ಸಿ.ಟಿ.ರವಿ ಜಾಸ್ತಿ ಕುಡಿದಾಗ ಮಾತು ಕಮ್ಮಿ: ಬಿ.ಕೆ.ಹರಿಪ್ರಸಾದ್
Team Udayavani, Jan 1, 2023, 9:11 PM IST
ಭಟ್ಕಳ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜಾಸ್ತಿ ಕುಡಿದಾಗ ಸ್ವಲ್ಪವೇ ಮಾತನಾಡುತ್ತಾರೆ. ಗಾಂಜಾ ಹೆಚ್ಚು ಸೇವಿಸುತ್ತಾರೆ ಎಂದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಡಿದು ಏನೇನೋ ಮಾತನಾಡುವವರ ಕುರಿತು ಪ್ರತಿಕ್ರಿಯೆ ನೀಡಿದರೆ ಅದು ತಪ್ಪಾಗುತ್ತದೆ. ಜಾಸ್ತಿ ಕುಡಿದು ನಮ್ಮ ಪಕ್ಷಕ್ಕೆ ಬಂದರೂ ಆಶ್ಚರ್ಯವಿಲ್ಲ ಎಂದರು.
ಜೆಡಿಎಸ್ ಅದೊಂದು ಪಕ್ಷವೇ ಅಲ್ಲ, ಅದು ಜಾಯಿಂಟ್ ಫ್ಯಾಮಿಲಿ ಕಂಪನಿ. ಅದಕ್ಕೂ ನಮ್ಮ ಪಕ್ಷಕ್ಕೂ ವ್ಯತ್ಯಾಸವಿದೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಘೋಷಣೆಗೆ ನೀತಿ ನಿಯಮ ಇದೆ. ಕೆಲವೊಂದು ಪ್ರಕ್ರಿಯೆಗಳು ಮುಗಿದ ನಂತರವೇ ಘೋಷಣೆ ಮಾಡಬೇಕಾಗುತ್ತದೆ. ನಮ್ಮ ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ.
ಇನ್ನೂ ಪಕ್ಷಕ್ಕೆ ಬರುವ ಪ್ರಕ್ರಿಯೆ ಆರಂಭವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಪಕ್ಷ ಎಂದರೆ ಅದು ಬಿಜೆಪಿ. ಮುಂದಿನ ಚುನಾವಣೆಯಲ್ಲಿ ನಾವು 150 ಸೀಟು ಗೆಲ್ಲುತ್ತೇವೆ ಎನ್ನುತ್ತಿರುವ ಅವರು, ಖರೀದಿ ಮಾಡುವ ಲೆಕ್ಕಾಚಾರದಲ್ಲಿ ಹೇಳುತ್ತಿದ್ದಾರೆ ಎಂದರು.