ಪ್ರಕೃತಿ ಸೌಂದರ್ಯದ ಊರು ಈಗ ನರಕ| ಜನತೆಗೆ ಬದುಕು ಕಟ್ಟಿಕೊಳ್ಳುವ ತವಕ
ಕಳಚೆಗೆ ನವಗ್ರಾಮದ ಕನವರಿಕೆ
Team Udayavani, Aug 1, 2021, 2:35 PM IST
ವರದಿ: ನರಸಿಂಹ ಸಾತೊಡ್ಡಿ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಕಾಶ್ಮೀರ ಎಂದೇ ಕರೆಸಿಕೊಳ್ಳುತ್ತಿದ್ದ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ ಕುಂಭದ್ರೋಣ ಮಳೆಗೆ ಕೊಚ್ಚಿಹೋಗಿದೆ. ಪಶ್ಚಿಮ ಘಟ್ಟದ ತಪ್ಪಲಿನ ಈ ಸುಂದರ ಊರು ವರುಣನ ಆರ್ಭಟಕ್ಕೆ ಸಿಲುಕಿ ಮೂಲ ಸೌಂದರ್ಯವನ್ನೇ ಕಳೆದುಕೊಂಡು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಇಲ್ಲಿನ ಜನರ ಬದುಕು ಅಕ್ಷರಶಃ ಚಿಂದಿಯಾಗಿದೆ.
ಮಳೆಗೆ ಬದುಕೇ ಬರಬಾದ್: ಕಳಚೆ ಭಾಗದಲ್ಲಿ ಮಳೆ ಹೊಸತಲ್ಲ. ಇದೇ ರೀತಿ ಮಳೆ ಈ ಹಿಂದೆಯೂ ಆಗಿತ್ತಾದರೂ ಇಂತಹ ದುರಂತವೇನೂ ಅಗಿರಲಿಲ್ಲ. ಸಹ್ಯಾದ್ರಿಯ ತಪ್ಪಲು ಸುಂದರ ಕಾಶ್ಮೀರ ಎಂದೆಲ್ಲ ಶಿವರಾಮ ಕಾರಂತರು ಕರೆದಿದ್ದ ಈ ಊರು ಈಗ ಅಲ್ಲೋಲ ಕಲ್ಲೋಲವಾಗಿದೆ. ಧರೆಯೊಳಗಿಲ್ಲ ಇಂಥ ಸೊಬಗಿನ ಊರು ಎನ್ನುತ್ತಿದ್ದೆವು. ಈಗ ಧರೆಯೊಳಗೇ ಊರು ಹೂತು ಹೋಗುತ್ತಿದೆ. ಅವಘಡವಾಗುವಷ್ಟು ಆಗಿದೆ. ಇನ್ನು ಏನೂ ಬಾಕಿ ಉಳಿದಿಲ್ಲ. ಕಷ್ಟದ ಬದುಕು ಕಂಡ ಇಲ್ಲಿಯ ಜನ ಸದ್ಯ ಆಧುನಿಕತೆಯ ಎಲ್ಲಾ ಸವಲತ್ತುಗಳನ್ನೂ ಊರಿಗೆ ಮಾಡಿಕೊಂಡಿದ್ದರು. ಆದರೆ ಒಂದು ಮಳೆ ಇವರ ಸುಂದರ ಬದುಕನ್ನೇ ಕಸಿದುಕೊಂಡಿದೆ. ನೂರಾರು ವರ್ಷಗಳಿಂದ ಇಲ್ಲಿನ ಜನ ಕಟ್ಟಿಕೊಂಡಿದ್ದ ಬದುಕು ಮೂರಾಬಟ್ಟೆಯಾಗಿದ್ದು ದಿಕ್ಕು ತೋಚದಂತಾಗಿದೆ.
