ಪಕ್ಷಕ್ಕಾಗಿ ದುಡಿದಿದ್ದೇನೆ,ಶಿರಸಿ ಕ್ಷೇತ್ರಕ್ಕೆ ನಾನೂ ಟಿಕೆಟ್ ಆಕಾಂಕ್ಷಿ:- ದೀಪಕ್ ದೊಡ್ಡೂರು
Team Udayavani, Jul 10, 2021, 2:36 PM IST
ಶಿರಸಿ: ಕಾಂಗ್ರೆಸ್ ಗೆ ನಾನು ನಿನ್ನೆ ಮೊನ್ನೆ ಬಂದವನಲ್ಲ. ನಾನೂ ಶಿರಸಿ ಸಿದ್ದಾಪುರ ಆಕಾಂಕ್ಷಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹೇಳಿದರು.
ಶನಿವಾರ ಅವರು ನಗರದಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿ, ಕಳೆದ 2004 ರಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ, ವಿವಿಧ ಜವಬ್ದಾರಿ ನಿರ್ವಹಿಸಿದ್ದೇನೆ. ನಾನೂ ವಿವಿಧ ಚುನಾವಣೆಯಲ್ಲಿ ಮುಖ್ಯವಾಗಿ ದುಡಿದಿದ್ದೇನೆ. ಈ ಕಾರಣದಿಂದ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು, ನಾಯಕರಾದ ಆರ್.ವಿ.ದೇಶಪಾಂಡೆ, ಜಿಲ್ಲಾಧ್ಯಕ್ಷರಾದ ಭೀಮಣ್ಣನಾಯ್ಕ ಅವರು ನೀಡುವ ತೀರ್ಮಾನಕ್ಕೆ ಬದ್ದನಿದ್ದೇನೆ. ಯಾವುದೇ ಕ್ಷೇತ್ರದ ಸೇವಾ ಕರ್ತನಿಗೆ ಅದರಲ್ಲಿ ಬೆಳೆಯಬೇಕು ಎಂಬ ಕನಸು ಸಹಜ. ಈ ಕಾರಣದಿಂದ ನಾನೂ ಆಕಾಂಕ್ಷಿತ. ಆದರೆ ವಿಧಾನ ಸಭಾ ಚುನಾವಣೆಗೆ ಎರಡು ವರ್ಷ ಉಂಟು ಎಂದೂ ಹೇಳಿದರು.
ಇದನ್ನೂ ಓದಿ: ಮಾಜಿ ಸಚಿವ ಎಂ.ಬಿ.ಪಾಟೀಲಗೆ ಸ್ವಪಕ್ಷೀಯ ಶಾಸಕ ವೈ.ವಿ.ಪಾಟೀಲ್ ಸವಾಲು
ಈಗಾಗಲೇ ಶಿರಸಿ ಕ್ಷೇತ್ರದ ಮೇಲೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾ ರೆಡ್ಡಿ ಕಣ್ಣಿಟ್ಟು ಬಹಿರಂಗವಾಗಿ ಪ್ರಕಟಿಸಿದ್ದು ಉಲ್ಲೇಖನೀಯ. ಈಗ ದೀಪಕ್ ದೊಡ್ಡೂರು ತಾನೂ ಆಕಾಂಕ್ಷಿ ಎಂದಿದ್ದಾರೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ನಾಯಕರಾದ ಬಿ.ಕೆ.ಹರಿಪ್ರಸಾದ ಅವರು ಜೀವ ಜಲಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರ ಮನೆಗೂ ತೆರಳಿ ಸಮಾಲೋಚನೆ ನಡೆಸಿದ್ದು ಹೊಸಬರಿಗೂ ಮಣೆ ನಡೆಯುತ್ತಿದೆ ಎಂಬ ಮಾತುಗಳೂ ಕಾಂಗ್ರೆಸ್ ವಲಯದಲ್ಲಿದೆ.