ಶತಚಂಡಿಯಾಗ ಸಂಪನ್ನ
Team Udayavani, Jun 17, 2020, 11:31 AM IST
ಯಲ್ಲಾಪುರ: ನಾಯಕನಕೆರೆಯ ಶ್ರೀ ಬಾಲಾತ್ರಿಪುರ ಸುಂದರೀ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕರ ಸಂಕಲ್ಪದಂತೆ ಮಹಾಮಾರಿ ಕೋವಿಡ್ ನಿರ್ಮೂಲನೆಗಾಗಿ ಶಾರದಾಂಬಾ ಸಂಸ್ಕೃತ ಪಾಠಶಾಲೆ ಅಧ್ಯಾಪಕ, ವಿದ್ಯಾರ್ಥಿ-ಮಾಜಿ ವಿದ್ಯಾರ್ಥಿಗಳ ವೃಂದದಿಂದ ಹಮ್ಮಿಕೊಂಡಿದ್ದ ಶತಚಂಡೀಯಾಗ ಕಾರ್ಯಕ್ರಮ ಸಂಪನ್ನಗೊಂಡಿತು.
ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಂಗಳವಾರ ಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಪುರೋಹಿತ ವೇ| ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಮತ್ತು ಅರ್ಚಕ ವೇ| ಗೋಪಾಲಕೃಷ್ಣ ಭಟ್ಟ ನೇತೃತ್ವದಲ್ಲಿ ಸುಮಾರು 25 ವೈದಿಕರ ಉಪಸ್ಥಿತಿಯಲ್ಲಿ ಶತಚಂಡಿಯಾಗ ನೆರವೇರಿತು.
ಲೋಕಕಲ್ಯಾಣಾರ್ಥವಾಗಿ ದೇವಿಯ ಕೃಪೆ ದೊರೆಯುವುದಕ್ಕೆ ಈ ಕಾರ್ಯಕ್ರಮ ಮಾಡಿರುವುದು ಸಮಾಜಕ್ಕೆ ಆದರ್ಶವೆಂದು ಶ್ರೀಗಳು ನುಡಿದರು. ಅಲ್ಲದೇ ಶಾರದಾಂಬೆ ಮತ್ತು ಹನುಮಂತ ದೇವರ ವಿಶೇಷ ವಾರ್ಷಿಕ ಕಾರ್ಯಕ್ರಮ ವೇ| ಕಟ್ಟೆ ಶಂಕರ ಭಟ್ಟ ನೇತೃತ್ವದಲ್ಲಿ ನಡೆಸಲಾಯಿತು.