ಕಾಡು-ಮೇಡು-ಗುಡ್ಡ: ಕಳಚೆ ಯಲ್ಲಾಪುರ ಪಟ್ಟಣದಿಂದ 30 ಕಿಮೀ ದೂರದ ಗುಡ್ಡಗಾಡು ಪ್ರದೇಶ. ಈ ಊರಿಗೆ ಇರುವುದು ಒಂದೇ ಮಾರ್ಗ. ಯಾವ ಮಾರ್ಗದಲ್ಲಿ ಹೋಗಿದ್ದೆಯೋ ಅದೇ ಮಾರ್ಗದಲ್ಲಿ ವಾಪಸ್ಸಾಗಬೇಕು. ಬಿಟ್ಟರೆ ಅನ್ಯ ದಾರಿಯೇ ಇಲ್ಲ. ಕೋಟೆಯೊಳಗಿನ ಊರು. ಒಂದು ಕಡೆ ಕಾಳಿನದಿ. ಈಗ ಅದು ಕೊಡಸಳ್ಳಿ ಅಣೆಕಟ್ಟಿನಿಂದ ತುಂಬಿದ ಹೊಳೆ. ಇನ್ನೊಂದು ಕಡೆ ಇದೇ ಅಣೆಕಟ್ಟಿನಿಂದ ಮುಳುಗಿದ ಊರು ಕೊಡಸಳ್ಳಿ, ಬರಬಳ್ಳಿ ಇನ್ನೊಂದೆಡೆ ಭಯನಕ ಕೈಗಾ ಅಣುಸ್ಥಾವರ. ಊರಿನಿಂದ ಮೇಲೆ ಹತ್ತಿ ಬಂದರೆ ಒಂದು ಕಾಲದಲ್ಲಿ ಮ್ಯಾಂಗನೀಸ್ ಅದಿರು ತೆಗೆದ ತಳಕೆಬೈಲು ಪ್ರದೇಶ ಇದೆ. ಇವೆಲ್ಲ ಸಂಕೋಲೆಗಳ ಮಧ್ಯೆ ಅಪಾಯದ ಹೊಂಡದಲ್ಲಿದ್ದ ಊರು ಕಳಚೆಯಾಗಿದ್ದರೂ ಇಂತಹ ಅಪಾಯ ಬರುತ್ತದೆಂದು ಭಾವಿಸಿರಲಿಲ್ಲ.
ಈಗೇನಾಗಿದೆ ಪರಿಸ್ಥಿತಿ: ಕುಸಿದ ನೆಲದ ಮೇಲೆ ಕಾಲಿಟ್ಟರೆ ಸೊಂಟದವರೆಗೆ ಹೂತುಹೋಗುತ್ತೇವೆ. ಊರಲ್ಲಿದ್ದ ದಾರಿಗಳೆಲ್ಲ ಕೊಳ್ಳ ಹಳ್ಳದ ಮಾರ್ಗವಾಗಿ ಮಾರ್ಪಟ್ಟಿದೆ. ಯಾರದೋ ತೋಟ ಮತ್ತೆಲ್ಲೆಯೋ ಮಕಾಡೆ ಮಲಗಿದೆ. ಇದ್ದ ಮನೆಯ ಮೇಲ್ಗಡೆ ಎತ್ತರದ ಧರೆಯೊಂದು ರಾಕ್ಷಸನ ಹಾಗೆ ಮತ್ತೆ ಮತ್ತೆ ಎರಗುವ ಭಯ ಮೂಡಿಸುತ್ತಿದೆ. ಈ ಮಧ್ಯೆ ಸಿಕ್ಕಿದ್ದನ್ನು ಬಾಚಿಕೊಂಡು ಇಲ್ಲಿನ ಕುಟುಂಬಗಳು ಗುಳೆ ಹೊರಟಿವೆ. ದಾರಿಯಲ್ಲಿ ಬಾ ಎಂದು ಕರೆದರೆ ಅದೇ ಅಲ್ಲಿಯ ಜನರಿಗೆ ಸದ್ಯದ ಆಸರೆ. ಒಂದು ಕೈಲಿ ಇದ್ದುಬಿದ್ದ ಕಾಗದಪತ್ರ ದಾಖಲೆಗಳ ಕೈಚೀಲ. ಕಾಲಿಗೆ ಚಪ್ಪಲಿಯೂ ಇಲ್ಲದೆ ಮತ್ತೂಂದು ಕೈಲಿ ಸಾಕಿದ ಎತ್ತು-ಎಮ್ಮೆ ಹಿಡಕೊಂಡು ಗುಡ್ಡ ಹತ್ತಿದರೂ ಆಸರೆಯನ್ನರಸಿ ಹೊರಟಿದ್ದಾರೆ ಇಲ್ಲಿನ ಜನ.
