲ್ಲಾ ತೋಟಗಾರಿಕಾ ಇಲಾಖೆ ಇದರ ಅನುಷ್ಠಾನ ಅಧಿಕಾರ ಹೊಂದಿದೆ.
ಕಳೆದ ವರ್ಷದ ತನಕ ಪ್ರತಿ ಗ್ರಾಪಂ ಮಟ್ಟದ ಮಳೆ ವರದಿಯನ್ನು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತಿತ್ತು. ಬಹುತೇಕ ಪಂಚಾಯ್ತಿ ಕಟ್ಟಡದ ಮೇಲೆಯೇ ಮಳೆ ಮಾಪನ ಘಟಕ ಕೂಡ ಇದೆ. ಇದೇ ಯಂತ್ರ ಮಳೆಯ ಪ್ರಮಾಣ ಅಳೆದು ಸೆಟ್ಲೆçಟ್ ಮೂಲಕ ದಾಖಲಿಸುತ್ತದೆ. ಅದೇ ವಿಮೆಗೂ ಮೂಲ. ಇದರಿಂದ ರೈತರು, ವಿಮೆ ಕಟ್ಟಿದ ಗ್ರಾಹಕರು ಮಳೆಯ ಪ್ರಮಾಣವನ್ನು ಅಂದಾಜಿಸಿಕೊಳ್ಳುತ್ತಿದ್ದರು. ಬಿದ್ದ ಮಳೆಗೂ ದಾಖಲಾದ ವಿವರಕ್ಕೂ ಹೋಲಿಕೆಗೆ ಅನುಕೂಲ ಆಗುತ್ತಿತ್ತು. ಆದರೆ ಈ ಮಳೆಗಾಲದಿಂದ ಪಂಚಾಯ್ತಿ ಮಟ್ಟದ ವರದಿ ನೀಡದೇಹೋಬಳಿ ಮಟ್ಟದ ವರದಿ ನೀಡುತ್ತಿರುವುದೇ ಸಮಸ್ಯೆಗೆ ಮೂಲವಾಗಿದೆ. ವೈಯಕ್ತಿಕವಾಗಿ ನಂತರ ಸಂಗ್ರಹಿಸಲಾಗುತ್ತದೆ ಎಂದಿದ್ದರೂ ಮಾನದಂಡ ಯಾವುದು ಎಂಬ ಗೊಂದಲ ಉಂಟಾಗಿದೆ.
ಆಗಸ್ಟ್ದಲ್ಲಿ ಧೋ ಧೋ ಎಂದು ಮಳೆ ಸುರಿದರೂ ಹೋಬಳಿ ಮಟ್ಟದ ವರದಿಯಲ್ಲಿ ಆಗಸ್ಟ್ ಮೊದಲ ಸೋಮವಾರ ಮಳೆ ಪ್ರಮಾಣ ತೀರಾ ಕಡಿಮೆ ಇತ್ತು. ಈ ವ್ಯತ್ಯಾಸದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತೋಟಗಾರಿಕಾ ಇಲಾಖೆ ಮೂಲವೊಂದು ಹೇಳಿದೆ. ಹೋಬಳಿ ಮಟ್ಟದ ಪಂಚಾಯ್ತಿಗಳ ಸರಾಸರಿ ಮಳೆ ವರದಿ ಸಮಸ್ಯೆ ಆಗುತ್ತದೆ. ವಿಮೆ ಪಂಚಾಯ್ತ ಘಟಕವಾಗಿ ದಾಖಲಿಸಬೇಕಾದ್ದರಿಂದ ಮಳೆ ವರದಿ ಹೋಬಳಿಗೆ ಏರಿದೆ. ಕಳೆದ ಜು.22ಕ್ಕೆ ಉದಯವಾಣಿ ವರದಿ ಪ್ರಕಟಿಸಿದ್ದರೂ ಸರಕಾರ ಇನ್ನೂ ಕಣ್ಣೆತ್ತಿಲ್ಲ, ಸ್ಪೀಕರ್ ಅವರ ಹೆಗಲ ಮೇಲೆ ಈ ಸಮಸ್ಯೆ ಇದ್ದು, ತಿಂಗಳಿಂದ ರೈತರು ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ! ಈ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಕಳೆದ ವರ್ಷ ಜುಲೈದಲ್ಲೇ 2018ರಂದು ಕಟ್ಟಿದ ವಿಮೆ ಹಣ ಬಂದಿತ್ತು. ಆದರೆ, ಈ ಬಾರಿ ಆಗಸ್ಟ್ ಕೊನೆಗೆ ಬಂದರೂ ವಿಮಾ ಹಣ ಬಂದಿಲ್ಲ. ವಿಮೆ ಕಟ್ಟಿಸಿಕೊಂಡವರಿಗೂ, ಅನುಷ್ಠಾನದ ಅಧಿಕಾರಿಗಳಿಗೂ ಗೊತ್ತಿಲ್ಲ. -ಜಿ.ವಿ. ಹೆಗಡೆ, ರೈತ, ವಿಮಾ ಗ್ರಾಹಕ
ವಿಮಾ ನಿರ್ವಹಣೆಯಲ್ಲಿ ಜಿಲ್ಲೆಗೆ ವಿಮೆಯ ಪ್ರತಿನಿಧಿಯೊಬ್ಬರು ನೋಡೆಲ್ ಅಧಿಕಾರಿಯಾಗಿದ್ದರೆ ಇಂತಹ ಸಮಸ್ಯೆಗೆ ನಿವಾರಣೆ ಸಾಧ್ಯ. -ವಿನಾಯಕ ಹೆಗಡೆ, ರೈತ
-ರಾಘವೇಂದ್ರ ಬೆಟ್ಟಕೊಪ್ಪ