ಸಂತೆಯಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು
Team Udayavani, Apr 27, 2021, 6:59 PM IST
ಮುಂಡಗೋಡ: ಕೋವಿಡ್ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಮತ್ತು ಪ.ಪಂ ಅವರು ಸೋಮವಾರ ಪಪಂ ಪಕ್ಕದಲ್ಲಿ ನಡೆಯುತ್ತಿದ್ದ ಸಂತೆಯನ್ನು ಸ್ಥಳಾಂತರಿಸಿ ಬಯಲು ಪ್ರದೇಶದಲ್ಲಿ ನಡೆಸಿದರೂ ಇದನ್ನು ಲೆಕ್ಕಸದೇ ಗ್ರಾಹಕರು ಸಾಮಾಜಿಕ ಅಂತರ ಇಲ್ಲದೇ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದರು.
ಪಟ್ಟಣದ ಸಂತೆಯಲ್ಲಿ ಜನದಟ್ಟಣೆ ಆಗದಂತೆ ಬಯಲು ಪ್ರದೇಶಕ್ಕೆ ಸಂತೆಯನ್ನು ಸ್ಥಳಾಂತರಗೊಳಿಸಲಾಗಿತ್ತು. ತಹಶೀಲ್ದಾರ್ ಹಾಗೂ ಪಪಂ ಕಟ್ಟುನಿಟ್ಟಿನ ಕ್ರಮಕೈಗೊಂಡು ಸಂತೆ ನಡೆಯುವ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲು ರವಿವಾರ ಪೌರಕಾರ್ಮಿಕರು ಗುರುತಿಸಿದ್ದರು. ಆದರೆ ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ ಹಿನ್ನೆಲೆ ತಹಶೀಲ್ದಾರ್ ಅವರು ಪಪೂ ಕಾಲೇಜ ಆವರಣದಲ್ಲಿ ದಿನಸಿ, ರೋಟರಿ ಶಾಲೆ ಹಿಂದಿನ ಬಯಲು ಪ್ರದೇಶದಲ್ಲಿ ತರಕಾರಿ, ಹಾಗೂ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಹಣ್ಣು ಹೀಗೆ ಮೂರು ಭಾಗವಾಗಿ ವಿಂಗಡಿಸಿ ವ್ಯಾಪಾರ ನಡೆಸಲು ವ್ಯಾಪರಸ್ಥರಿಗೆ ಸೂಚಿಸಿದರು.
ಗ್ರಾಹಕರು ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವ್ಯಾಪಾರ ಮಾಡಲು ಆರಂಭಿಸಿದ್ದರಿಂದ ಜನದಟ್ಟಣೆಯಾಯಿತು. ನಂತರ ತಹಶೀಲ್ದಾರ್ ಶ್ರೀಧರ ಮುಂದಲಮನಿ ಮತ್ತು ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ನಾ ಅವರು ಭೇಟಿ ನೀಡಿ ಪರಿಶೀಲಿಸಿ, ಸಾಮಾಜಿಕ ಅಂತರ ಕಾಯ್ದಕೊಳ್ಳಲು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಸಿ ದಂಡ ಹಾಕಿ ಜನದಟ್ಟಣೆ, ಆಗದಂತೆ ನೋಡಿಕೊಳ್ಳುವಂತೆ ಪಪಂ ಮತ್ತು ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು.
ಇದೇ ವೇಳೆ ತಹಶೀಲ್ದಾರ್ ಮುಂದೆ ಮಹಿಳೆಯೊಬ್ಬಳು ನಾನು ಬಡವಳಾಗಿದ್ದು, ದಿನದ ಖರ್ಚಿಗಾಗಿ ಸಂತೆಯಲ್ಲಿ ಬಾಂಡೆ ಅಂಗಡಿ ಇಟ್ಟ ವ್ಯಾಪಾರ ಮಾಡಲು ಅನುಮತಿ ನೀಡುವಂತೆ ಅಂಗಲಾಚಿದಳು. ತಹಶೀಲ್ದಾರ ಅವರು ಅಸಹಾಯಕತೆಯಿಂದ ಸರ್ಕಾರದ ಆದೇಶ ನಾವು ಪಾಲನೆ ಮಾಡಬೇಕು. ಅಲ್ಲದೇ ನಿಮಗೆ ಒಬ್ಬರಿಗೆ ಅನುಮತಿ ನೀಡಿದರೆ ಬೇರೆಯವರು ಬರುತ್ತಾರೆ ಎಂದು ತಿಳಿ ಹೇಳಿದರು.