ಗೋಕರ್ಣದಲ್ಲಿ ಅಘೋಷಿತ ಬಂದ್
Team Udayavani, Mar 22, 2020, 6:29 PM IST
ಗೋಕರ್ಣ: ಕೋವಿಡ್ 19 ವೈರಸ್ ಹರಡುವಿಕೆ ತಡೆಗಟ್ಟಲು ಪ್ರಸಿದ್ಧ ಪ್ರವಾಸೀ ಕೇಂದ್ರ ಹಾಗೂ ಯಾತ್ರಾ ಕ್ಷೇತ್ರ ಗೋಕರ್ಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಗೋಕರ್ಣಕ್ಕೆ ಪ್ರವೇಶಿಸುವ ವಿದೇಶಿ ಪ್ರವಾಸಿಗರನ್ನು ವಾಪಸ್ ಕಳಿಸಲಾಗುತ್ತಿದೆ.
ದೇಶೀಯ ಯಾತ್ರಿಕರಿಗೂ ಸಮಗ್ರ ವಿಚಾರಣೆ ನಡೆಸಿ, ಅಗತ್ಯತೆ, ಅವಶ್ಯಕತೆಗಳು ಮನಗಂಡಲ್ಲಿ ಮಾತ್ರ ಒಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಅನಾವಶ್ಯಕವಾಗಿ ಪ್ರವೇಶ ನೀಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಗೋಕರ್ಣ ಅಘೋಷಿತ ಬಂದ್ಗೆ ತುತ್ತಾ ದಂತಿದೆ. ದೂರದೂರಿನಿಂದ ಬರುವ-ತೆರಳುವ ಬಸ್ಸುಗಳು ಬಂದಾಗಿವೆ. ಖಾಸಗಿ ಒಡೆತನದ ಬಸ್ಗಳ ಸಂಚಾರ ನಿಂತಿದೆ.
ಹೀಗಾಗಿ ಯಾತ್ರಿಕರು, ಪ್ರವಾಸಿಗರಿಲ್ಲದೆ ಗೋಕರ್ಣದ ರಸ್ತೆಗಳು, ರಥಬೀದಿ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಾದ ಕೋಟಿ ತೀರ್ಥ, ಸಮುದ್ರ ದಂಡೆಗಳು ಬಿಕೋ ಎನ್ನುತ್ತಿವೆ. ತರಕಾರಿ ಸಂತೆ ನಡೆಯಲಿಲ್ಲ. ಯಾವುದೇ ಸಭೆ-ಸಮಾರಂಭಗಳು ನಡೆಯದೇ ಜನ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯ ಲಾಡ್ಜ್, ವಸತಿಗೃಹ, ರಿಸಾರ್ಟ್ ಗಳಲ್ಲಿ ಯಾವುದೇ ಕೊಠಡಿಗಳನ್ನು ಬಾಡಿಗೆಗೆ ನೀಡದಂತೆ ಕೊಟ್ಟು ನಿಟ್ಟಾಗಿ ಕಂದಾಯ ಉಪವಿಭಾಗಾಧಿಕಾರಿಗಳು ಆದೇಶ ನೀಡಿದ್ದಾರೆ. ತಹಶೀಲ್ದಾರ್ ಮೇಘರಾಜ ನಾಯ್ಕ ವಸತಿ ಗ್ರಹಗಳನ್ನು ಪರಿಶೀಲಿಸುತ್ತಿದ್ದಾರೆ. ಕಂದಾಯ ಸಿಬ್ಬಂದಿ, ಸ್ಥಳೀಯ ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಜಗದೀಶ ನಾಯ್ಕ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.