ಸುಂದರ ಕಣಿವೆ, ಪ್ರಕೃತಿ, ಸೊಬಗು, ದೇವಾಲಯ, ಶಿವರಾಮ ಕಾರಂತರ ಕಳಚೆಯ ಕಲ್ಲು, ಯಕ್ಷಗಾನ, ನಾಟಕ, ಇದೆಲ್ಲವೂ ಇತಿಹಾಸ. ಈಗ ಗುಳೇ ಹೋಗುವ ಸ್ಥಿತಿ. ವಾಸ್ತವವಾಗಿ ಇರುವ ಒಂದು ಬದಿಯ ದಾರಿಯೂ ಕುಸಿದಿದ್ದರಿಂದಾಗಿ ಜನ ಹೊರಬಿದ್ದು ಹೋಗಲೂ ದಾರಿಯಿಲ್ಲ. ಸಂಪೂರ್ಣ ಕಳಚಿ ಬಿದ್ದ ಕಳಚೆ ಕಂಡರೆ ಯಾರಿಗಾದರೂ ಒಮ್ಮೆ ಕಣ್ತುಂಬಿ ಬರುತ್ತದೆ. ಮಳೆ ಅಂತಹ ನರಕವನ್ನು ಇಲ್ಲಿ ಸೃಷ್ಟಿಸಿದೆ.
ಊರು ಬಿಡುವುದೊಂದೇ ದಾರಿ: ಅಷ್ಟಕ್ಕೂ ಸದ್ಯ ಊರಿಗೆ ಯಾವ ದಾರಿಯೂ ಇಲ್ಲ. ಹೋಗಿದ್ದೆ ದಾರಿ. ಕೊಳ್ಳ ಹಿಡಿದು ಹೋಗುವುದೇ ದಾರಿ. ಕಿಲೋ ಮೀಟರ್ ವರೆಗೆ ಧರೆ ಜಾರಿದೆ. ನೆಲ ಗಟ್ಟಿಯಾಗಿದೆ ಎಂದು ಹೆಜ್ಜೆ ಹಾಕುವುದು ಕೂಡಾ ಕಷ್ಟ. ಪುನರ್ವಸತಿಯೇ ಇವರಿಗೆ ಪರಿಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ವ್ಯವಸ್ಥೆ ಎಂದೋ ಗೊತ್ತಿಲ್ಲ. ಸದ್ಯ ಒಂದೊಂದು ಮನೆಯವರು ಎಲ್ಲೆಲ್ಲೋ ಹೋಗುತ್ತಿದ್ದಾರೆ. ಎಲ್ಲೋ ಇದ್ದವರೂ ಸಣ್ಣಪುಟ್ಟ ನೌಕರಿ ದಂಧೆ ಮಾಡಿಕೊಂಡು ಊರಹೊರಗಿದ್ದವರೂ ಲಾಕ್ಡೌನ್ಎಂದು ಊರಿಗೆ ಬಂದು ಸೇರಿಕೊಂಡಿದ್ದಾರೆ. ಈಗ ಅವರೆಲ್ಲ ಮುಂದಿನ ದಿಕ್ಕುಕಾಣದೆ ತಲೆ ಮೇಲೆ ಕೈ ಹೊತ್ತು ಕಾಡ ಮಧ್ಯದಲ್ಲೇ ಕುಳಿತಿದ್ದಾರೆ. ಈ ಊರಿನಲ್ಲಿರುವವರಿಗೆ ಈಗ ಹಗಲು ರಾತ್ರಿ ಎರಡೂ ಒಂದೇ. ವಿದ್ಯುತ್, ನೀರು, ದೂರವಾಣಿ ಯಾವ ಸಂಪರ್ಕವೂ ಇಲ್ಲ. ಎಷ್ಟೋ ಕುಟುಂಬಗಳು ನೆಂಟರ ಮನೆ ಸೇರಿದ್ದಾರೆ. ದನಕರುಗಳು ಕೂಡಾ ಅವರೊಂದಿಗೆ ಸೇರಿಕೊಂಡಿವೆ. ಎಲ್ಲೋ ಗಂಜಿಕೇಂದ್ರ ಮಾಡಿಕೊಂಡು ಉಳಿಯುವುದಕ್ಕೂ ವ್ಯವಸ್ಥೆಯ ದೃಷ್ಟಿಯಿಂದ ಸಾಧ್ಯವಿಲ್ಲ. ಸಂಪರ್ಕವಿಲ್ಲದ ಊರಲ್ಲಿ ಸಾಧ್ಯವಿಲ್ಲದ್ದೇ ಹೆಚ್ಚಾಗಿದೆ. ಮಳೆಯಿಂದ ಕೆಲವೆಡೆ ತೋಟ ಮುಳುಗಿದ್ದರೆ ಮನೆ ಚೆನ್ನಾಗಿದೆ. ಮನೆ ಮುಳುಗಿದ್ದರೆ ತೋಟ ಚೆನ್ನಾಗಿದೆ. ಆದರೆ ಕಳಚೆಯಲ್ಲಿ ಇವೆರಡನ್ನೂ ಕಿತ್ತುಕೊಂಡಿದೆ. ಮುಂದೆ ಬದುಕಬಹುದೆಂಬ ಧೈರ್ಯವೂ ಜನರಲ್ಲಿಲ್ಲವಾಗಿದೆ. ಅತಂತ್ರವಾಗುತ್ತಿರುವ ಬದುಕಿಗೆ ದಾರಿ ಯನ್ನು ಸರಕಾರವೇ ತೋರಿಸಬೇಕಿದೆ.
ಬೇಕಿದೆ ನೆರವಿನ ಹಸ್ತ: ಕಳಚೆಯ ಪುನರ್ ಸೃಷ್ಟಿ ಸಾಧ್ಯವಿಲ್ಲ. ಆದರೆ ಮುಂದೆಲ್ಲಿ ಎಂಬುದು ಪ್ರಶ್ನೆಯಂತೂ ಹೌದು. ನಮ್ಮನ್ನಾಳುವವರು ಭೇಟಿ ಸಾಂತ್ವನ ಈ ಎಲ್ಲಕ್ಕಿಂತ ತುರ್ತಾಗಿ ಮುಂದೇನು? ಎಂಬ ಬಗ್ಗೆ ಒಟ್ಟಾಗಿ ಯೋಚಿಸುವ ಅಗತ್ಯತೆ ಇದೆ. ಮುಖ್ಯಮಂತ್ರಿಗಳೇ ಈ ನರಕಸದೃಶ್ಯ ಪ್ರದೇಶಕ್ಕೆ ಬಂದು ನೋಡಿದ್ದಾರೆ. ಹೀಗಾಗಿ ಕತ್ತಲೆಯ ಬದುಕಿಗೆ ಏನಾದರೊಂದು ಬೆಳಕು ಸಿಗಬಹುದು ಎಂಬುದು ಈ ಊರಿನ ಜನರ ಆಸೆ. ಆದರೆ ಎಲ್ಲವೂ ಹೊಸದಾಗಿ ಆಗುವವರೆಗೆ ಈ ಊರಿಗೆ ಜನರಿಗೆ ದಿಕ್ಕು ಯಾರು ಎಂಬುದೇ ಯಕ್ಷ ಪ್ರಶ್ನೆ. ಮಳೆಯಿಂದ ಕೊಂಡಿ ಕಳಚಿ ಬಿದ್ದು ಹೋದ ಕಳಚೆಯ ಜನರಿಗೆ ಈಗ ಜನರೇ ಆಸರೆ. ಅಧಿಕಾರಿಗಳು, ಉಳ್ಳವರು ಇಲ್ಲಿಯ ಜನರಿಗೆ ಧೈರ್ಯ ತುಂಬಿ ಸಹಾಯ ಮಾಡಿ ಮಾನವೀಯತೆ ಮೆರೆಯಲು ಇದು ಸಕಾಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ
ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು !
ವೇತನ ಹೆಚ್ಚಳ ಬೇಡಿಕೆ; ಮಾರ್ಚ್ 24ರ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